ಶಾಸಕರ ರಾಜೀನಾಮೆಗೆ ರಾಜ್ಯಪಾಲರ ಕುಮ್ಮಕ್ಕು: ಪರಮೇಶ್ವರ್
ಬೆಂಗಳೂರು, ಜುಲೈ 8: ರಾಜ್ಯ ರಾಜಕೀಯದಲ್ಲಿನ ಎಲ್ಲ ಬಿಕ್ಕಟ್ಟುಗಳಿಗೆ ಬಿಜೆಪಿಯವರೇ ಕಾರಣ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಆರೋಪಿಸಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಕಾಂಗ್ರೆಸ್ ನಾಯಕರಿಗೆ ಉಪಾಹಾರ ಕೂಟ ಏರ್ಪಡಿಸಿರುವ ಪರಮೇಶ್ವರ್ ಅವರು, ಪಕ್ಷದ ಮುಂದಿನ ನಡೆಗಳ ಬಗ್ಗೆ ಅಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಈಗಾಗಲೇ ನಾವು ಈ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಶಾಸಕರ ರಾಜೀನಾಮೆಯಿಂದಾಗುವ ಸಾಧಕ ಬಾಧಕಗಳು, ಅದರ ಕುರಿತು ಕಾನೂನಿನ ಚೌಕಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು, ಸಭಾಧ್ಯಕ್ಷರು ಅವರ ಇತಿಮಿತಿಯಲ್ಲಿ ತೆಗೆದುಕೊಳ್ಳಬಹುದಾಗ ಕ್ರಮ, ಶಾಸಕರ ಮನವೊಲಿಸಿ ವಾಪಸ್ ಕರೆತರುವ ವಿಚಾರ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಭೆ ನಡೆಸಿದ್ದೇವೆ. ಮುಂದೆಯೂ ಸಭೆ ಮಾಡುತ್ತೇವೆ ಎಂದು ತಿಳಿಸಿದರು.
ಮುಂಗಾರು ಅಧಿವೇಶನ ಮುಂದೂಡಲು ರಾಜ್ಯಪಾಲರಿಗೆ ಮನವಿ ಸಾಧ್ಯತೆ
ಪರಮೇಶ್ವರ್ ಅವರು ಆಯೋಜಿಸಿರುವ ಉಪಾಹಾರ ಕೂಟದ ಬಳಿಕ ಎಲ್ಲ ಮುಖಂಡರೂ ಶಾಸಕರ ಮನವೊಲಿಸಿ ವಾಪಸ್ ಕರೆತರಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು, ತಮ್ಮ ಮುಂದಿರುವ ಆಯ್ಕೆಗಳೇನು ಎಂಬ ಬಗ್ಗೆ ಚರ್ಚಿಸಲಿದ್ದಾರೆ. ಶಾಸಕರಾದ ಇ ತುಕಾರಾಮ್, ಶಿವಾನಂದ ಪಾಟೀಲ್ ಮತ್ತು ಎಂಟಿಬಿ ನಾಗರಾಜ್ ಅವರು ಗೈರು ಹಾಜರಾಗಿದ್ದಾರೆ.
ಎಲ್ಲರೊಂದಿಗೆ ಸಮಾಲೋಚನೆ
ಕಾಂಗ್ರೆಸ್ ಪಕ್ಷದ ಮುಖಂಡರನ್ನು ಮಾತ್ರ ಉಪಾಹಾರ ಕೂಟ ಮತ್ತು ನಂತರದ ಸಭೆಗೆ ಕರೆದಿದ್ದೇವೆ. ಅತೃಪ್ತ ಶಾಸಕರ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲ ಪ್ರಮುಖರು ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿಸಿದರು.
ರಾಮಲಿಂಗ ರೆಡ್ಡಿ ಮತ್ತು ಪುತ್ರಿಗೆ ಬಿಜೆಪಿ ನೀಡಿದ ಭರ್ಜರಿ ಆಫರ್?
ರಾಜ್ಯಪಾಲರ ಕುಮ್ಮಕ್ಕು
ಇದೇ ಸಂದರ್ಭದಲ್ಲಿ ಪರಮೇಶ್ವರ್ ಅವರು ರಾಜ್ಯಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಆಯುಕ್ತರ ಸಮ್ಮುಖದಲ್ಲಿ ಶಾಸಕರೊಂದಿಗೆ ಅವರು ಚರ್ಚೆ ನಡೆಸಿದ್ದಾರೆ. ಶಾಸಕರ ಭೇಟಿ ಸಂದರ್ಭದಲ್ಲಿ ಬೆಂಗಳೂರು ಪೊಲೀಸ್ ಆಯುಕ್ತರನ್ನು ಕರೆಸಿದ್ದು ಏಕೆ? ಶಾಸಕರ ರಾಜೀನಾಮೆ ವಿಚಾರದಲ್ಲಿ ರಾಜ್ಯಪಾಲರ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಿಂದ ಇನ್ನೂ ಆರೇಳು ಶಾಸಕರ ರಾಜೀನಾಮೆ ಸಾಧ್ಯತೆ; ಯಾರವರು?
ಆಪರೇಷನ್ ಕಮಲಕ್ಕೆ ಪ್ರಯತ್ನ
ಆಪರೇಷನ್ ಕಮಲಕ್ಕೆ ಬಿಜೆಪಿಯವರು ಆರು ಬಾರಿ ಪ್ರಯತ್ನಿಸಿದ್ದಾರೆ. ಶಾಸಕರು ಬಿಜೆಪಿಯ ರಾಜ್ಯಸಭಾ ಸದಸ್ಯರ ವಿಮಾನದಲ್ಲಿ ಮುಂಬೈಗೆ ಹೋಗಿದ್ದಾರೆ. ಬಿಜೆಪಿಯವರು ಕುದುರೆ ವ್ಯಾಪಾರ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅತೃಪ್ತ ಶಾಸಕರು ರಾಜ್ಯಸಭಾ ಸದಸ್ಯರ ರಾಜೀವ್ ಚಂದ್ರಶೇಖರ್ ಅವರ ಒಡೆತನದ ವಿಮಾನದಲ್ಲಿ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.
ಯಾವ ಪ್ರಯತ್ನಕ್ಕೂ ಸಿದ್ಧ
ನಾವು ಸುಮ್ಮನೆ ಕೂರುವುದಿಲ್ಲ. ಅತೃಪ್ತರ ಮನವೊಲಿಸುತ್ತೇವೆ. ಸಮ್ಮಿಶ್ರ ಸರ್ಕಾರ ಉಳಿಸಲು ಯಾವುದೇ ಪ್ರಯತ್ನಕ್ಕೂ ಸಿದ್ಧ. ಕೆಲವು ಶಾಸಕರು ಸಮಸ್ಯೆ ಹೇಳಿಕೊಂಡಿದ್ದಾರೆ. ಇನ್ನು ಕೆಲವರು ಬಹಳ ದೂರ ಹೋಗಿದ್ದೇವೆ ಎಂದಿದ್ದಾರೆ. ಶಾಸಕರನ್ನು ವಾಪಸ್ ಕರೆದುಕೊಂಡು ಬರುವುದರ ಬಗ್ಗೆ ನಮ್ಮ ಶಾಸಕರು ಚರ್ಚೆ ನಡೆಸುತ್ತಾರೆ ಎಂದರು.