ಯಾವ ಕಾರಣಕ್ಕೂ ರಾಜೀನಾಮೆ ಹಿಂದಕ್ಕೆ ಪಡೆಯೊಲ್ಲ: ರಾಮಲಿಂಗಾ ರೆಡ್ಡಿ
ಬೆಂಗಳೂರು, ಜುಲೈ 9: ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ತಮ್ಮನ್ನು ಕಡೆಗಣಿಸುತ್ತಿರುವುದಕ್ಕೆ ಸಿಟ್ಟಿಗೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಿಟಿಎಂ ಲೇಔಟ್ನ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಅವರ ಮನವೊಲಿಸುವ ಪ್ರಯತ್ನಗಳು ಮುಂದುವರಿದಿವೆ.
ಒಂದು ವರ್ಷದಿಂದ ತಮಗಾದ ನೋವಿನ ಬಗ್ಗೆ ಹಲವು ಬಾರಿ ಹೇಳಿಕೊಳ್ಳುತ್ತಲೇ ಸಹಿಸಿಕೊಂಡಿದ್ದ ರಾಮಲಿಂಗಾ ರೆಡ್ಡಿ ಅವರು ತಮ್ಮ ಈಗಿನ ನಿರ್ಧಾರಕ್ಕೆ ಅಂಟಿಕೊಂಡಿದ್ದಾರೆ. ಸುಮಾರು 40 ವರ್ಷದಿಂದ ಕಾಂಗ್ರೆಸ್ನಲ್ಲಿರುವ ಅವರು ತಾವು ಪಕ್ಷ ತೊರೆಯುವುದಿಲ್ಲ, ಸಚಿವ ಅಥವಾ ಬೇರೆ ಯಾವುದೇ ಹುದ್ದೆಗೆ ಲಾಬಿ ಮಾಡುತ್ತಿಲ್ಲ ಎನ್ನುವ ಮೂಲಕ ಮೈತ್ರಿ ಮುಖಂಡರನ್ನು ಮತ್ತಷ್ಟು ಗೊಂದಲಕ್ಕೆ ಸಿಲುಕಿಸಿದ್ದಾರೆ.
ಕಾಂಗ್ರೆಸ್ ಮುಖಂಡರು ನಿರಂತರ ಪ್ರಯತ್ನಗಳನ್ನು ಮಾಡುತ್ತಿದ್ದರೂ ರಾಮಲಿಂಗಾ ರೆಡ್ಡಿ ಅವರ ಮನವೊಲಿಸುವುದು ಸಾಧ್ಯವಾಗುತ್ತಿಲ್ಲ. ಈ ನಡುವೆ ಬಿಜೆಪಿ ಮುಖಂಡ ಎಸ್ ಆರ್ ವಿಶ್ವನಾಥ್ ಅವರು ರಾಮಲಿಂಗಾ ರೆಡ್ಡಿ ಅವರ ನಿವಾಸಕ್ಕೆ ಮಂಗಳವಾರ ಬೆಳಿಗ್ಗೆ ಭೇಟಿ ನೀಡಿದ್ದರು. ಇದರಿಂದ ಅವರು ಬಿಜೆಪಿಗೆ ಸೇರುವ ವದಂತಿಗಳಿಗೆ ಮತ್ತಷ್ಟು ರೆಕ್ಕೆಪುಕ್ಕ ಬಂದಂತಾಗಿದೆ.
ರಾಜ್ಯಪಾಲರ ಮಧ್ಯಪ್ರವೇಶಕ್ಕೆ ರಾಜಭವನ ಚಲೋಗೆ ಬಿಜೆಪಿ ನಿರ್ಧಾರ !
ಆದರೆ, 'ನಾನು ರಾಮಲಿಂಗಾ ರೆಡ್ಡಿ ಅವರ ಮನೆಗೆ ಭೇಟಿ ನೀಡಿರುವುದು ರಾಜಕೀಯ ಕಾರಣಕ್ಕೆ ಅಲ್ಲ. ಅವರ ಮನೆಗೆ ಹಲವು ಬಾರಿ ಬಂದಿದ್ದೇನೆ. ಅವರನ್ನು ಬಿಜೆಪಿಗೆ ಆಹ್ವಾನಿಸಿಲ್ಲ. ರೆಡ್ಡಿ ಸಮುದಾಯದ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಲು ಬಂದಿದ್ದೇನೆ' ಎಂದು ವಿಶ್ವನಾಥ್ ಹೇಳಿದ್ದಾರೆ.
ಕಾಂಗ್ರೆಸ್ ಅಹ್ಮದ್ ಪಟೇಲ್ ಅವರೂ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.
