ಆನೇಕಲ್ : ಕಾಂಗ್ರೆಸ್ಸಿಗರ ಸಂಧಾನ ನಂತರ ರಾಮಲಿಂಗಾರೆಡ್ಡಿ ಸುದ್ದಿಗೋಷ್ಠಿ
ಆನೇಕಲ್, ಜುಲೈ 14: ಕರ್ನಾಟಕ ರಾಜಕೀಯ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಭಾರಿ ಪ್ರಯತ್ನಪಡುತ್ತಿದ್ದಾರೆ. ಈ ನಡುವೆ ಫಾರ್ಮ್ ಹೌಸ್, ಗೆಸ್ಟ್ ಹೌಸ್, ಹೋಟೆಲ್ ನಡುವೆ ರಾಜಕೀಯ ಮುಖಂಡರ ಓಡಾಟ ನಿರಂತರವಾಗಿ ನಡೆಯುತ್ತಿದೆ.
'ಕರ್ನಾಟಕ ರಾಜ್ಯ ಉಸ್ತುವಾರಿ, ಹಿರಿಯ ನಾಯಕರು ನನ್ನನ್ನು ನೋಡಲು ಇಲ್ಲಿಗೆ ಬಂದಿದ್ದರು. ಕರೆ ಮಾಡಿದ್ದರೆ ನಾನೇ ಅವರನ್ನು ಕಾಣಲು ಹೋಗುತ್ತಿದ್ದೆ. ಪಕ್ಷ ಬಿಡಬಾರದು ಎಂದು ಕೇಳಿಕೊಂಡಿದ್ದಾರೆ. ಸದ್ಯಕ್ಕೆ ನಾನು ಪಕ್ಷದ ಹಿರಿಯ ಜೊತೆ ಏನು ಮಾತುಕತೆ ನಡೆಯಿತು ಎಂಬುದನ್ನು ಹಂಚಿಕೊಳ್ಳಲಾರೆ ಎಂದು ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರು ಫಾರ್ಮ್ ಹೌಸ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಇದಕ್ಕೂ ಮುನ್ನ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ, ಮಾಜಿ ಸಚಿವ ರಾಮಲಿಂಗಾರೆಡ್ಡಿ ಅವರನ್ನು ಕಾಣಲು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ನಾಯಕರಾದ ಸಿದ್ದರಾಮಯ್ಯ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ, ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ಸಚಿವರಾದ ಡಿ.ಕೆ. ಶಿವಕುಮಾರ್ ಅವರು ಬಂದಿದ್ದರು.
ರಾಜೀನಾಮೆ ಹಿಂಪಡೆವ ಬಗ್ಗೆ ಯೋಚಿಸಬೇಕು: ರಾಮಲಿಂಗಾ ರೆಡ್ಡಿ
ಕಾಂಗ್ರೆಸ್ - ಜೆಡಿಎಸ್ನ 16 ಶಾಸಕರ ರಾಜೀನಾಮೆಯಿಂದಾಗಿ ಮೈತ್ರಿ ಸರ್ಕಾರಕ್ಕೆ ಸಂಕಷ್ಟ ಎದುರಾಗಿದ್ದು, ಸರ್ಕಾರ ಉಳಿಸಿಕೊಳ್ಳುವ ಯತ್ನ ಮುಂದುವರೆಸಿರುವ ಕೈ ತೆನೆ ನಾಯಕರು, ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ಅವರ ಮನ ಓಲೈಕೆ ಮಾಡಲು ಮುಂದಾದರು.
ಆನೇಕಲ್ನ ಶೆಟ್ಟಿಹಳ್ಳಿಯಲ್ಲಿರುವ ರೆಡ್ಡಿ ಫಾರ್ಮ್ಹೌಸ್ಗೆ ಸಿಎಂ ಕುಮಾರಸ್ವಾಮಿ, ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ತಂಡ ಮಾತುಕತೆ ಮುಗಿಸಿಕೊಂಡು ಮೌನಕ್ಕೆ ಶರಣಾಗಿ ಕೆಕೆ ಗೆಸ್ಟ್ ಹೌಸ್ ಗೆ ಮರಳಿದೆ. ನಂತರ ಕೆಲವರು ತಾಜ್ ಹೋಟೆಲ್ ನತ್ತ ಮುಖ ಮಾಡಿದ್ದಾರೆ.
ಆದರೆ, ರಾಮಲಿಂಗಾರೆಡ್ಡಿ ಅವರು ರಾಜೀನಾಮೆ ಹಿಂದಕ್ಕೆ ಪಡೆಯುವ ಬಗ್ಗೆ, ಪಕ್ಷ ಬಿಡುವ ಬಗ್ಗೆ ಏನು ಹೇಳಿದರು ಎಂಬ ಪ್ರಶ್ನೆಗೆ ಹಿರಿಯ ನಾಯಕರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕಾಂಗ್ರೆಸ್ ಬಿಡುವ ಬಗ್ಗೆ ಯಾವುದೇ ಆಲೋಚನೆ ಇಲ್ಲ ಎಂದು ರೆಡ್ಡಿ ಅವರು ಹೇಳಿದರೂ, ರಾಜೀನಾಮೆ ಹಿಂಪಡೆಯುವ ಬಗ್ಗೆ ಸ್ಪಷ್ಟನೆ ನೀಡಿಲ್ಲ.
ವಿಧಾನಸಭೆ ಅಧಿವೇಶನದಲ್ಲಿ ಎಚ್ ಡಿ ಕುಮಾರಸ್ವಾಮಿ ಅವರು ವಿಶ್ವಾಸಮತ ಯಾಚನೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಅಗತ್ಯ ಸಂಖ್ಯಾಬಲ ಸಿಗದೆ ಸರ್ಕಾರ ಮುಖಭಂಗ ಅನುಭವಿಸುವುದನ್ನು ತಪ್ಪಿಸಲು ಸರ್ವರೀತಿಯಲ್ಲಿ ಯತ್ನ ಸಾಗಿದೆ. ಉಳಿದಂತೆ, ವಿಶ್ವಾಸಮತ ಯಾಚನೆಗೂ ಮುನ್ನ ವಿದಾಯ ಭಾಷಣ ಮಾಡಿ, ಕುಮಾರಸ್ವಾಮಿ ಅವರು ರಾಜೀನಾಮೆ ನೀಡುವ ಆಯ್ಕೆ ಬಗ್ಗೆಯೂ ಚರ್ಚೆ ನಡೆದಿದೆ.