ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಕರ್ನಾಟಕ ಡಿಆರ್ ಎಫ್ಒ ಸಭೆ
ಬೆಂಗಳೂರು, ಜೂನ್ 29: ಇತ್ತೀಚೆಗೆ ಕರ್ನಾಟಕ ರಾಜ್ಯ ಉಪ ವಲಯ ಅರಣ್ಯ ಅಧಿಕಾರಿಗಳ ಕೇಂದ್ರ ಸಂಘ, ವಿಭಾಗ ಸಂಘ ಹಾಗೂ ವೃತ್ತ ಸಂಘಗಳ ಪದಾಧಿಕಾರಿಗಳು ಸಭೆ ನಡೆಸಿದ್ದು, ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳ ಮುಂದೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದಾರೆ.
ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಅರಣ್ಯ ಪಡೆ ಮುಖ್ಯಸ್ಥರಿಗೆ ಈ ಕುರಿತು ಪತ್ರವನ್ನೂ ಬರೆಯಲಾಗಿದೆ. ಉಪ ವಲಯ ಅರಣ್ಯ ಅಧಿಕಾರಿ ವೃಂದಕ್ಕೆ ವೇತನ ಶ್ರೇಣಿಯನ್ನು ಪರಿಷ್ಕರಣೆ ಮಾಡಬೇಕು. ಅಧಿಕಾರಿಗಳ ಜವಾಬ್ದಾರಿಯನ್ನು ಹೆಚ್ಚಿಗೆ ಮಾಡಲಾಗಿದೆ. ಆದರೆ ವೇತನ ಪರಿಷ್ಕರಣೆ ಮಾತ್ರ ಮಾಡಿಲ್ಲ. ವಿಜ್ಞಾನ ಪದವಿ ವಿದ್ಯಾರ್ಹತೆಯ ಉಪ ವಲಯ ಅರಣ್ಯ ಅಧಿಕಾರಿಗಳಿಗೆ ವಾಹನ ಚಾಲಕರ ವೇತನ ನಿಗದಿ ಮಾಡಲಾಗಿದೆ. ಈ ಬಗ್ಗೆ ಸಂಘ ಹಲವು ಬಾರಿ ಮನವಿ ಮಾಡಿ ವೇತನ ಪರಿಷ್ಕರಣೆಗೆ ವಿನಂತಿಸಿದರೂ ಸಾಧ್ಯವಾಗಿಲ್ಲ. ಜುಲೈ 30ರ ಒಳಗೆ ಪರಿಷ್ಕರಣೆ ಕುರಿತು ತೀರ್ಮಾನಿಸಬೇಕು ಎಂದು ಬೇಡಿಕೆ ಸಲ್ಲಿಸಿದೆ. ಇಲ್ಲದಿದ್ದಲ್ಲಿ ಪರಿಷ್ಕರಣೆ ಮಾಡುವವರೆಗೂ ಉಪ ವಲಯ ಅರಣ್ಯ ಅಧಿಕಾರಿ ವೃಂದ ಸಾಮೂಹಿಕ ರಜೆ ಹಾಕಿ ಕೂರುವ ನಿರ್ಧಾರವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
ಇಮ್ರಾನ್ ಖಾನ್ ಗೆ ಹಾವಿನ ಚರ್ಮದ ಪಾದರಕ್ಷೆ ಉಡುಗೊರೆಗೆ ತಯಾರಿ, ದಂಡ ಜಡಿದ ಅಧಿಕಾರಿಗಳು
ಹಾಗೆಯೇ, ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗಳಿಗೆ ಇರುವ ವಿವಿಧ ಭತ್ಯೆಗಳನ್ನು ಸಮಾನವಾದ ಇತರೆ ಇಲಾಖೆಗಳ ಸಮಾನಾಂತರ ಹುದ್ದೆಗಳಿಗೆ ಪರಿಷ್ಕರಣೆ ಮಾಡುವ ಬಗ್ಗೆಯೂ ಚರ್ಚಿಸಲಾಯಿತು. ಪೊಲೀಸ್ ಇಲಾಖೆಗೆ ಇರುವ ಭತ್ಯೆ, ರಜಾ ಸೌಲಭ್ಯಗಳನ್ನು ಅರಣ್ಯ ಇಲಾಖೆಯ ಮುಂಚೂಣಿ ಸಿಬ್ಬಂದಿಗಳಿಗೆ ನೀಡುವ ಬಗ್ಗೆ ಸಂಬಂಧಿಸಿದವರಿಗೆ ಒತ್ತಾಯಿಸಲು ಸಭೆಯು ತೀರ್ಮಾನಿಸಿತು.
