ಸರ್ಕಾರ ಉಳಿಸಲು ಕೈ ಸಚಿವರ 'ತ್ಯಾಗ': ಸಾಮೂಹಿಕ ರಾಜೀನಾಮೆ
ಬೆಂಗಳೂರು, ಜುಲೈ 8: ಸಚಿವ ಸ್ಥಾನ ಸಿಗದೆ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಮುಂಬೈಗೆ ಹಾರಿರುವ ಕಾಂಗ್ರೆಸ್ ಶಾಸಕರ ಭಿನ್ನಮತವನ್ನು ಶಮನಗೊಳಿಸಲು ಕಾಂಗ್ರೆಸ್ ಹರಸಾಹಸಪಡುತ್ತಿದೆ.
ದೋಸ್ತಿ ಸರ್ಕಾರವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯಲ್ಲಿ ಸಕಲ ತ್ಯಾಗಕ್ಕೂ ಸಿದ್ಧ ಎಂದು ಕಾಂಗ್ರೆಸ್ನ ಅನೇಕ ಸಚಿವರು ಹೇಳಿದ್ದರು. ಅದರಂತೆ ಎಲ್ಲ ಸಚಿವರೂ ತಮ್ಮ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ನ ಎಲ್ಲ ಸಚಿವರೂ ತಮ್ಮ ರಾಜೀನಾಮೆಯನ್ನು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಕೈಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.
ಎಚ್.ನಾಗೇಶ ಬೆಂಬಲ, 106ಕ್ಕೇರಿದ ಬಿಜೆಪಿ ಶಾಸಕರ ಬಲ!
ಈ ಮೂಲಕ ಅತೃಪ್ತ ಶಾಸಕರಿಗೆ ಮಣೆ ಹಾಕಲು ಕಾಂಗ್ರೆಸ್ನ ಹಿರಿಯ ಸಚಿವರು ಸೇರಿದಂತೆ ಎಲ್ಲರೂ ತ್ಯಾಗಕ್ಕೆ ಮುಂದಾಗಿದ್ದಾರೆ. ಸಾಮೂಹಿಕ ರಾಜೀನಾಮೆ ಮೂಲಕ ಅತೃಪ್ತ ಶಾಸಕರಿಗೆ ನಿಮಗೆ ಸಚಿವ ಸ್ಥಾನ ಕೊಡಲಿದ್ದೇವೆ ಎಂಬ ಸ್ಪಷ್ಟ ಸಂದೇಶ ರವಾನಿಸಲು ಪ್ರಯತ್ನಿಸಿದ್ದಾರೆ.
ತಮ್ಮ ಸ್ಥಾನವನ್ನು ತ್ಯಾಗ ಮಾಡಿ ಅತೃಪ್ತರಿಗೆ ಸಚಿವ ಸ್ಥಾನ ಕೊಡುವ ಮೂಲಕ ಸರ್ಕಾರ ಉಳಿಸಲು ಕಸರತ್ತು ನಡೆಸಲಾಗಿದೆ.
ಸಾಮೂಹಿಕ ರಾಜೀನಾಮೆ
ಪರಮೇಶ್ವರ್ ಅವರ ಮನೆಯಲ್ಲಿ ಆಯೋಜಿಸಿದ್ದ ಉಪಾಹಾರ ಕೂಟದ ಬಳಿಕ ರಾಜ್ಯದ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಎಲ್ಲ ಸಚಿವರೂ ರಾಜೀನಾಮೆ ನೀಡುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಯಿತು. ಆದರೆ, ಈ ಉಪಾಹಾರ ಕೂಟದಲ್ಲಿ ಎಂಟಿಬಿ ನಾಗರಾಜ್, ಇ. ತುಕಾರಾಂ, ಶಿವಾನಂದ ಪಾಟೀಲ್ ಭಾಗವಹಿಸಿರಲಿಲ್ಲ. ಹೀಗಾಗಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ.
