ಕರ್ನಾಟಕ ರಾಜಕೀಯ ಬಿಕ್ಕಟ್ಟು: ಮತ್ತೊಮ್ಮೆ ಜನಾದೇಶವೊಂದೇ ಉಪಾಯ
ಬೆಂಗಳೂರು, ಜುಲೈ 17: ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಇಂದಿನವರೆಗೂ ಅಸ್ಥಿರ ಸ್ಥಿತಿಯಲ್ಲೇ ಉಳಿದಿದೆ. ಸಚಿವ ಸ್ಥಾನದ ಅಧಿಕಾರ ದಾಹಕ್ಕಾಗಿ ರಾಜಿನಾಮೆ ನೀಡಿರುವ ಶಾಸಕರ ನಡೆ ಮತ್ತು ಸರ್ಕಾರವನ್ನು ಉರುಳಿಸಿ ಅಧಿಕಾರ ಚುಕ್ಕಾಣಿ ಹಿಡಿಯಲು ಯತ್ನಿಸುತ್ತಿರುವ ಬಿಜೆಪಿಯ ರಾಜಕೀಯ ಮೇಲಾಟವು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಭಾವಿಸುತ್ತದೆ.
'ಸರ್ಕಾರ ಉಳಿಯಬಹುದು-ಬೀಳಬಹುದು, ಆದರೆ ಈ ರಾಜಕೀಯ ಹೈಡ್ರಾಮ ಮುಂದುವರೆಯುತ್ತಲೇ ಇರುತ್ತದೆ. ಹಾಗಾಗಿ ಸ್ಪೀಕರ್ರವರು ಸರ್ಕಾರವನ್ನು ಅನರ್ಹಗೊಳಿಸಬೇಕು, ಇಲ್ಲವೇ ರಾಜ್ಯಪಾಲರು ಬಹುಮತ ಯಾಚನೆಗೆ ಅವಕಾಶ ನೀಡದೆ ಮರುಚುನಾವಣೆಯನ್ನು ಘೋಷಿಸಿ ಮತ್ತೊಮ್ಮೆ ಜನಾದೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ' ಎಂದು ಎಎಪಿ ಬಿಬಿಎಂಪಿ ತಂಡದ ಸಂವಹನ ವಿಭಾಗದ ಮುಖ್ಯಸ್ಥರಾದ ಮಾಲವಿಕ ಗುಬ್ಬಿವಾಣಿ ಹೇಳಿದ್ದಾರೆ.
ಕರ್ನಾಟಕ ರಾಜಕೀಯ ಬಿಕ್ಕಟ್ಟು, ಪಕ್ಷಾಂತರ ನಿಷೇಧ ಕಾಯ್ದೆ ಎಂದರೇನು?
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದಲ್ಲಿ ತಮಗೆ ಸಚಿವ ಸ್ಥಾನ ಸಿಗಲಿಲ್ಲವೆಂದು ಅತೃಪ್ತ 15 ಶಾಸಕರು ರಾಜಿನಾಮೆ ನೀಡಿದ್ದಾರೆ. ಸ್ಪೀಕರ್ ತಮ್ಮ ರಾಜಿನಾಮೆಯನ್ನು ಅಂಗೀಕರಿಸಲು ವಿಳಂಬ ಮಾಡುತ್ತಿದ್ದಾರೆಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ವಿಚಾರಣೆ ನಡೆಸಿ ತೀರ್ಪು ನೀಡಿರುವ ರಾಜಿನಾಮೆ ಅಂಗೀಕರಿಸುವುದರಲ್ಲಿ ಸ್ಪೀಕರ್ ತೀರ್ಮಾನವೇ ಅಂತಿಮ, ಬಹುಮತ ಯಾಚನೆಗೆ ರಾಜಿನಾಮೆ ನೀಡಿರುವ ಶಾಸಕರನ್ನು ಒತ್ತಾಯಿಸುವಂತಿಲ್ಲ ಎಂದು ಹೇಳಿದೆ. ಪಕ್ಷಾಂತರ ಮತ್ತು ಶಾಸಕರ ರಾಜಿನಾಮೆ ವಿಚಾರದಲ್ಲಿ ಕೋರ್ಟ್ ಮಧ್ಯ ಪ್ರವೇಶಿಸುವಂತಿಲ್ಲ ಎಂಬುದನ್ನು ಸೂಚಿಸಿದೆ.