ನಿವಾಸದ ಎದುರು ಕಾರ್ಯಕರ್ತರ ಪ್ರತಿಭಟನೆ
ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆಯನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಕಾರ್ಯಕರ್ತರು ಅವರ ನಿವಾಸದ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಮಲಿಂಗಾ ರೆಡ್ಡಿ ಅವರ ಪರವಾಗಿಯೇ ಪ್ರತಿಭಟನೆ ನಡೆಸುತ್ತಿದ್ದಾರೆ. 'ರಾಮಲಿಂಗಾ ರೆಡ್ಡಿ ಜಿಂದಾಬಾದ್' ಎಂದು ಕೂಗುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ತಾವು ಅವರೊಂದಿಗೆ ಇದ್ದೇವೆ ಎಂಬ ಸಂದೇಶ ನೀಡಿದರು. ರಾಮಲಿಂಗಾ ರೆಡ್ಡಿ ಅವರು ತಮ್ಮ ರಾಜೀನಾಮೆಯನ್ನು ವಾಪಸ್ ಪಡೆದುಕೊಂಡು ಪಕ್ಷದ ಶಾಸಕರಾಗಿ ಮುಂದುವರಿಯಬೇಕು. ಅವರಿಗೆ ಪಕ್ಷ ಹಾಗೂ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ಮತ್ತು ಗೌರವ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಅತೃಪ್ತ ಶಾಸಕರು ರಾತ್ರೋರಾತ್ರಿ ಮುಂಬೈನಿಂದ ಗೋವಾಗೆ ಶಿಫ್ಟ್
ಅವರಿಗಿಂತ ನಮಗೆ ಹೆಚ್ಚು ಬೇಸರ
ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ಸಿಗದೆ ಇರುವುದು ಅವಗಿರಿಂತ ಹೆಚ್ಚು ಬೇಸರ ನಮಗೆ ಆಗಿದೆ. ಅವರಿಗೆ ಪಕ್ಷ ಸೂಕ್ತ ಜವಾಬ್ದಾರಿ ಕೊಡಬೇಕಿದೆ. ಈಗಾಗಲೇ ಎಲ್ಲ ಸಚಿವರು ರಾಜೀನಾಮೆ ನೀಡಿ ಸಂಪುಟ ಪುನಾರಚನೆ ಮಾಡಲು ಸರ್ಕಾರ ಮುಂದಾಗಿದೆ. ಹೀಗಾಗಿ ರಾಮಲಿಂಗಾ ರೆಡ್ಡಿ ಅವರು ರಾಜೀನಾಮೆ ಹಿಂಪಡೆಯಬೇಕು. ಸರ್ಕಾರದ ವಿಚಾರದಲ್ಲಿ ಅವರಿಗೆ ಮಾತ್ರವಲ್ಲ. ಅನೇಕ ಶಾಸಕರಿಗೆ ಅಸಮಾಧಾನ ಆಗಿದೆ. ಅವರಿಗೆ ಅಧಿಕಾರ ಬೇಕಿಲ್ಲ. ಕಾರ್ಯಕರ್ತರ ಸಮಾಧಾನ ಮುಖ್ಯ. ರಾಮಲಿಂಗಾ ರೆಡ್ಡಿ ಅವರಿಗೆ ನೀಡುವ ಅಧಿಕಾರ ಕಾರ್ಯಕರ್ತರಿಗೆ ಅಧಿಕಾರ ನೀಡಿದಂತೆ ಎಂದು ಪ್ರತಿಭಟನಾಕಾರರು ಹೇಳಿದರು.
ರಾಮಲಿಂಗಾ ರೆಡ್ಡಿ ಅವರು ಪಕ್ಷದಲ್ಲಿ ಉಳಿಯುವುದು ಕಾಂಗ್ರೆಸ್ ಮತ್ತು ನಮಗೆ ಅಗತ್ಯವಾಗಿದೆ. ಅವರು ಅಧಿಕಾರಕ್ಕಾಗಿ ಬ್ಲ್ಯಾಕ್ ಮೇಲ್ ಮಾಡುವುದಾಗಿದ್ದರೆ ಎಂದೋ ಮುಖ್ಯಮಂತ್ರಿ ಆಗುತ್ತಿದ್ದರು. ಕಾರ್ಯಕರ್ತರ ಒತ್ತಾಯದಿಂದ ಅವರು ಸಚಿವರಾಗಬೇಕೆಂದಷ್ಟೇ ಬಯಸಿದ್ದಾರೆ ಎಂದು ಹೇಳಿದರು.
