ಕಾಂಗ್ರೆಸ್ಗೆ ಶಾಕ್ ನೀಡಿದ 'ದಿಢೀರ್ ರೆಬೆಲ್' ಮುನಿರತ್ನ ಹೇಳಿದ್ದೇನು?
Recommended Video
ಬೆಂಗಳೂರು, ಜುಲೈ 8: ಕಾಂಗ್ರೆಸ್ನ ಕಟ್ಟಾ ಬೆಂಬಲಿಗರಾಗಿ ಗುರುತಿಸಿಕೊಂಡಿದ್ದ ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ ಶನಿವಾರ ಇದ್ದಕ್ಕಿದ್ದಂತೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪಕ್ಷಕ್ಕೆ ಆಘಾತ ನೀಡಿದ್ದರು.
ರಾಜೀನಾಮೆ ನೀಡಿದ್ದರೂ ಮುನಿರತ್ನ ಅವರು ಇತರೆ ಅತೃಪ್ತ ಶಾಸಕರೊಂದಿಗೆ ಮುಂಬೈಗೆ ತೆರಳಿಲ್ಲ. ಬದಲಾಗಿ ಬೆಂಗಳೂರಿನಲ್ಲಿಯೇ ಇದ್ದಾರೆ. ಅವರ ರಾಜೀನಾಮೆಗೆ ಸಚಿವ ಸ್ಥಾನ ದೊರಕದೆ ಇರುವ ಬೇಸರಕ್ಕಿಂತಲೂ ಒಟ್ಟಾರೆ ಸಮ್ಮಿಶ್ರ ಸರ್ಕಾರ ಮತ್ತು ದೋಸ್ತಿ ಸರ್ಕಾರದ ಜೆಡಿಎಸ್ ಪಕ್ಷದ ನಾಯಕರು ಕಾರಣ ಎನ್ನುವುದು ವ್ಯಕ್ತವಾಗುತ್ತದೆ.
ಶಾಸಕರ ರಾಜೀನಾಮೆಗೆ ರಾಜ್ಯಪಾಲರ ಕುಮ್ಮಕ್ಕು: ಪರಮೇಶ್ವರ್
ಮುನಿರತ್ನ ಅವರು ಶನಿವಾರ ಅತೃಪ್ತ ಶಾಸಕರೊಂದಿಗೆ ವಿಧಾನಸೌಧದಲ್ಲಿರುವ ಸ್ಪೀಕರ್ ಕಚೇರಿಗೆ ತೆರಳಿದ್ದಾಗ ಅವರ ರಾಜೀನಾಮೆ ಪತ್ರವನ್ನು ಡಿಕೆ ಶಿವಕುಮಾರ್ ಹರಿದುಹಾಕಿದ್ದರು. ಹೀಗಾಗಿ ಅವರು ಮಧ್ಯಾಹ್ನದ ಬಳಿಕ ಮತ್ತೆ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದರು ಎನ್ನಲಾಗಿದೆ.
ಮುನಿರತ್ನ ಅವರು ಸರ್ಕಾರ ಮತ್ತು ಪಕ್ಷದ ಮೇಲೆ ಒತ್ತಡ ಹಾಕುವ ಸಲುವಾಗಿ ರಾಜೀನಾಮೆ ನೀಡಿದ್ದಾರೆಯೇ ಅಥವಾ ಬಿಜೆಪಿಗೆ ಜಿಗಿಯುವ ನಿರ್ಧಾರದೊಂದಿಗೆ ರಾಜೀನಾಮೆ ಸಲ್ಲಿಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ. ಮೈತ್ರಿ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮುನಿರತ್ನ, ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ವೇಳೆ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಅವರ ಬಗ್ಗೆ ಆಕ್ರೋಶ ಹೊರಹಾಕಿದರು.
