2023ರ ಚುನಾವಣೆಗೆ KRS ಪಕ್ಷದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಬೆಂಗಳೂರು, ಡಿಸೆಂಬರ್ 21: ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ 2023 ವಿಧಾನಸಭಾ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಕೆ ಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಿಸಿ, ಅವರನ್ನು ಅಭಿನಂದಿಸಿದರು.
ವಿವಿಧ ಕ್ಷೇತ್ರಗಳಿಗೆ 50 ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು (ಕೆಆರ್ಎಸ್) ಸೋಮವಾರ ಬಿಡುಗಡೆ ಮಾಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿ, ಜಿಲ್ಲಾ ಪ್ರವಾಸ ಕೈಗೊಂಡಿದೆ.
ಪ್ರೆಸ್ಕ್ಲಬ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ, ''ಪಕ್ಷದ ಕಚೇರಿಯಲ್ಲಿ ಡಿಸೆಂಬರ್ 12ರವರೆಗೆ ಆಕಾಂಕ್ಷಿಗಳ ಸಂದರ್ಶನ ನಡೆಸಿದ್ದೇವೆ. 123 ಮಂದಿ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 70 ಮಂದಿ ಸಂದರ್ಶನಕ್ಕೆ ಹಾಜರಾಗಿದ್ದರು. ಮೊದಲ ಹಂತದಲ್ಲಿ 50 ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ,'' ಎಂದರು.
''ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಜಾತಿ ಓಲೈಕೆ ಹಾಗೂ ಕುಟುಂಬ ರಾಜಕಾರಣಕ್ಕೆ ಜೋತು ಬಿದ್ದಿವೆ. ಇದಕ್ಕೆ ಪ್ರತಿಯಾಗಿ ಪ್ರಾಮಾಣಿಕ, ಜನಪರ ರಾಜಕಾರಣದಲ್ಲಿ ಸಕ್ರಿಯರಾಗುವ ಹಾಗೂ ಹಣ, ಮದ್ಯದಂತಹ ಆಮಿಷ ಒಡ್ಡದೆಯೇ ಚುನಾವಣೆಯಲ್ಲಿ ಸ್ಪರ್ಧಿಸಲು ಈ ಅಭ್ಯರ್ಥಿಗಳನ್ನು ಸಜ್ಜುಗೊಳಿಸುತ್ತೇವೆ. ಇದೇ ಕಾರಣಕ್ಕೆ ಸಾಕಷ್ಟು ಮುಂಚಿತವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದೇವೆ,'' ಎಂದು ಹೇಳಿದರು.
ಬೆಂಗಳೂರು ಹಾಗೂ ಆಸುಪಾಸಿನ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳು: ಆರೋಗ್ಯ ಸ್ವಾಮಿ ಚಿನ್ನಪ್ಪ (ಕ್ಷೇತ್ರ-ಕೆ.ಆರ್.ಪುರ), ಎಲ್.ಜೀವನ್ (ಬಸವನಗುಡಿ), ರಘುಪತಿ ಭಟ್ (ಜಯನಗರ), ಶಿವನಂಜೇಗೌಡ (ಬೆಂಗಳೂರು ದಕ್ಷಿಣ), ಅನುರಾಜ್ (ಆನೇಕಲ್), ಸೊಣ್ಣಪ್ಪ ಗೌಡ (ಹೊಸಕೋಟೆ), ಶಿವಕುಮಾರ್ (ರಾಮನಗರ).
