ಕೊರೊನಾ ಲಸಿಕೆ ನೇರ ಖರೀದಿಗೆ 100 ಕೋಟಿ ರೂ. ಘೋಷಿಸಿದ ಕಾಂಗ್ರೆಸ್
ಬೆಂಗಳೂರು, ಮೇ 14: ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರಿಗೆ ಮಂಜೂರು ಮಾಡುವ ಪ್ರದೇಶಾಭಿವೃದ್ಧಿ ನಿಧಿಯಿಂದ ನೂರು ಕೋಟಿ ರೂ.ಗಳನ್ನು ಕೊರೊನಾ ಲಸಿಕೆಗಾಗಿ ನೀಡಲು ತೀರ್ಮಾನಿಸಲಾಗಿದೆ ಎಂದು ಕೆಪಿಸಿಸಿ ಘೋಷಿಸಿದೆ.
ಶುಕ್ರವಾರ ಬೆಂಗಳೂರಿನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಈ ಘೋಷಣೆ ಮಾಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ಲಸಿಕೆ ತಯಾರಕರಿಂದ ನೇರವಾಗಿ ಲಸಿಕೆಗಳನ್ನು ಸಂಗ್ರಹಿಸಲು 100 ಕೋಟಿ ಯೋಜನೆ ರೂಪಿಸಿದ್ದೇವೆ. ಅವುಗಳನ್ನು ಖರೀದಿಸಿ ಕರ್ನಾಟಕದ ಜನರಿಗೆ ನೀಡಲು ಅನುಮತಿ ನೀಡಿ ಎಂದು ಡಿ.ಕೆ ಶಿವಕುಮಾರ್ ಹೇಳಿದರು.
ಜನಸಾಮಾನ್ಯರಿಗೆ ಲಸಿಕೆ ಹಾಕಲು ಪ್ರಧಾನಿ ನರೇಂದ್ರ ಮೋದಿ ಮತ್ತು ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರಗಳು ಒಟ್ಟಾಗಿ ವಿಫಲವಾಗಿವೆ. ಈಗ ಅದನ್ನು ನಾವೇ ಮಾಡಲು ಬಯಸುತ್ತೇವೆ. ನಮಗೆ ಕೇವಲ ಎರಡು ಸಣ್ಣ ಅಗತ್ಯವಿದ್ದು, ಒಂದು ಕೇಂದ್ರ ಸರ್ಕಾರದಿಂದ, ಮತ್ತೊಂದು ರಾಜ್ಯ ಸರ್ಕಾರದಿಂದ ಅನುಮತಿ ಬೇಕಾಗಿದೆ ಎಂದರು.
ರಾಜಕೀಯವು ಈ ದಾರಿಯಲ್ಲಿ ಬರಲು ಬಿಡಬಾರದು ಎಂದು ಬಿಜೆಪಿಗೆ ನಾನು ಮನವಿ ಮಾಡುತ್ತೇನೆ. ಅವರ ಆತ್ಮನಿರ್ಭರ ಭಾರತ್ ಸಂಕಲ್ಪದಡಿಯಲ್ಲೇ, ಕಾಂಗ್ರೆಸ್ ಪಕ್ಷ ನೇರವಾಗಿ ಕೊರೊನಾ ಲಸಿಕೆ ಸಂಗ್ರಹಿಸಲು ಮತ್ತು ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ತಿಳಿಸಿದರು.
ಪ್ರಸ್ತುತ, ಭಾರತದಲ್ಲಿ ಲಸಿಕೆ ಖರೀದಿಗೆ ಕೇಂದ್ರ ಮತ್ತು ರಾಜ್ಯವನ್ನು ಅನುಮತಿ ನಿಯಮಗಳಿವೆ. ಲಸಿಕೆಗಳನ್ನು ನೇರವಾಗಿ ಸಂಗ್ರಹಿಸಲು ಸರ್ಕಾರವು ಆಸ್ಪತ್ರೆಗಳು ಮತ್ತು ಕೈಗಾರಿಕೆಗಳಿಗೆ ಈ ಅನುಮತಿಯನ್ನು ನೀಡಬೇಕೆಂದು ಕರ್ನಾಟಕ ಕಾಂಗ್ರೆಸ್ ಒತ್ತಾಯಿಸಿದೆ.
Recommended Video
ವ್ಯಾಕ್ಸಿನೇಷನ್ ಡ್ರೈವ್ ಪ್ರಾರಂಭಿಸಲು ಕಾಂಗ್ರೆಸ್ 100 ಕೋಟಿ ರೂ. ಯೋಜನೆಯನ್ನು ಹೊಂದಿದೆ ಎಂದ ಡಿ.ಕೆ ಶಿವಕುಮಾರ್, ಅದರಲ್ಲಿ 10 ಕೋಟಿ ಹಣವನ್ನು ಕರ್ನಾಟಕ ಕಾಂಗ್ರೆಸ್ ಪಕ್ಷ ನೀಡುತ್ತಿದೆ. ಉಳಿದ ಹಣವನ್ನು ಕಾಂಗ್ರೆಸ್ ಶಾಸಕ/ ಎಂಎಲ್ಸಿಗಳ ನಿಧಿಯಿಂದ ಇನ್ನೂ 90 ಕೋಟಿ ರೂ. ಸಂಗ್ರಹಿಸಲು ನಾನು ಮನವಿ ಮಾಡುತ್ತೇನೆ ಎಂದರು.
ಎಂಎಲ್ಎ/ಎಂಎಲ್ಸಿ ಹಣವನ್ನು ಬಳಸಲು ದಯವಿಟ್ಟು ನಮಗೆ ಅವಕಾಶ ಮಾಡಿಕೊಡಿ ಎಂದು ಯಡಿಯೂರಪ್ಪ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಲಸಿಕೆಗಳನ್ನು ನೇರವಾಗಿ ಪಾರದರ್ಶಕ ರೀತಿಯಲ್ಲಿ ಸಂಗ್ರಹಿಸಿ ಹಂಚುತ್ತೇವೆ. ಏಕೆಂದರೆ ಮೋದಿ ಮತ್ತು ಯಡಿಯೂರಪ್ಪ ಸರ್ಕಾರಗಳು ಈಗಾಗಲೇ ಅದನ್ನು ಮಾಡಲು ವಿಫಲವಾಗಿವೆ," ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.