ಪ್ರತಿಯೊಬ್ಬರಿಗೂ ಬೇರೆ ಸಮಸ್ಯೆ
ರಾಜೀನಾಮೆ ಸಲ್ಲಿಸಿರುವ ಪ್ರತಿಯೊಬ್ಬರಿಗೂ ಅವರದೇ ಆದ ಸಮಸ್ಯೆಗಳಿಲ್ಲ. ಒಟ್ಟಾರೆ ಒಂದೇ ಸಮಸ್ಯೆ ಎಂದು ರಾಜೀನಾಮೆ ನೀಡಿಲ್ಲ. ಮೈತ್ರಿ ಸರ್ಕಾರ ಕಳೆದ 13 ತಿಂಗಳಲ್ಲಿ ಒಂದೂ ಕೆಲಸ ಮಾಡಿಕೊಟ್ಟಿಲ್ಲ. ಅದಕ್ಕೆ ಸಂಬಂಧಿಸಿದಂತೆ ರೇವಣ್ಣ ಅವರನ್ನು ಭೇಟಿ ಮಾಡಿದ್ದೆ, ಉಪಮುಖ್ಯಮಂತ್ರಿ ಅವರ ಗಮನಕ್ಕೂ ತಂದಿದ್ದೆ. ಪತ್ರ ಬರೆದಿದ್ದೆ. ಆದರೆ ಯಾವುದೂ ಪ್ರಯೋಜನವಾಗಲಿಲ್ಲ ಎಂದು ಆರೋಪಿಸಿದರು.
ರೇವಣ್ಣ ಒಮ್ಮೆಯೂ ಕರೆದಿಲ್ಲ
ಬೆಂಗಳೂರು ಅಭಿವೃದ್ಧಿಗೆ 24 ಸಾವಿರ ಕೋಟಿ ನೀಡಿರುವುದಾಗಿ ಹೇಳುತ್ತಿದ್ದಾರೆ. ಎಲ್ಲಿ ಯಾವ ಕ್ಷೇತ್ರಕ್ಕೆ ಕೊಟ್ಟಿದ್ದಾರೆ ಎನ್ನುವುದು ಗೊತ್ತಿಲ್ಲ. ನಿಮ್ಮ ಕ್ಷೇತ್ರಕ್ಕೆ ಈ ಕೆಲಸ ಅವಶ್ಯಕತೆ ಇದೆಯಾ ಎಂದು ನಮ್ಮನ್ನು ಕೇಳಿಲ್ಲ. ಯಾರು ಕೇಳುವವರು? ರೇವಣ್ಣ 24 ಸಾವಿರ ಕೊಟಿ ಡಿಪಿಎಆರ್ ಮಾಡುತ್ತಾರೆ. ಅವರನ್ನು ಕೇಳಿದರೂ ನಮ್ಮ ಕೆಲಸ ಆಗುತ್ತಿಲ್ಲ. ಅವರ ಜಿಲ್ಲೆಯನ್ನು, ಕ್ಷೇತ್ರವನ್ನು ಅಭಿವೃದ್ಧಿ ಮಾಡಲಿ. ಅದಕ್ಕೆ ಆಕ್ಷೇಪವಿಲ್ಲ. ಆದರೆ ನನ್ನ ಜೊತೆ ಮಾತನಾಡೋಣ ಎಂದು ಒಂದು ದಿನವೂ ಕರೆದಿಲ್ಲ ಎಂದು ರೇವಣ್ಣ ವಿರುದ್ಧ ಬಾಣ ತೂರಿದರು.
