ಸರೋಜಿನಿ ಮಹಿಷಿ ವರದಿ ಜಾರಿ ಮಾಡಲು ಬಿಜೆಪಿ ಸರ್ಕಾರ ಬದ್ಧ
ಬೆಂಗಳೂರು, ಡಿಸೆಂಬರ್ 16: ಕರ್ನಾಟಕಕ್ಕೆ ಕನ್ನಡಿಗರಿಗೆ ಗಗನ ಕುಸುಮವಾಗಿರುವ ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲು ನೀಡಬೇಕು ಎಂದು ಹೇಳುವ "ಸರೋಜಿನಿ ಮಹಿಷಿ ವರದಿ' ಜಾರಿಗೆ ಯಡಿಯೂರಪ್ಪ ಸರ್ಕಾರವಾದರೂ ಮನಸ್ಸು ಮಾಡುತ್ತಾ ಎಂಬುದು ಈಗ ಎದ್ದಿರುವ ಪ್ರಶ್ನೆ. ವರದಿ ಜಾರಿ ಮಾಡುವಂತೆ ಆಗ್ರಹಿಸಿ ವಿವಿಧ ಕನ್ನಡಪರ ಸಂಘಟನೆಗಳು ಬೆಂಗಳೂರಿನ ಸ್ವಾತಂತ್ರ ಉದ್ಯಾನದಲ್ಲಿ ಕಳೆದ ಒಂದು ವಾರದಿಂದ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತಿವೆ.
ಸೋಮವಾರ ಉಪಮುಖ್ಯಮಂತ್ರಿ ಡಾ. ಸಿ ಎನ್ ಅಶ್ವತ್ಥನಾರಾಯಣ ಅವರು, ಧರಣಿ ನಿರತರನ್ನು ಭೇಟಿಯಾಗಿ ಅಹವಾಲು ಆಲಿಸಿದರು. ಈ ವೇಳೆ ಮಾತನಾಡಿದ ಅವರು, "ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ನಮ್ಮ ಸರ್ಕಾರ ಎಲ್ಲ ಅಗತ್ಯ ಕ್ರಮ ಕೈಗೊಂಡು ಶೀಘ್ರದಲ್ಲೇ ಪರಿಣಾಮಕಾರಿ ಪರಿಹಾರ ಒದಗಿಸಲಿದೆ ಎಂದರು. ವರದಿಯಂತೆ ಸಿ ಮತ್ತು ಡಿ ದರ್ಜೆಯಲ್ಲಿ ಕನ್ನಡಿಗರಿಗೆ 80% ಉದ್ಯೋಗ ಮೀಸಲು ಕಡ್ಡಾಯ. ಆದರೆ, ಎ ಮತ್ತು ಬಿ ದರ್ಜೆಯಲ್ಲಿ ಇದನ್ನು ಕಡ್ಡಾಯ ಮಾಡುವುದು ಸವಾಲಿನ ವಿಷಯ. ಆದರೆ, ನಾಡಿನ ಜನರಿಗೆ ಉದ್ಯೋಗ ದೊರೆತು, ಬದುಕು ಕಟ್ಟಿಕೊಳ್ಳಲೇಬೇಕು' ಎಂದು ಅವರು ಹೇಳಿದರು.
ಮಾಡೇ ಮಾಡುತ್ತೇವೆ; ಡಿಸಿಎಂ ಅಶ್ವಥ್ ನಾರಾಯಣ
"ಪ್ರತಿ ಕುಟುಂಬಕ್ಕೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿಯಾಗಿದ್ದು ಇದಕ್ಕೆ ನಾವು ಬದ್ಧ. ಬದಲಾಗುತ್ತಿರುವ ವಾತಾವಾರಣದಲ್ಲಿ ನಾಡಿನ ಆರ್ಥಿಕತೆಗೆ ಶಕ್ತಿ ತುಂಬಿ, ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರದ ಉದ್ದೇಶ. ವ್ಯಾಪಾರ, ವ್ಯವಹಾರದಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ. ಜಾಗತಿಕರಣ ಹಾಗೂ ಆರ್ಥಿಕ ಹಿಂಜರಿತ ಮುಂತಾದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಕಂಡುಕೊಳ್ಳಲು ಸಜ್ಜಾಗಿದ್ದೇವೆ. ಉನ್ನತ ಶಿಕ್ಷಣ ಸಚಿವನಾಗಿ, ಜನಪ್ರತಿನಿಧಿಯಾಗಿ ಮುಖ್ಯವಾಗಿ ಕನ್ನಡಿಗನಾಗಿ ಭುವನೇಶ್ವರಿ ತಾಯಿಯ ಮಕ್ಕಳಿಗೆ ಒಳ್ಳೆಯ ಸ್ಥಾನಮಾನ ಕೊಡಿಸುವ ಅವಕಾಶ ಒದಗಿದೆ. ಮಹಿಷಿ ವರದಿ ಜಾರಿ ಮಾಡುವ ಕೆಲಸವನ್ನು ನಾನು ಮಾಡೇ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ: ಶೀಘ್ರವೇ ಸಿಹಿ ಸುದ್ದಿ
ಮತ್ತೇನಂದ್ರು ಡಿಸಿಎಂ?