ಶಾಸಕ ಸ್ಥಾನಕ್ಕೆ ರಾಜೀನಾಮೆ, ಪಕ್ಷಕ್ಕಲ್ಲ
ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಯೇ ವಿನಾ ಕಾಂಗ್ರೆಸ್ ಪಕ್ಷಕ್ಕೆ ಅಲ್ಲ. ನಾನು ಯಾರಿಗೂ ನಡುಕ ಹುಟ್ಟಿಸಿಲ್ಲ. ಯಾವುದೇ ಕಾರಣಕ್ಕೂ ಪಕ್ಷ ಬಿಡದಂತೆ ಕಾಂಗ್ರೆಸ್ ನಾಯಕರು ಕೋರಿದ್ದಾರೆ. ನಾನು ರಾಜೀನಾಮೆ ನೀಡಿರುವ ಕಾರಣವನ್ನು ಅವರಿಗೆ ತಿಳಿಸಿದ್ದೇನೆ. ಅವರಿಗೆ ಈ ಕಾರಣ ಮೊದಲೇ ಗೊತ್ತಿತ್ತು. ಹೈಕಮಾಂಡ್ನಿಂದ ಯಾರೂ ಕರೆ ಮಾಡಿಲ್ಲ. ಕೆಸಿ ವೇಣುಗೋಪಾಲ್ ಮಾತ್ರ ಕರೆ ಮಾಡಿ ಮಾತನಾಡಿದ್ದಾರೆ. ನನ್ನ ಒಬ್ಬನ ರಾಜೀನಾಮೆಯಿಂದ ಸರ್ಕಾರಕ್ಕೆ ಏನೂ ಆಗೊಲ್ಲ. ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂದಕ್ಕೆ ಪಡೆಯುವುದಿಲ್ಲ. ನಾನು ಯಾರಿಗೂ ರಾಜೀನಾಮೆ ನೀಡಿ ಎಂದು ಹೇಳಿಲ್ಲ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.
ಮಧ್ಯಂತರ ಚುನಾವಣೆ ನಮ್ಮ ಆಯ್ಕೆ ಅಲ್ಲ: ಯಡಿಯೂರಪ್ಪ
ಸಿಎಲ್ಪಿ ಸಭೆಗೆ ಬರುತ್ತಾರಾ?
ಮಂಗಳವಾರ ಬೆಳಿಗ್ಗೆ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆ ನಡೆಯಲಿದೆ. ಅದಕ್ಕೆ ರಾಮಲಿಂಗಾ ರೆಡ್ಡಿ ಅವರು ಭಾಗವಹಿಸುತ್ತಾರೆಯೇ ಅಥವಾ ಗೈರಾಗುತ್ತಾರೆಯೇ ಎಂಬ ಕುತೂಹಲ ಮೂಡಿದೆ. ಒಂದು ವೇಳೆ ಪಕ್ಷದ ಸಭೆಗೆ ಹಾಜರಾದರೆ ಅವರು ನಾಯಕರ ಒತ್ತಾಯಕ್ಕೆ ಬಹುತೇಕ ಮಣಿದು ರಾಜೀನಾಮೆ ಹಿಂಪಡೆಯುವ ಸಾಧ್ಯತೆ ಇದೆ. ಸಭೆಗೆ ಗೈರಾದರೆ ಅವರು ರಾಜೀನಾಮೆ ನಿರ್ಧಾರಕ್ಕೆ ಬದ್ಧವಾಗಿದ್ದಾರೆ ಎಂದರ್ಥ.
ಈಗಾಗಲೇ ತಡವಾಗಿದೆ
ಜೆಡಿಎಸ್ ಹಾಗೂ ಕಾಂಗ್ರೆಸ್ ಎರಡೂ ಪಕ್ಷದ ಶಾಸಕರು ಕೈ ಕೊಟ್ಟಿರುವುದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹತಾಶೆ ಹೆಚ್ಚಲು ಕಾರಣವಾಗಿದೆ. ಮುಖ್ಯವಾಗಿ ಪ್ರಭಾವಿ ಮುಖಂಡ ರಾಮಲಿಂಗಾ ರೆಡ್ಡಿ ಅವರ ಮನವೊಲಿಸಿದರೆ ಉಳಿದ ಅತೃಪ್ತ ಶಾಸಕರು ಸಹ ಕರಗಬಹುದು ಎಂದು ದೋಸ್ತಿ ಮುಖಂಡರು ಲೆಕ್ಕಾಚಾರ ಹಾಕಿದ್ದಾರೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರು ಸೋಮವಾರ ರಾತ್ರಿ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತುಕತೆ ನಡೆಸಿ ಸರ್ಕಾರ ಉಳಿಸುವಂತೆ ಮನವಿ ಮಾಡಿದ್ದಾರೆ. ಆದರೆ, ಈಗಾಗಲೇ ತಡವಾಗಿದೆ ಎಂಬ ಸಂದೇಶವನ್ನು ರಾಮಲಿಂಗಾ ರೆಡ್ಡಿ ರವಾನಿಸಿದ್ದಾರೆ ಎಂದು ಹೇಳಲಾಗಿದೆ.
ತಂದೆ ಹೇಳಿದಂತೆ ಮಾಡುತ್ತೇನೆ
ನಾನೀಗ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದೇನೆ. ರಾಜೀನಾಮೆ ಕುರಿತು ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ನನ್ನ ತಂದೆ ಮತ್ತು ಪಕ್ಷದ ಕಾರ್ಯಕರ್ತರು ಏನು ಹೇಳುತ್ತಾರೆಯೋ ನೋಡಿ ಅವರ ಸೂಚನೆಯಂತೆ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ತಿಳಿಸಿದರು.