ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಆಡಳಿತ ಅಂತ್ಯ : ಅನಂತ್ ಕುಮಾರ್
ಬೆಂಗಳೂರು, ಏಪ್ರಿಲ್ 28 : ಇನ್ನು ಕೆಲವೇ ದಿನಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಆಡಳಿತ ಅಂತ್ಯಗೊಳ್ಳಲಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ಕಾಂಗ್ರೆಸ್ಸಿಗೆ ಎಚ್ಚರಿಕೆಯ ಗಂಟೆ ಬಾರಿಸಿದ್ದಾರೆ.
ನಗರದಲ್ಲಿ ಶನಿವಾರ ಬೊಮ್ಮನಹಳ್ಳಿ, ಜಯನಗರ ಹಾಗೂ ಪದ್ಮನಾಭನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು, ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
In Pics:ಬೊಮ್ಮನಹಳ್ಳಿ ಅಭ್ಯರ್ಥಿ ಸತೀಶ್ ರೆಡ್ಡಿ ಪರ ಅನಂತ್ ಕುಮಾರ್ ಮತಯಾಚನೆ
ಸುಳ್ಳು ಹಾಗೂ ಭ್ರಷ್ಟಾಚಾರದ ಆಧಾರದ ಮೇಲೆ ನಿಂತಿರುವ ಕಾಂಗ್ರೆಸ್ ಸರಕಾರ ಚುನಾವಣೆಯಲ್ಲಿ ಸೋಲನ್ನು ಅನುಭವಿಸಲಿದೆ. ಕಾಂಗ್ರೆಸ್ ಸರಕಾರ 40 ವರ್ಷಕ್ಕಿಂತಲೂ ಹೆಚ್ಚು ಕಾಲ ಆಡಳಿತ ನಡೆಸಿದೆ. ದಶಕಗಳ ಕಾಲ ಆಡಳಿತದ ಚುಕ್ಕಾಣಿ ಹಿಡಿದಿದ್ದರೂ ಕೂಡಾ ದೇಶ ಹಾಗೂ ರಾಜ್ಯದ ಅಭಿವೃದ್ದಿಯಾಗಿಲ್ಲದೆ ಇರುವುದು ವಿಪರ್ಯಾಸ ಎಂದರು.
ಸ್ವತಃ ಸಿದ್ದರಾಮಯ್ಯ ಅವರೇ ತಾವು ಕೇವಲ 169 ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿದೆ ಎಂದು ಹೇಳುತ್ತಾರೆ. ಅಂತಹ ಸಮಯದಲ್ಲಿ ಈ ಬಾರಿಯೂ ಸುಳ್ಳು ಭರವಸೆಗಳನ್ನು ನೀಡಲು ಮುಂದಾಗುವ ಮೂಲಕ ಜನರ ಕಣ್ಣಿಗೆ ಮಣ್ಣೆರೆಚುವ ಕಾರ್ಯ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಅಮಿತ್ ಶಾ ಬಂದ ನಂತರ ಬಿಜೆಪಿ ಸ್ಟೈಲೇ ಬೇರೆ: ಸತೀಶ್ ರೆಡ್ಡಿ ಸಂದರ್ಶನ
ದೇಶದ ಚುಕ್ಕಾಣಿ ಹಿಡಿದಿರುವ ಸಮರ್ಥ ನಾಯಕ ನರೇಂದ್ರ ಮೋದಿಯವರ ಬಗ್ಗೆ ರಾಜ್ಯದಲ್ಲಿ ಒಲವು ಹೆಚ್ಚಾಗುತ್ತಿದೆ. ಇದು ಮುಂಬರುವ ರಾಜ್ಯ ಚುನಾವಣೆಯಲ್ಲಿ ಬಿಜೆಪಿಗೆ ವರವಾಗಲಿದ್ದು, ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಜನರು ಆಶೀರ್ವದಿಸಲಿದ್ದಾರೆ ಎಂದರು.
ರಾಜ್ಯದ ಜನರು ಅಭಿವೃದ್ದಿ ಪರ ಒಲವು ಹೊಂದಿದ್ದಾರೆ. ರಾಜ್ಯ ಸರಕಾರದ ವೈಫಲ್ಯಗಳನ್ನು ದಿನನಿತ್ಯ ಜನರ ಮುಂದಿಡುವ ಮೂಲಕ ರಾಜ್ಯದ ಮತದಾರರ ಮನವೊಲಿಸಲಿದ್ದೇವೆ ಎಂದು ಅನಂತ್ ಕುಮಾರ್ ನುಡಿದರು.
ಬೆಂಗಳೂರು : ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪರಿಚಯ
ರಾಜ್ಯದಲ್ಲಿ ಸಮರ್ಥ ಆಡಳಿತದ ಅನಿವಾರ್ಯತೆಯನ್ನು ಜನರು ಮನಗೊಂಡಿದ್ದಾರೆ. ರಾಜ್ಯದ ಹಲವಾರು ಕ್ಷೇತ್ರಗಳಲ್ಲಿ ಸಂಚರಿಸುತ್ತಿದ್ದು ಅಲ್ಲಿನ ಜನರ ಆಶೋತ್ತರಗಳಿಗೆ ಕಿವಿಯಾಗಿದ್ದೇನೆ. ಕಾಂಗ್ರೆಸ್ ಸರಕಾರದ ಐದು ವರ್ಷಗಳ ಆಡಳಿತ ಜನರನ್ನು ಹೈರಾಣಾಗಿಸಿದ್ದು, ಜನರು ಬದಲಾವಣೆ ಬಯಸಿದ್ದಾರೆ ಎಂದರು.
ಬೊಮ್ಮನಹಳ್ಳಿಯಲ್ಲಿ ಸತೀಶ್ ರೆಡ್ಡಿ, ಜಯನಗರದಲ್ಲಿ ಬಿಎನ್ ವಿಜಯ್ ಕುಮಾರ್ ಮತ್ತು ಪದ್ಮನಾಭನಗರದಲ್ಲಿ ಆರ್ ಅಶೋಕ್ ಅವರು ಕಣಕ್ಕಿಳಿದಿದ್ದಾರೆ. ಮೂವರೂ ಹಾಲಿ ಶಾಸಕರಾಗಿದ್ದು, ಮತ್ತೆ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.
ಸಾವಿರಾರು ಕಾರ್ಯಕರ್ತರು ಹಾಗೂ ಬಿಜೆಪಿ ಅಭ್ಯರ್ಥಿಗಳ ಬೆಂಬಲಿಗರ ಜೊತೆಯಲ್ಲಿ ಬಿರುಸಿನ ಪ್ರಚಾರ ಕೈಗೊಂಡರು. ಬೆಳಿಗ್ಗೆ 10 ಗಂಟೆಗೆ ಪ್ರಾರಂಭಿಸಿದ ಪ್ರಚಾರ ಕಾರ್ಯ ಮೂರು ಕ್ಷೇತ್ರಗಳಲ್ಲೂ ಮುಂದುವರೆದು ಸಂಜೆ ಸಮಾಪ್ತಿಯಾಯಿತು. ಭಾನುವಾರ ಬೆಂಗಳೂರು ಹಾಗೂ ದೊಡ್ಡಬಳ್ಳಾಪುರದಲ್ಲಿ ಅನಂತ್ ಕುಮಾರ್ ಅವರು ಪ್ರಚಾರ ಕೈಗೊಳ್ಳಲಿದ್ದಾರೆ.