ರೆಸಾರ್ಟ್ಗೆ ಶಿಫ್ಟ್ ಆದ ಶಾಸಕರು: ಯಾವ ಪಕ್ಷ, ಯಾವ ರೆಸಾರ್ಟ್ನಲ್ಲಿ?
ಬೆಂಗಳೂರು, ಜುಲೈ 12: ಕರ್ನಾಟಕ ರಾಜಕೀಯ ಅತಂತ್ರ ಸ್ಥಿತಿ ತಲುಪಿದ್ದು, ಮೂರೂ ಪ್ರಮುಖ ಪಕ್ಷದ ಶಾಸಕರು ರೆಸಾರ್ಟ್ ಸೇರಿದ್ದಾರೆ. ಆ ಮೂಲಕ ಕಳೆದ ಒಂದು ವರ್ಷದಲ್ಲಿ ಐದನೇ ಬಾರಿ ರೆಸಾರ್ಟ್ ರಾಜಕೀಯ ಪ್ರಾರಂಭವಾದಂತಾಗಿದೆ.
ಇಂದು ಆರಂಭವಾದ ವಿಧಾನಸಭೆ ಅಧಿವೇಶನದಲ್ಲಿ ಕುಮಾರಸ್ವಾಮಿ ಅವರು ಮಾತನಾಡಿ, ಸ್ವಯಂ ಪ್ರೇರಿತವಾಗಿ ತಾವೇ ವಿಶ್ವಾಸಮತ ಯಾಚನೆಗೆ ಮುಂದಾಗುತ್ತೇವೆ ಎಂದು ಹೇಳಿದ್ದು, ಎಲ್ಲರ ಗಮನ ವಿಶ್ವಾಸಮತದ ದಿನದತ್ತ ತಿರುಗಿದೆ.
ಸನ್ನಿವೇಶದ ಲಾಭ ಪಡೆದು ಸಿಎಂ ಹುದ್ದೆ ಬಯಸುವುದಿಲ್ಲ: ಸಿದ್ದರಾಮಯ್ಯ
ಆತ್ಮವಿಶ್ವಾಸದಿಂದ ಸ್ವಯಂ ಪ್ರೇರಿತವಾಗಿ ವಿಶ್ವಾಸಮತಕ್ಕೆ ಸಿಎಂ ಕುಮಾರಸ್ವಾಮಿ ಅವರು ಮುಂದಾಗಿರುವುದು ಸ್ವತಃ ಬಿಜೆಪಿಗೆ ಆಶ್ಚರ್ಯ ತಂದಿದೆ ಎನ್ನಲಾಗಿದ್ದು, ಬಿಜೆಪಿಯು ತನ್ನ ಶಾಸಕರನ್ನು ರಕ್ಷಿಸಿಕೊಳ್ಳಲು ನಗರದ ದೊಮ್ಮಲೂರಿನ ರಮಾಡಾ ರೆಸಾರ್ಟ್ ನಲ್ಲಿ ಇರಿಸಿದೆ.
ಕಾಂಗ್ರೆಸ್ ಪಕ್ಷವು ತನ್ನ ಪಕ್ಷದವರನ್ನು ಆಪರೇಷನ್ ಕಮಲದಿಂದ ರಕ್ಷಿಸಿಕೊಳ್ಳಲು ಯಶವಂತಪುರ ಸಮೀಪದ ತಾಜ್ ಪಂಚತಾರಾ ಹೊಟೆಲ್ಗೆ ವರ್ಗಾಯಿಸಿದೆ. ಈಗಾಗಲೇ 13 ಶಾಸಕರನ್ನು ಕಳೆದುಕೊಂಡಿರುವ ಕಾಂಗ್ರೆಸ್ ಇನ್ನಷ್ಟು ಶಾಸಕರನ್ನು ಕಳೆದುಕೊಳ್ಳದಂತೆ ಈ ಎಚ್ಚರಿಕೆ ವಹಿಸಿದೆ.
ಬಿಜೆಪಿಯಲ್ಲೂ ಕೈಕೊಡುವವರು ಇದ್ದಾರೆ: ಸಿದ್ದರಾಮಯ್ಯ
ಇನ್ನು ಜೆಡಿಎಸ್ನ ಶಾಸಕರು ಕೆಲವು ದಿನಗಳಿಂದಲೂ ದೇವನಹಳ್ಳಿ ಸಮೀಪ ನಂದಿ ರಸ್ತೆಯಲ್ಲಿರುವ ಪ್ರೆಸ್ಟಿಜ್ ಲ್ಯಾಂಪ್ಷೈರ್ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದಿದ್ದಾರೆ. ಇಂದೂ ಸಹ ಅವರು ಅಧಿವೇಶನದ ಬಳಿಕ ಅದೇ ರೆಸಾರ್ಟ್ಗೆ ತಲುಪಿದ್ದಾರೆ.
ಮೂರೂ ಪಕ್ಷದ ಶಾಸಕರು ಬೆಂಗಳೂರಿನ ಆಸು-ಪಾಸಿನಲ್ಲಿಯೇ ಇದ್ದು, ಸೋಮವಾರ ವಿಧಾನಸಭೆಗೆ ಹಾಜರಾಗಲಿದ್ದಾರೆ.
ವಿಶ್ವಾಸಮತಯಾಚನೆ ಮಾಡುವುದಾಗಿ ಸಿಎಂ ಘೋಷಣೆ : ಮುಂದೇನು?
ಕೆಲವು ಶಾಸಕರು ರೆಸಾರ್ಟ್ಗೆ ತೆರಳಲು ನಿರಾಕರಿಸಿದ ಘಟನೆ ಸಹ ನಡೆದಿದೆ. ಕಾಂಗ್ರೆಸ್ನ ಸತೀಶ್ ಜಾರಕಿಹೊಳಿ, ಸೌಮ್ಯಾ ರೆಡ್ಡಿ ಅವರು ರೆಸಾರ್ಟ್ಗೆ ತೆರಳಿಲ್ಲ. ಬಿಜೆಪಿ ಹಾಗೂ ಜೆಡಿಎಸ್ನಲ್ಲೂ ಕೆಲವು ಶಾಸಕರು ರೆಸಾರ್ಟ್ ತೆರಳಿಲ್ಲ ಎನ್ನಲಾಗಿದೆ. ಆದರೆ ಅವರು ತಮ್ಮ ಪಕ್ಷದ ಪರವಾಗಿಯೇ ಇರುವುದಾಗಿ ನಾಯಕರಿಗೆ ತಿಳಿಸಿದ್ದಾರೆ.