ಸ್ಪರ್ಧಾಕಾಂಕ್ಷಿಗಳ ಸಂದರ್ಶನ, ಆಯ್ಕೆ:
ಡಿಸೆಂಬರ್ 4, 5, 11 ಮತ್ತು 12ನೇ ತಾರೀಕಿನಂದು ಸ್ಪರ್ಧಾಕಾಂಕ್ಷಿಗಳ ಸಂದರ್ಶನವನ್ನು ಪಕ್ಷದ ರಾಜ್ಯ ಸಮಿತಿಯ ಪದಾಧಿಕಾರಿಗಳು ನಡೆಸಿದ್ದರು. ಒಟ್ಟು 123 ಆಕಾಂಕ್ಷಿಗಳು ಈ ಸಂದರ್ಶನದಲ್ಲಿ ಭಾಗಿಯಾಗಲು ಅರ್ಜಿ ಸಲ್ಲಿಸಿದ್ದು, ಅವರಲ್ಲಿ 70 ಆಕಾಂಕ್ಷಿಗಳು ಸಂದರ್ಶನಕ್ಕೆ ಹಾಜರಾಗಿದ್ದರು. ಈ ಪ್ರಕ್ರಿಯೆಯಲ್ಲಿ ಪ್ರಾದೇಶಿಕ, ಪ್ರಾಮಾಣಿಕ ಮತ್ತು ಜನಪರ ರಾಜಕಾರಣದಲ್ಲಿ ದೃಢವಾದ ನಂಬಿಕೆ ಇಟ್ಟು, ಕೆ.ಆರ್.ಎಸ್ ಪಕ್ಷದ ತತ್ವ, ನೀತಿ ಮತ್ತು ನಿಯಮಗಳ ಅಡಿಯಲ್ಲಿ ಜನಪರವಾಗಿ ಕೆಲಸ ಮಾಡುವ ಹಿನ್ನೆಲೆ ಮತ್ತು ಮನಸ್ಥಿತಿಯ 50 ಸಂಭಾವ್ಯ ಅಭ್ಯರ್ಥಿಗಳು ಮೊದಲ ಹಂತದಲ್ಲಿ ಆಯ್ಕೆಯಾಗಿದ್ದು, ಅದರಲ್ಲಿ ಸುಮಾರು 34 ಅಭ್ಯರ್ಥಿಗಳ ಪ್ರಥಮ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಯಿತು. ಉಳಿದ ಕ್ಷೇತ್ರಗಳಿಗೂ ಇದೇ ರೀತಿಯ ಪ್ರಕ್ರಿಯೆಯನ್ನು ಹಮ್ಮಿಕೊಂಡು ಸಂಭಾವ್ಯ ಅಭ್ಯರ್ಥಿಗಳನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡುತ್ತ ಹೋಗಲಾಗುವುದು.
ಕಳೆದ ಎರಡು ಮೂರು ದಶಕಗಳಿಂದ ರಾಜ್ಯದ ರಾಜಕೀಯ ಮತ್ತು ಸಾಮಾಜಿಕ ಜೀವನವನ್ನು ಹಾಳು ಮಾಡಿರುವ ಮತ್ತು ವಿಕೃತಗೊಳಿಸಿರುವ ಭ್ರಷ್ಟ J.C.B ಪಕ್ಷಗಳಿಗೆ 2023ರ ವಿಧಾನಸಭಾ ಚುನಾವಣೆಯಲ್ಲಿ ಸಶಕ್ತ ಮತ್ತು ಪ್ರಬಲ ಪರ್ಯಾಯವನ್ನು ಕಟ್ಟುವ ನಿಟ್ಟಿನಲ್ಲಿ KRS ಪಕ್ಷ ದೃಢ ಸಂಕಲ್ಪದಿಂದ ಹೆಜ್ಜೆ ಇಡುತ್ತಿದೆ ಮತ್ತು ಇಂದಿನ ಕಾಯಕ್ರಮ ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ.
ಇದೇ ಸಮಯದಲ್ಲಿ, J.C.B.ಯೇತರ ಸಮಾನಮನಸ್ಕ ಪಕ್ಷಗಳ ಜೊತೆ ಸೇರಿ ಕೆಲಸ ಮಾಡುವ ಮತ್ತು ಜೊತೆಗೂಡಿ ಪರ್ಯಾಯವನ್ನು ಕಟ್ಟುವ ಕೆಲಸವನ್ನೂ ಸಹ ಪಕ್ಷ ಮುಂದುವರೆಸುತ್ತದೆ. ಈ ನಿಟ್ಟಿನಲ್ಲಿ ಮುಂದಿನ ಜನವರಿ ತಿಂಗಳಿನಲ್ಲಿ ಸಮಾನಮನಸ್ಕ ಪಕ್ಷ ಮತ್ತು ಸಂಘಟನೆಗಳ ಜೊತೆಗೆ ದುಂಡು ಮೇಜಿನ ಸಭೆಯನ್ನು ಆಯೋಜಿಸಲು ಸಿದ್ಧತೆ ನಡೆದಿದೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ತಿಳಿಸಿದರು.
Recommended Video