ಸಚಿವ ಸ್ಥಾನಕ್ಕೆ ಪಕ್ಷೇತರ ಶಾಸಕ ಎಚ್ ನಾಗೇಶ್ ರಾಜೀನಾಮೆ, ಬಿಜೆಪಿಗೆ ಬೆಂಬಲ ಘೋಷಣೆ
ಡಿಸಿಎಂಗೆ ಸಿಕ್ಕಿರುವುದು ಝೀರೋ ಟ್ರಾಫಿಕ್ ಮಾತ್ರ
ನಮ್ಮ ಕಡೆ ಮೆಟ್ರೋ ಸಂಪರ್ಕ ವ್ಯವಸ್ಥೆ ಮಾಡಿ ಎಂದು ಕೇಳಿದ್ದೆ. ಇದರಿಂದ ಐದು ಕ್ಷೇತ್ರಗಳ ಜನರಿಗೆ ಅನುಕೂಲವಾಗುತ್ತದೆ. ಇದು ಸಾಧ್ಯವಾಗದ್ದೇನಲ್ಲ. ಇದರ ಜತೆಗೆ ಸಿಗ್ನಲ್ ಫ್ರೀ ಕಾರಿಡಾರ್, ಅಂಡರ್ಪಾಸ್ ಬಗ್ಗೆಯೂ ಮನವಿ ಮಾಡಿದ್ದೆ. ಯಾರೂ ಇದಕ್ಕೆ ಗಮನ ಹರಿಸಿಲ್ಲ. ಡಿಸಿಎಂ ಪರಮೇಶ್ವರ್ ಅವರನ್ನು ಕೇಳೋಣವೆಂದರೆ ಅವರಿಗೆ ಒಂದೂ ಅಧಿಕಾರವಿಲ್ಲ. ಝೀರೋ ಟ್ರಾಫಿಕ್ ಬಿಟ್ಟರೆ ಬೇರೆ ಏನೂ ಅವರಿಗೆ ಸಿಕ್ಕಿಲ್ಲ. ರಾಜ್ಯದ ಅಭಿವೃದ್ಧಿಯಾಗಬೇಕೆಂದರೆ ಜನರು ಒಂದು ಪಕ್ಷಕ್ಕೆ ಅಧಿಕಾರ ಕೊಡಬೇಕು. ಇಲ್ಲದಿದ್ದರೆ ಅಭಿವೃದ್ಧಿ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.
ರಾಮಲಿಂಗಾ ರೆಡ್ಡಿಗೆ ಗೌರವ ನೀಡಿಲ್ಲ
ರಾಮಲಿಂಗಾ ರೆಡ್ಡಿ ಅವರು 40 ವರ್ಷದಿಂದ ರಾಜಕೀಯದಲ್ಲಿ ಇದ್ದಾರೆ. ಏಳು ಬಾರಿ ಶಾಸಕರಾಗಿದ್ದಾರೆ. ಮೊದಲ ಸಲ ಗೆದ್ದು ಬಂದವರನ್ನು, 2ನೇ ಸಲ ಗೆದ್ದುಬಂದವರನ್ನು ಸಚಿವರನ್ನಾಗಿ ಮಾಡುತ್ತೀರಿ. ಆದರೆ, ರಾಮಲಿಂಗಾ ರೆಡ್ಡಿ ಅವರಂತಹ ಹಿರಿಯರನ್ನು ಸೌಜನ್ಯಕ್ಕೆ ಕರೆದು ಸಚಿವ ಸ್ಥಾನ ಕೊಡಲು ಆಗುತ್ತಿಲ್ಲ ಎಂದು ಗೌರವದಿಂದ ಒಂದು ಮಾತು ಹೇಳಿಲ್ಲ. ಯಾರೂ ಈ ಕೆಲಸ ಮಾಡಿಲ್ಲ. ಇನ್ನು ಸರ್ಕಾರದಲ್ಲಿ ಗೌರವ ಎಲ್ಲಿದೆ? ಕಾಂಗ್ರೆಸ್ ಶಾಸಕರು ಸರಿಯಿಲ್ಲ ಎಂದು ನಮ್ಮನ್ನು ದೂರಿದರೆ ನಮ್ಮ ತಪ್ಪೇ? ಜೆಡಿಎಸ್ ಪಕ್ಷದ ಅಧ್ಯಕ್ಷರಾಗಿದ್ದವರೇ ಮುಂಬೈಗೆ ಹೋಗಿದ್ದಾರೆ. ದೆಹಲಿಯಲ್ಲಿರುವ ಶಾಸಕರು ನನಗೆ ಫೋನ್ ಮಾಡಿಲ್ಲ ಎಂದರು.