"ಉದ್ಯೋಗಾಕಾಂಕ್ಷಿಗಳ ಕೌಶಲ್ಯ ಹೆಚ್ಚಿಸಲು ಎಲ್ಲ ಖಾಸಗಿ ಏಜೆನ್ಸಿಗಳನ್ನು ಒಂದೇ ವೇದಿಕೆಗೆ ತಂದು ಏಕ ಗವಾಕ್ಷಿ ಯೋಜನೆಯಡಿ ಉದ್ಯೋಗ ಕೌಶಲ್ಯ ಕಲಿಸಲು ಸರ್ಕಾರ ಕಾರ್ಯ ಪ್ರವೃತ್ತವಾಗಿದೆ. ಈ ಮೂಲಕ ಉದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಇದೇ ದಾರಿಯಲ್ಲಿ ಶಿಕ್ಷಣ ಸಂಸ್ಥೆಗಳು ಸಹ ವಿದ್ಯಾರ್ಥಿಗಳಿಗೆ ಅವರ ಮುಂದಿನ ಉದ್ಯೋಗಕ್ಕೆ ಪೂರಕವಾದ ಕೌಶಲ್ಯ ಕಲಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಎಲ್ಲಿ , ಯಾವ ರೀತಿಯ ಉದ್ಯೋಗ ಇದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಹಾಗಾಗಿ ಈ ವೇದಿಕೆಯನ್ನು ತರಲಾಗಿದೆ ಎಂದರು. ಉದ್ಯೋಗಕ್ಕೆ ಬೇಕಿರುವ ಎಲ್ಲ ಕೌಶಲ್ಯವನ್ನು ಕಲಿಕೆ ವೇಳೆಯಲ್ಲೇ ಕಲಿಸುವ ನಿಟ್ಟಿನಲ್ಲಿ ಪ್ರಯತ್ನಗಳಾಗುತ್ತಿವೆ. ಈ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ಕಂಪನಿಗಳ ಜತೆ ಸಂಬಂಧ ಬೆಸೆಯಲಾಗುತ್ತಿದೆ. ಓದು ಮುಗಿದ ನಂತರ ಕೆಲಸ ಹುಡುಕುವ ಬದಲಿಗೆ ಕಲಿಕೆ ವೇಳೆಯಲ್ಲಿ ಉದ್ಯೋಗಾವಕಾಶ ಪಡೆಯಬಹುದು ಎಂದು ವಿವರಿಸಿದರು. ಎಲ್ಲಿಂದಲೋ ಬಂದವರು ಇಲ್ಲಿ ಕೆಲಸ ಗಿಟ್ಟಿಸಿಕಳ್ಳುತ್ತಿರುವ ಸಂದರ್ಭದಲ್ಲಿ ಇಲ್ಲಿಯವರು ಇಲ್ಲಿನ ಕಂಪನಿಗಳ ಜತೆ ಸಂಪರ್ಕ ಬೆಳೆಸಿಕೊಳ್ಳಲು ಪೂರಕ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.
ಈ ಸರ್ಕಾರವಾದರೂ ಮಾಡುತ್ತಾ?
ಕರ್ನಾಟಕದಲ್ಲಿ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರ ಕಳೆದ ಉಪ ಚುನಾವಣೆಯಿಂದ ಬಹಳ ಉತ್ಸಾಹದಲ್ಲಿದೆ. ಯಡಿಯೂರಪ್ಪ ಅವರು ಕೂಡ ಮಹಿಷಿ ವರದಿ ಜಾರಿಗೊಳಿಸಲು ಬದ್ಧ ಎಂದು ಹೇಳುತ್ತಾ ಬಂದಿದ್ದಾರೆ. ಈಗ ಅವರದೇ ಸರ್ಕಾರವಿರುವುದರಿಂದ ಮಹಿಷಿ ವರದಿ ಜಾರಿಗೊಳಿಸಿ ಕನ್ನಡಿಗರಿಗೆ ಒಂದು ದೈರ್ಯ ತುಂಬುತ್ತಾರಾ ಎಂಬುದು ಕನ್ನಡಿಗರದ್ದೇ ಪ್ರಶ್ನೆಯಾಗಿದೆ.
ಸರ್ಕಾರಿ ವೈದ್ಯರಿಗೆ ಹೈಟೆಕ್ ರಕ್ಷಣೆ, ಡಿಸಿಎಂ ಅಶ್ವಥ್ ನಾರಾಯಣ ಅಭಯ!
ಏನಿದು ಮಹಿಷಿ ವರದಿ?
ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ (1983ರಲ್ಲಿ) ಕರ್ನಾಟಕದಲ್ಲಿ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಬಲವಾಗಿ ಕೇಳಿ ಬಂದಿತ್ತು. ಕರ್ನಾಟಕದಲ್ಲಿ ಕನ್ನಡಿಗರಿಗೆ ದೊರೆಯುತ್ತಿದ್ದ ಉದ್ಯೋಗಾವಕಾಶಗಳನ್ನು ಪರಿಶೀಲಿಸಿ ವಿಮರ್ಶಿಸಲು ಅಂದಿನ ಸಂಸದೆ ಸರೋಜಿನಿ ಮಹಷಿಯವರಿಗೆ (1927-2015) ಕೇಳಿಕೊಂಡಿತ್ತು. ಮಹಿಷಿಯವರು ನೀಡಿದ ವರದಿಯು ಮಹಿಷಿ ವರದಿ ಎಂದು ಖ್ಯಾತವಾಗಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶಗಳು ದೊರೆಯಬೇಕೆಂಬುದ್ದನ್ನು ಪ್ರತಿಪಾದಿಸುವ ಆ ವರದಿ ಇಂದಿಗೂ ಕೂಡ ಕನ್ನಡ ಮತ್ತು ಕರ್ನಾಟಕಪರ ಹೋರಾಟಗಳಿಗೆ ಆಧಾರವಾಗಿದೆ.