ಸಿಎಂ ಯಡಿಯೂರಪ್ಪ ಅಪ್ರತಿಮ ತಂತ್ರಗಾರಿಕೆಗೆ ಇಬ್ಬರು ಸಚಿವರು ಕುಂತಲ್ಲೇ 'ಥಂಡಾ'
Recommended Video
ಕಗ್ಗಂಟಾಗಿ ಪರಿಣಮಿಸಿದ್ದ ಜಿಲ್ಲಾ ಉಸ್ತುವಾರಿ ನೇಮಕವನ್ನು, ಯಡಿಯೂರಪ್ಪ ತಮ್ಮ ರಾಜಕೀಯ ಅನುಭವವನ್ನೆಲ್ಲಾ ಉಪಯೋಗಿಸಿ, ಯಾವುದೇ ಭಿನ್ನಮತವಿಲ್ಲದೇ ಬಗೆಹರಿಸಿದ್ದಾರೆ.
ಉಸ್ತುವಾರಿ ನೇಮಕ ವಿಳಂಬಕ್ಕೆ ಕಾರಣ, ಒಂದು ಜಿಲ್ಲೆಯ ಉಸ್ತುವಾರಿಯ ವಿಚಾರವನ್ನು ಇಬ್ಬರು ಸಚಿವರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು. ಹಾಗಾಗಿ, ಅಳೆದುತೂಗಿ ಪ್ರಬುದ್ದ ನಿರ್ಣಯಕ್ಕೆ ಯಡಿಯೂರಪ್ಪ ಬರಬೇಕಾಗಿತ್ತು.
ಸೋಮವಾರ (ಸೆ 16) ಸಂಜೆ, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿಯನ್ನು ನೇಮಿಸಿ, ಮುಖ್ಯಮಂತ್ರಿಗಳು ಆದೇಶ ಹೊರಡಿಸಿದ್ದಾರೆ. ಹಲವು ಸಚಿವರುಗಳಿಗೆ ಹೆಚ್ಚುವರಿ ಜಿಲ್ಲೆಗಳ ಉಸ್ತುವಾರಿಯನ್ನು ನೀಡಲಾಗಿದೆ.
ಯಡಿಯೂರಪ್ಪ ಎಡವಿ ಬೀಳುವ ಮುನ್ನ ಹೀಗೊಂದು ಕಿವಿಮಾತು...
ಉಸ್ತುವಾರಿ ನೇಮಕದ ವಿಚಾರದಲ್ಲಿ ಹಲವು ಸಚಿವರುಗಳಲ್ಲಿ ಅಸಮಾಧಾನವಿತ್ತು, ಈಗಲೂ ಇದೆ. ಆದರೆ, ಯಡಿಯೂರಪ್ಪನವರಿಗೆ ಕಗ್ಗಂಟಾಗಿ ಪರಿಣಮಿಸಿದ್ದು ಪ್ರತಿಷ್ಠೆಯ ಬೆಂಗಳೂರು ನಗರ ಉಸ್ತುವಾರಿ. ಇದರ ಮೇಲೆ, ಇಬ್ಬರು ಪ್ರಭಾವೀ ಸಚಿವರು ಕಣ್ಣಿಟ್ಟಿದ್ದರಿಂದ, ಸಿಎಂ, ಸಾವಧಾನದಿಂದ ಇದನ್ನು ಬಗೆಹರಿಸಬೇಕಾಗಿತ್ತು.
ಕಳೆದ ಬಿಜೆಪಿ ಸರಕಾರ
ಕಳೆದ ಬಿಜೆಪಿ ಸರಕಾರದಲ್ಲಿ ಯಾವ ಹಿಡಿತವನ್ನು ಕೆಲವು ಹಿರಿಯ ಬಿಜೆಪಿ ಶಾಸಕರು ಹೊಂದಿದ್ದರೋ, ಈಗಿನ ಪರಿಸ್ಥಿತಿಯಲ್ಲಿ ಅದು ಇಲ್ಲ. ಶೆಟ್ಟರ್, ಈಶ್ವರಪ್ಪ, ಲಿಂಬಾವಳಿ, ರಾಮುಲು, ಅಶೋಕ್ ಗೆ ಒಂದು ರೀತಿಯಲ್ಲಿ ಡಿಪ್ರಮೋಟ್ ಆಗಿದೆ ಎಂದೇ ಹೇಳಬಹುದು. ಆದರೆ, ಅವರುಗಳು ಇದನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಿಲ್ಲ.
ಸರಕಾರದ ದೈನಂದಿನ ಚಟುವಟಿಕೆ
ಸರಕಾರದ ದೈನಂದಿನ ಚಟುವಟಿಕೆಗಳಿಗೆ ಪ್ರಮುಖವಾಗಿರುವ ಜಿಲ್ಲಾ ಉಸ್ತುವಾರಿ ನೇಮಕ ಸಿಎಂ ಯಡಿಯೂರಪ್ಪನವರಿಗೆ ಕಗ್ಗಂಟಾಗಿ ಪರಿಣಮಿಸಿತ್ತು. ಬೇರೆ ಜಿಲ್ಲೆಗಳಿಗೆ ಉಸ್ತುವಾರಿಯನ್ನು ಅಂತಿಮ ಮಾಡಿದ್ದರು. ಆದರೆ, ಬೆಂಗಳೂರು ನಗರದ್ದೇ ಸಮಸ್ಯೆಯಾಗಿತ್ತು. ಯಾಕೆಂದರೆ, ಒಂದೇ ಸಮುದಾಯದ ಇಬ್ಬರು, ಆ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು.
