'ಹೌದೋ ಹುಲಿಯಾ' ಎಂದು ಕಾಂಗ್ರೆಸ್ ಹೇಳಿದ್ದು ಯಾರಿಗೆ?
ಬೆಂಗಳೂರು, ಡಿಸೆಂಬರ್.05: ಇಂದಿರಾ ಗಾಂಧಿ ದೇಶಕ್ಕೋಸ್ಕರ ಪ್ರಾಣ ಬಿಟ್ಟರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಾತು ಹೇಳುತ್ತಿದ್ದಂತೆ ಅಲ್ಲೊಬ್ಬ ಕುಡುಕ ಹೌದೋ ಹುಲಿಯಾ ಎಂದು ಡೈಲಾಗ್ ಬಿಟ್ಟ. ಇದೊಂದು ಡೈಲಾಗ್ ಈಗ ರಾಜ್ಯಾದ್ಯಂತ ಸಖತ್ ಸದ್ದು ಮಾಡುತ್ತಿದೆ.
ಕಾಗವಾಡದಲ್ಲಿ ಪ್ರಚಾರದ ವೇಳೆ ಸಿದ್ದರಾಮಯ್ಯನವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದರು. ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ಕಾಂಗ್ರೆಸ್ ನಾಯಕರು ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ ಎಂದು ಹೇಳಿದರು. ಇದರ ಮಧ್ಯೆ ಎದ್ದುನಿಂತ ವ್ಯಕ್ತಿಯೊಬ್ಬ ಹೌದೋ ಹುಲಿಯಾ ಎಂದು ಬಿಟ್ಟ. ಅಲ್ಲಿಗೆ ಸಾಮಾಜಿಕ ಜಾಲತಾಣದಲ್ಲೇ ಅದೇ ಒಂದು ಟ್ರೆಂಡ್ ಆಗಿ ಬಿಟ್ಟಿದೆ.
ಇಂದಿರಾ ಗಾಂಧಿ ದೇಶಕ್ಕಾಗಿ ಪ್ರಾಣ ಕೊಟ್ರು ಎಂದು ಸಿದ್ದರಾಮಯ್ಯ ಹೇಳಿದಾಗ ಕುಡುಕ ಹೇಳಿದ್ದೇನು?
ಸಾಮಾಜಿಕ ಜಾಲತಾಣಗಳಲ್ಲಿ ಯುವಕ-ಯುವತಿಯರೆಲ್ಲರ ಬಾಯಲ್ಲೂ ಹೌದೋ ಹುಲಿಯಾ ಡೈಲಾಗ್ ಹರಿದಾಡುತ್ತಿದೆ. ಕಾಂಗ್ರೆಸ್ ಸಮಾವೇಶದಲ್ಲಿ ಹೊಡೆದ ಡೈಲಾಗ್ ನ್ನೇ ಬಳಸಿಕೊಂಡು ಇದೀಗ ರಾಜ್ಯ ಕಾಂಗ್ರೆಸ್, ಅನರ್ಹ ಶಾಸಕರ ವಿರುದ್ಧ ಟ್ವೀಟ್ ಅಸ್ತ್ರ ಪ್ರಯೋಗಿಸಿದೆ.
'ಹೌದೋ ಹುಲಿಯಾ' ಎಂದ ಕಾಂಗ್ರೆಸ್!
ಸ್ವಾಭಿಮಾನಿ ಮತದಾರರಿಗೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಹೀಗೊಂದು ಟ್ವೀಟ್ ಮಾಡಿದೆ. ಸ್ವಾಭಿಮಾನ ಮತದಾರರು ಹಣ, ಅಧಿಕಾರಕ್ಕಾಗಿ @BJP4Karnataka ಕ್ಕೆ ತಮ್ಮನ್ನೇ ಮಾರಿಕೊಂಡ ಅನರ್ಹರು ಬಂದಾಗ ಛೀಮಾರಿ ಹಾಕಿದೆ, ಬಹಿಷ್ಕಾರ ಹಾಕಿದೆ, ಧಿಕ್ಕಾರ ಹಾಕಿದೆ, ಆಕ್ರೋಶ ವ್ಯಕ್ತಪಡಿಸಿದೆ, ಪ್ರಶ್ನೆಗಳ ಸುರಿಮಳೆಗೈದೆ, ಮತ ನೀಡುವುದಿಲ್ಲ ಎಂದೆ ಅಂತಾ ಟ್ವೀಟ್ ಮಾಡಿದ್ದು ಕೊನೆಯಲ್ಲಿ ಹೌದೋ ಹುಲಿಯಾ ಎಂದು ಬರೆಯಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿರುವ ಹೌದೋ ಹುಲಿಯಾ ಧಾಟಿಯಲ್ಲೇ ಮತದಾರರಿಗೆ ಸಂದೇಶವನ್ನು ರವಾನಿಸಿದೆ. ಅನರ್ಹರನ್ನು ಸೋಲಿಸಿ, ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಳ್ಳಲಾಗಿದೆ.