ಶಾಸಕರ ರಾಜೀನಾಮೆಗೆ ರಾಜ್ಯಪಾಲರ ಕುಮ್ಮಕ್ಕು: ಪರಮೇಶ್ವರ್
ಎಲ್ಲ ತ್ಯಾಗಕ್ಕೂ ಸಿದ್ಧರಿದ್ದೇವೆ
'ಸರ್ಕಾರದ ಹಿತದೃಷ್ಟಿಯಿಂದ ಎಲ್ಲ ತ್ಯಾಗಕ್ಕೂ ಸಿದ್ಧರಿದ್ದೇವೆ. ಮುಖ್ಯಮಂತ್ರಿ ಕಾಂಗ್ರೆಸ್ ಪಕ್ಷ ಬಲಪಡಿಸಲು ಬದ್ಧ. ಕುಮಾರಸ್ವಾಮಿ ಅವರ ಕೈ ಬಲಪಡಿಸಲು, ಕಾಂಗ್ರೆಸ್ ಪಕ್ಷ ಉಳಿಸಲು ಬದ್ಧರಾಗಿದ್ದೇವೆ. ಬೇರೆಯವರಿಗೆ ಹಾದಿ ಸುಗಮಗೊಳಿಸಲು ಸಿದ್ಧರಾಗಿದ್ದೇವೆ. ಇದು ನಮ್ಮ ಪಕ್ಷದವರಿಗೆ ಮಾತ್ರ' ಎಂದು ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಜೆಡಿಎಸ್ನಿಂದಲೂ ರಾಜೀನಾಮೆ?
ಅತೃಪ್ತ ಶಾಸಕರಿಗೆ ಅವಕಾಶ ನೀಡುವ ಮೂಲಕ ಸರ್ಕಾರ ಉಳಿಸಲು ಜೆಡಿಎಸ್ ಸಚಿವರು ಕೂಡ ತ್ಯಾಗಕ್ಕೆ ಸಿದ್ಧರಾಗಿದ್ದಾರೆ ಎಂದು ಹೇಳಲಾಗಿದೆ. ಜೆಡಿಎಸ್ನ ಒಂಬತ್ತು ಸಚಿವರು ತಮ್ಮ ಹುದ್ದೆ ತ್ಯಾಗ ಮಾಡಲು ಸಿದ್ಧರಿರುವುದಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಜೆಡಿಎಸ್ನ ಒಂಬತ್ತು ಸಚಿವರು ಜೆಡಿಎಸಲ್ಪಿ ಸಭೆಯಲ್ಲಿ ಸಚಿವರು ಭರವಸೆ ನೀಡಿದ್ದಾರೆ.
ನನಗೆ ಯಾವ ಸಚಿವ ಸ್ಥಾನ, ಹುದ್ದೆಯೂ ಬೇಕಿಲ್ಲ: ರಾಮಲಿಂಗಾರೆಡ್ಡಿ
ಆಗ ಪಟ್ಟು ಹಿಡಿದವರಿಂದ ಈಗ ತ್ಯಾಗ?
ಕಾಂಗ್ರೆಸ್ ಮತ್ತು ಜೆಡಿಎಸ್ ದೋಸ್ತಿ ಸರ್ಕಾರ ರಚನೆ ಮಾಡಿದಾಗ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಎರಡೂ ಪಕ್ಷಗಳ ಕೆಲವು ಮುಖಂಡರು ಅಸಮಾಧಾನಗೊಂಡಿದ್ದರು. ಅವರಲ್ಲಿ ಈಗಿನ ಗೃಹಮಂತ್ರಿ, ಕಾಂಗ್ರೆಸ್ ಮುಖಂಡ ಎಂಬಿ ಪಾಟೀಲ್ ಕೂಡ ಒಬ್ಬರು. ಎಂಟಿಬಿ ನಾಗರಾಜ್, ಸತೀಶ್ ಜಾರಕಿಹೊಳಿ, ಇ. ತುಕಾರಾಂ, ಪರಮೇಶ್ವರ್ ನಾಯ್ಕ್, ಆರ್.ಬಿ ತಿಮ್ಮಾಪುರ, ರಹೀಂ ಖಾನ್ ಮುಂತಾದವರು ಅಸಮಾಧಾನಿತ ಶಾಸಕರ ಬಣದಲ್ಲಿ ಗುರುತಿಸಿಕೊಂಡು ಒತ್ತಡ ತಂತ್ರದ ಮೂಲಕವೇ ಸಂಪುಟಕ್ಕೆ ಸೇರಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಈಗ ಈ ಸಚಿವರು ಸರ್ಕಾರವನ್ನು ಉಳಿಸಿಕೊಳ್ಳಲು ತಮ್ಮ ಸಚಿವ ಸ್ಥಾನವನ್ನು ತ್ಯಜಿಸುತ್ತಾರೆಯೇ ಎಂಬ ಪ್ರಶ್ನೆ ಮೂಡಿದೆ.