ಇಲಾಖೆಯ ಹಲವು ವೃಂದಗಳಲ್ಲಿ ಪದೋನ್ನತಿ ಪ್ರಕ್ರಿಯೆ ಚಲಾವಣೆಯಲ್ಲಿ ಇದೆ. ಆದರೆ ಉಪ ವಲಯ ಅರಣ್ಯ ಅಧಿಕಾರಿ ವೃಂದದಿಂದ ವಲಯ ಅರಣ್ಯ ಅಧಿಕಾರಿ ವೃಂದಕ್ಕೆ ಪದೋನ್ನತಿ ಪ್ರಕ್ರಿಯೆ ಸ್ಥಗಿತಗೊಂಡಿದೆ. ಆದ್ದರಿಂದ ಜೇಷ್ಠತೆಯನ್ನು ಕಾನೂನಿನ ಅಡಿಯಲ್ಲಿ ಎರಡು ತಿಂಗಳು ಒಳಗಾಗಿ ಪೂರ್ಣಗೊಳಿಸಿ ಪದೋನ್ನತಿ ಪ್ರಕ್ರಿಯೆ ಆರಂಭಿಸಲು ಸಂಘ ವಿನಂತಿಸಿದೆ. 1-1-2002ರ ನಂತರ ಹೊಸದಾಗಿ 5 ವೃತ್ತಗಳು ಸೃಜನೆಗೊಂಡಿವೆ. ಐದೂ ವೃತ್ತಗಳಲ್ಲಿ ವಿಭಿನ್ನ ರೀತಿಯಲ್ಲಿ ಜೇಷ್ಠತೆ ಮಾಡುತ್ತಿದ್ದು, ಈ ಬಗ್ಗೆ ಐದೂ ವೃತ್ತಗಳಿಗೆ ಒಂದೇ ಮಾದರಿಯ ಸೂಕ್ತ ನಿರ್ದೇಶನ ನೀಡಲು ಕೇಳಿಕೊಂಡಿದೆ. ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಸ್ಥಳೀಯ ಹಾಗೂ ಸ್ಥಳೀಯೇತರ ವೃಂದಗಳ ಅನುಪಾತ 80:20 ಅನುಸರಿಸಬೇಕು. ಆದರೆ ಇದನ್ನು ಪಾಲಿಸುತ್ತಿಲ್ಲ. ಈ ಬಗ್ಗೆ ಸೂಕ್ತ ನಿರ್ದೇಶನವನ್ನು ಕೇಂದ್ರ ಕಚೇರಿಯಿಂದ ನೀಡಲು ಆಗ್ರಹಿಸಿದೆ.
ಉಪ ವಲಯ ಅರಣ್ಯ ಅಧಿಕಾರಿ ವೃಂದದ ಜೇಷ್ಠತೆಯನ್ನು ರಾಜ್ಯ ಮಟ್ಟದಲ್ಲಿ ಮಾಡಲು ವೃಂದ ಮತ್ತು ನೇಮಕಾತಿ ನಿಯಮ 10ಕ್ಕೆ ತಿದ್ದುಪಡಿ ತರುವ ಬೇಡಿಕೆಯನ್ನೂ ಮುಂದಿಟ್ಟಿದೆ.