ಅತೃಪ್ತ ಶಾಸಕರು ತಮ್ಮ ಕ್ಷೇತ್ರಕ್ಕೆ ಸರ್ಕಾರದಿಂದ ನೆರವು ಸಿಗುತ್ತಿಲ್ಲ, ತಾವು ಕೊಟ್ಟ ಆಶ್ವಾಸನೆಗಳನ್ನು ಜಾರಿ ಮಾಡಲು ಮೈತ್ರಿ ಸರ್ಕಾರ ಸ್ಪಂದಿಸುತ್ತಿಲ್ಲ, ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ಅನುದಾನವಾಗಲಿ, ವಾತಾವರಣವಾಗಲೀ ಈ ಸರ್ಕಾರದಲ್ಲಿಲ್ಲ ಎಂಬ ಕಾರಣವನ್ನು ನೀಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಸ್ಪೀಕರ್ ರಮೇಶ್ ಮುಂದಿರುವ ಆಯ್ಕೆ?
ಆದರೆ, ಈ ಕಾರಣಗಳು ವಸ್ತುನಿಷ್ಠವಾಗಿಲ್ಲ ಎಂಬುದು ಅವರ ನಡತೆಯಿಂದ ಸಾಬೀತಾಗಿದೆ. ಪ್ರಜೆಗಳ ಹಿತಾಸಕ್ತಿಗಾಗಿ ರಾಜಿನಾಮೆ ಕೊಟ್ಟಿದ್ದೇ ಆಗಿದ್ದಲ್ಲಿ ಅವರು ತಮ್ಮ ಕ್ಷೇತ್ರದ ಪ್ರಜೆಗಳ ನಡುವೆ ಇದ್ದು ಹೋರಾಟ ಮಾಡಬೇಕಿತ್ತೇ ಹೊರತು ಮುಂಬೈಗೆ ಹಾರುವಂತಿರಲಿಲ್ಲ.
ಅತೃಪ್ತರ ಈ ನಡೆಯ ಹಿಂದೆ ಬಿಜೆಪಿ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತಿದ್ದು, ಆರಂಭದಿಂದಲೂ ಸರ್ಕಾರವನ್ನು ಉರುಳಿಸಲು ಹವಣಿಸುತ್ತಿದ್ದ ಬಿಜೆಪಿ 6 ಬಾರಿ ಆಪರೇಷನ್ ಮಾಡಲು ಯತ್ನಸಿ ವಿಫಲವಾಗಿ, 7 ನೇ ಬಾರಿ ಯಶಸ್ವಿಯಾಗಿದೆ.
ಎಚ್ಡಿಕೆ ವಿಶ್ವಾಸಮತ ಯಾಚನೆಗೂ ಮುನ್ನ ವಿಧಾನಸಭೆ ಸಂಖ್ಯಾಬಲವೇನು?
ಬಹುಮತ ಯಾಚನೆಗೆ ಮೈತ್ರಿ ಪಕ್ಷಗಳು ಮುಂದಾಗಿವೆ. ಬಹುಮತ ಸಾಬೀತಾಗದೆ ಹೋದರೆ ಬಿಜೆಪಿ ಸರ್ಕಾರ ರಚಿಸಲು ಕಾದು ಕುಳಿತಿದೆ. ಇದು ಮೂರು ಪಕ್ಷಗಳು ಅಧಿಕಾರಕ್ಕಾಗಿ ಗುದ್ದಾಡುತ್ತಿವೆಯೇ ಹೊರತು, ರಾಜ್ಯದ ಅಭಿವೃದ್ಧಿಯಾಗಲೀ, ಪ್ರಜೆಗಳ ಹಿತಾಸಕ್ತಿಯಾಗಲೀ ಈ ಪಕ್ಷಗಳಿಗೆ ಮುಖ್ಯವಾಗಿಲ್ಲ ಎಂಬುದನ್ನು ಸಾಬೀತು ಪಡಿಸಿದೆ ಎಂದು ಎಎಪಿ ಹೇಳಿದೆ.