ಕೆಆರ್ಎಸ್, ಕಬಿನಿ ಜಲಾಶಯಗಳಿಂದ ಕುಡಿಯಲು ನೀರು, ಗದ್ದೆಗಳಿಗಿಲ್ಲ
ಬೆಂಗಳೂರು, ಆಗಸ್ಟ್ 09 : ನಾಲೆಗಳಿಗೆ ನೀರು ಹರಿಸುವಂತೆ ರೈತರ ಪ್ರತಿಭಟನೆಗೆ ಕೊನೆಗೂ ರಾಜ್ಯ ಸರ್ಕಾರ ಮಣಿದಿದ್ದು, ಕೆಆರ್ ಎಸ್, ಕಬಿನಿ, ಹಾರಂಗಿ ಹೇಮಾವತಿ ಜಲಾಶಯಗಳಿಂದ ಕೆರೆ, ನಾಲೆಗಳಿಗೆ ನೀರು ಹರಿಸಲು ತೀರ್ಮಾನಿಸಿದೆ.
ಕುಡಿಯುವ ನೀರಿಗಾಗಿ, ಜಾನುವಾರುಗಳಿಗೆ ಹಾಗೂ ಅಂತರ್ಜಲದ ಮಟ್ಟ ಹೆಚ್ಚಿಸಲು ನಾಲೆಗಳಿಗೆ ಬುಧವಾರ ಮಧ್ಯರಾತ್ರಿಯಿಂದ ನೀರು ಹರಿಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಜಲಾಶಯಗಳಿಂದ ನೀರು ಹರಿಸುವ ಸಂಬಂಧ ಇಂದು (ಬುಧವಾರ) ನಡೆದ ಸಭೆಯಲ್ಲಿ ಹೇಳಿದರು.
ಕೆರೆ-ಕಟ್ಟೆಗಳಿಗೆ ಹರಿಸಿದ ನೀರನ್ನು ಭತ್ತ ಕಬ್ಬು ಬೆಳೆಯಲು ಬಳಸಬೇಡಿ, ಅದಕ್ಕೆ ನೀರು ಹರಿಸಲು ಸಾಧ್ಯವಾಗುವುದಿಲ್ಲ. ಮಳೆಯ ಆಧಾರಿತ ಬೆಳೆಗಳನ್ನು ಮಾತ್ರ ಬೆಳೆಯುವಂತೆ ರೈತರಲ್ಲಿ ಮನವಿ ಮಾಡಿದರು.
ನಾಲೆಗಳಿಗೆ ನೀರು, 4ನೇ ದಿನಕ್ಕೆ ಕಾಲಿಟ್ಟ ಜೆಡಿಎಸ್ ಪ್ರತಿಭಟನೆ
ಕಬಿನಿ, ಕೆಆರ್ ಎಸ್, ಹಾರಂಗಿ ಹಾಗೂ ಹೇಮಾವತಿ ನಾಲ್ಕು ಜಲಾಶಯಗಳಲ್ಲಿ 45 ಟಿಎಂಸಿ ನೀರಿದ್ದು, ಒಳ ಹರಿವು ಕಡಿಮೆಯಿದೆ. ನಾಲ್ಕೂ ಅಚ್ಚುಕಟ್ಟು ಪ್ರದೇಶದಲ್ಲಿ ಸಾವಿರಾರು ಕೆರೆಗಳಿವೆ. ಎಷ್ಟು ಪ್ರಮಾಣದಲ್ಲಿ ನೀರು ಹರಿಸಬೇಕೆಂದು ಅಧಿಕಾರಿಗಳು ನಿರ್ಧರಿಸಲಿದ್ದಾರೆ. ನೀರು ಬಿಟ್ಟ ಕೂಡಲೇ ಗದ್ದೆಗಳಿಗೆ ಹಾಯಿಸಬಾರದು ಎಂದರು.
ಸಚಿವರಾದ ಎಂ.ಬಿ.ಪಾಟೀಲ, ಕೃಷ್ಣಬೈರೇಗೌಡ, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಪ್ಪ, ಸಂಸದ ಪುಟ್ಟರಾಜು, ಶಾಸಕರಾದ ನರೇಂದ್ರಸ್ವಾಮಿ, ಪುಟ್ಟಣ್ಣಯ್ಯ, ಮರಿತಿಬ್ಬೇಗೌಡ, ಅಂಬರೀಶ್, ಶ್ರೀಕಂಠೇಗೌಡ, ಚಲುವರಾಯಸ್ವಾಮಿ ಸೇರಿದಂತೆ ಇತರೆ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.