ಜಯನಗರದಿಂದ ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾ ರೆಡ್ಡಿ ನಾಮಪತ್ರ
ಬೆಂಗಳೂರು, ಏಪ್ರಿಲ್ 22 : ರವಿಕೃಷ್ಣಾ ರೆಡ್ಡಿ ಅವರು ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಶನಿವಾರ ನಾಮಪತ್ರ ಸಲ್ಲಿಸಿದರು. ಕಾಂಗ್ರೆಸ್ನಿಂದ ಸೌಮ್ಯಾ ರೆಡ್ಡಿ, ಬಿಜೆಪಿಯಿಂದ ವಿಜಯ್ ಕುಮಾರ್, ಜೆಡಿಎಸ್ನಿಂದ ತನ್ವೀರ್ ಅಹಮದ್ ಅಭ್ಯರ್ಥಿಗಳು.
ಶನಿವಾರ ಮಧ್ಯಾಹ್ನ 1.30ಕ್ಕೆ ಜಯನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ರವಿಕೃಷ್ಣಾ ರೆಡ್ಡಿ ನಾಮಪತ್ರವನ್ನು ಸಲ್ಲಿಸಿದರು. ನಾಮಪತ್ರಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿಯವರು ಸೂಚಕರಾಗಿ ಸಹಿ ಹಾಕಿದರು.
ಮಾದರಿ ರಾಜಕಾರಣಕ್ಕೆ ಅಣಿಯಾಗಿರುವ ರವಿಕೃಷ್ಣಾ ರೆಡ್ಡಿ ಸಂದರ್ಶನ
ನಾಮಪತ್ರಕ್ಕೆ ಠೇವಣಿಯಾಗಿ ಶಾಂತವೇರಿ ಗೋಪಾಲಗೌಡರ ಆದರ್ಶದಲ್ಲಿ ಚುನಾವಣಾ ಖರ್ಚು ವೆಚ್ಚಕ್ಕಾಗಿ ನಡೆಸುತ್ತಿರುವ 'ಓಟು ಕೊಡಿ-ನೋಟು ಕೊಡಿ' ಅಭಿಯಾನದ ಮೂಲಕ ಸಂಗ್ರಹಿಸಿದ ಹಣವನ್ನು ಬಳಸಲಾಯಿತು.
ಈ ದೇಣಿಗೆಗೂ ಕೂಡ ಎಚ್.ಎಸ್. ದೊರೆಸ್ವಾಮಿಯವರು ತಮ್ಮ ಕಾಣಿಕೆ ನೀಡಿರುವುದನ್ನು ಈ ಸಂದರ್ಭದಲ್ಲಿ ರವಿಕೃಷ್ಣಾ ರೆಡ್ಡಿ ಅವರು ನೆನಪು ಮಾಡಿಕೊಂಡರು. 500ಕ್ಕೂ ಹೆಚ್ಚು ಕಾರ್ಯಕರ್ತರು ಈ ನಾಮಪತ್ರ ಸಲ್ಲಿಸುವಾಗ ಉಪಸ್ಥಿತರಿದ್ದರು.
ಜಯನಗರ ಕ್ಷೇತ್ರ: ಒಡವೆ ಹೇರಿಕೊಂಡ ನೀರೆ, ಅಲ್ಲಲ್ಲಿ ಹರಿದ ಸೀರೆ
ನಾಮಪತ್ರ ಸಲ್ಲಿಸುವ ಮೊದಲು ಜಯನಗರದ ರಾಗಿಗುಡ್ಡದ ಬಳಿಯಿಂದ ಪಾದಯಾತ್ರೆಯಲ್ಲಿ ಜಯನಗರ ಹಾಗು ನಾಡಿನ ವಿವಿಧ ಭಾಗಗಳಿಂದ ಬಂದಿದ್ದ ಸುಮಾರು 500ಕ್ಕೂ ಹೆಚ್ಚು ಕಾರ್ಯಕರ್ತರು ಚುನಾವಣಾಧಿಕಾರಿಯ ಕಚೇರಿಗೆ ಆಗಮಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರವಿಕೃಷ್ಣಾ ರೆಡ್ಡಿಯವರು, 'ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಅಭ್ಯರ್ಥಿಗಳು ಚುನಾವಣೆಗಳಲ್ಲೇ ಅಕ್ರಮ, ಅನಾಚಾರವೆಸಗಿ, ಆಯ್ಕೆಯಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟು ಭ್ರಷ್ಟಾಚಾರ ಮಾಡಲು ಅಣಿಯಾಗುತ್ತಿದ್ದಾರೆ' ಎಂದರು.
'ಜಯನಗರದಲ್ಲಿ ನಾವು ಒಂದು ಮಾದರಿ ಚುನಾವಣೆಯನ್ನು ಮಾಡುತ್ತಿದ್ದೇವೆ. ಇದು ಕೇವಲ ಒಬ್ಬ ರವಿ ಕೃಷ್ಣಾರೆಡ್ಡಿಯ ಹೋರಾಟವಲ್ಲ, ರಾಜ್ಯದ ಅನೇಕ ಹೋರಾಟಗಾರರ ಮತ್ತು ಸಜ್ಜನರ ಹೋರಾಟವಾಗಿದ್ದು, ಇದು ಅನ್ಯಾಯ, ಅಧರ್ಮದ, ಅಕ್ರಮ, ಅನಾಚಾರಗಳ ವಿರುದ್ಧದ ಹೋರಾಟವಾಗಿದೆ' ಎಂದು ಹೇಳಿದರು.