ಆರ್.ಅಶೋಕ್ಗೆ ಸತತ ನಿರಾಸೆ ನೀಡುತ್ತಿರುವ ಬಿಜೆಪಿ ಹೈಕಮಾಂಡ್
ಡಿಸಿಎಂ ಜೊತೆ ಆಯಕಟ್ಟಿನ ಸ್ಥಾನವನ್ನು ಅಲಂಕರಿಸಿದ್ದ ಆರ್ ಅಶೋಕ್
ಕಳೆದ ಬಿಜೆಪಿ ಸರಕಾರದಲ್ಲಿ ಡಿಸಿಎಂ ಜೊತೆ ಆಯಕಟ್ಟಿನ ಸ್ಥಾನವನ್ನು ಅಲಂಕರಿಸಿದ್ದ ಆರ್ ಅಶೋಕ್, ಮತ್ತದೇ ಸ್ಥಾನದ ನಿರೀಕ್ಷೆಯಲ್ಲಿದ್ದರು. ಆದರೆ, ಆಗಿದ್ದೇ ಬೇರೆ. ಮೂಲಗಳ ಪ್ರಕಾರ, ಅದು ಅವರ ಸ್ವಯಂಕೃತ ಅಪರಾಧ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿರುವವರು ಅಮಿತ್ ಶಾ ಅವರ ಕಾರ್ಯಶೈಲಿ.
ಬೆಂಗಳೂರು ನಗರ ಉಸ್ತುವಾರಿಯನ್ನು ಬಯಸಿದ್ದ ಅಶೋಕ್
ತಾನು ಬಯಸಿದ್ದು ಸಿಗದೇ ಇದ್ದಾಗ, ಅಶೋಕ್, ಬೆಂಗಳೂರು ನಗರ ಉಸ್ತುವಾರಿಯನ್ನು ಬಯಸಿದ್ದರು. ಆದರೆ, ಯಡಿಯೂರಪ್ಪ ನೇತೃತ್ವದ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕಾದರೆ, ಇನ್ನೊಬ್ಬರು ಒಕ್ಕಲಿಗ ಸಮುದಾಯದ ನಾಯಕನ ಕೊಡುಗೆ ಕಮ್ಮಿಯೇನೂ ಇರಲಿಲ್ಲ. ಜೊತೆಗೆ, ದೆಹಲಿ ಮಟ್ಟದಲ್ಲಿ ತುಂಬಾ ಪ್ರಭಾವಿ ನಾಯಕರು ಇವರು ಬೇರೆ..
ಡಾ. ಅಶ್ವಥ್ ನಾರಾಯಣ್
ಬೆಂಗಳೂರು ನಗರ ವ್ಯಾಪ್ತಿಯ ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಡಾ. ಅಶ್ವಥ್ ನಾರಾಯಣ್ ಕೂಡಾ, ಬೆಂಗಳೂರು ನಗರ ಉಸ್ತುವಾರಿಯ ಮೇಲೆ ಲಾಬಿ ನಡೆಸಿದ್ದರು ಎನ್ನುವ ಮಾಹಿತಿಯಿದೆ. ಅಶೋಕ್, ಅಶ್ವಥ್ ನಾರಾಯಣ್, ಇಬ್ಬರೂ ಒಕ್ಕಲಿಗ ಸಮುದಾಯದವರು. ಬಿಎಸ್ವೈ ಇದಕ್ಕೆ ಮಾಸ್ಟರ್ ಪ್ಲಾನ್ ಮಾಡಿದರು..
ಸಂಭಾವ್ಯ ಭಿನ್ನಮತವನ್ನು ಬಿಎಸ್ವೈ ಅಲ್ಲೇ ಥಂಡಾ ಮಾಡಿದ್ದಾರೆ
ಎಲ್ಲಾ ಜಿಲ್ಲೆಗಳ ಉಸ್ತುವಾರಿಯನ್ನು ಹಂಚಿ, ಬೆಂಗಳೂರು ನಗರವನ್ನು ತನ್ನಲ್ಲೇ ಮುಖ್ಯಮಂತ್ರಿಗಳು ಇಟ್ಟುಕೊಂಡರು. ಅಶೋಕ್ ಗೆ, ಬೆಂಗಳೂರು ಗ್ರಾಮಾಂತರ, ಮಂಡ್ಯ ಪ್ರಭಾರಿಯಾಗಿ ನೇಮಿಸಲಾಯಿತು. ಇನ್ನು, ಅಶ್ವಥ್ ನಾರಾಯಣ್ ಗೆ ರಾಮನಗರ, ಚಿಕ್ಕಬಳ್ಳಾಪುರಕ್ಕೆ ನೇಮಿಸಿದ್ದರು. ಆ ಮೂಲಕ, ಸಂಭಾವ್ಯ ಭಿನ್ನಮತವನ್ನು ಬಿಎಸ್ವೈ ಅಲ್ಲೇ ಥಂಡಾ ಮಾಡಿದ್ದಾರೆ. ಇಬ್ಬರೂ, ಸಿಎಂ ಸುಪರ್ದಿಯಲ್ಲೇ ಬೆಂಗಳೂರು ಉಸ್ತುವಾರಿ ಇರುವುದನ್ನು ಸ್ವಾಗತಿಸಿದ್ದಾರೆ ಕೂಡಾ..