ಹೋಗಿದ್ದು 12 ಜನ, ರಾಜೀನಾಮೆ ಕೊಟ್ಟಿದ್ದು 11 ಶಾಸಕರು!
ಬೆಂಗಳೂರು, ಜುಲೈ 6: ರಾಜ್ಯ ರಾಜಕಾರಣದಲ್ಲಿ ಬೆಳಗಿನಿಂದ ಆರಂಭವಾಗಿರುವ ರಾಜಕೀಯ ಆಟ ನಿರಂತರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ.
ಆರಂಭದಲ್ಲಿ 13 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಸುದ್ದಿ ಇತ್ತು. ಬಳಿಕ ಅದು 15ಕ್ಕೆ ಏರಿತ್ತು. ಅದರ ಜತೆ ಇನ್ನೂ ಅನೇಕ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಧಾನಸೌಧದಲ್ಲಿರುವ ಸ್ಪೀಕರ್ ಕಚೇರಿಯಲ್ಲಿ ಒಟ್ಟು 12 ಶಾಸಕರು ಸೇರಿದ್ದರು. ಇವರೆಲ್ಲರೂ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿತ್ತು. ಆದರೆ, ಸ್ಪೀಕರ್ ರಮೇಶ್ ಕುಮಾರ್ ಅವರ ಹೇಳಿಕೆ ಪ್ರಕಾರ 11 ಮಂದಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಹಾಗಾದರೆ ಅತೃಪ್ತರ ಗುಂಪಿನಲ್ಲಿ ಇದ್ದೂ ರಾಜೀನಾಮೆ ನೀಡದ ಶಾಸಕ ಯಾರು ಎಂಬ ಪ್ರಶ್ನೆ ಎದುರಾಗಿದೆ.
ದೋಸ್ತಿ ಸರ್ಕಾರದ ಅಂತ್ಯ? : ಕ್ಷಣ ಕ್ಷಣದ ಮಾಹಿತಿ Live Updates
ಶಾಸಕರು ಎರಡು ಗುಂಪುಗಳಲ್ಲಿ ವಿಧಾನಸೌಧದ ಸ್ಪೀಕರ್ ಕಚೇರಿಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದರು. ಸ್ಪೀಕರ್ ಈ ಸಂದರ್ಭದಲ್ಲಿ ಕಚೇರಿಯಲ್ಲಿ ಇರಲಿಲ್ಲ. ಅವರ ಸೋದರ ಸಂಬಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅವರನ್ನು ನೋಡಲು ಜಯದೇವ ಆಸ್ಪತ್ರೆ ತೆರಳಿದ್ದರು.
ರಾಜೀನಾಮೆ ಕೊಟ್ಟವರು ಯಾರು?
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಹಿರೇಕೆರೂರು ಶಾಸಕ ಬಿಸಿ ಪಾಟೀಲ್, ಮಸ್ಕಿ ಶಾಸಕ ಪ್ರತಾಪ್ ಗೌಡ ಪಾಟೀಲ್, ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್, ಅಥಣಿ ಶಾಸಕ ಮಹೇಶ್ ಕುಮಟಳ್ಳಿ, ಹುಣಸೂರು ಶಾಸಕ ಎಚ್ ವಿಶ್ವನಾಥ್, ಕೆಆರ್ ಪೇಟೆ ಶಾಸಕ ನಾರಾಯಣ ಗೌಡ, ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ. ಗೋಪಾಲಯ್ಯ, ಬಿಟಿಎಂ ಲೇಔಟ್ ಶಾಸಕ ರಾಮಲಿಂಗಾ ರೆಡ್ಡಿ, ಯಶವಂತಪುರ ಶಾಸಕ ಎಸ್ ಟಿ ಸೋಮಶೇಖರ್ ಮತ್ತು ಕೆಆರ್ ಪುರಂ ಶಾಸಕ ಭೈರತಿ ಬಸವರಾಜು ರಾಜೀನಾಮೆ ನೀಡಿರುವುದು ಖಾತರಿ ಎನ್ನಲಾಗಿದೆ.
ಮುನಿರತ್ನ ರಾಜೀನಾಮೆ ಹರಿದು ಹಾಕಿದರೇ?
ಈ ಶಾಸಕರ ಜತೆ ರಾಜರಾಜೇಶ್ವರಿ ಕ್ಷೇತ್ರದ ಶಾಸಕ ಮುನಿರತ್ನ ಅವರೂ ರಾಜೀನಾಮೆ ಕೊಟ್ಟಿದ್ದರು. ಆದರೆ, ಅತೃಪ್ತರೊಂದಿಗೆ ಚರ್ಚಿಸಿ ಮನವೊಲಿಸಲು ಬಂದಿದ್ದ ಡಿಕೆ ಶಿವಕುಮಾರ್ ಅವರು ಆ ಪತ್ರವನ್ನು ಹರಿದುಹಾಕಿದರು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ 11 ಶಾಸಕರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.
ಗಡ್ಡಕ್ಕೆ ಬೆಂಕಿ : ಅತೃಪ್ತರ ಆಕ್ರೋಶ ತಣಿಸಲು ಮಂತ್ರಿಗಳ ರಾಜೀನಾಮೆ?
ಟ್ರಬಲ್ ಶೂಟರ್ ಸಂಧಾನ ವಿಫಲ?
ಸ್ಪೀಕರ್ ಕೊಠಡಿಯಲ್ಲಿದ್ದ ಶಾಸಕರ ಮನವೊಲಿಸಲು ರಾಜ್ಯ ಸರ್ಕಾರದ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರು ಅಲ್ಲಿಗೆ ತೆರಳಿ ಮಾತುಕತೆ ನಡೆಸಿದ್ದರು. ಅವರಿಗೆ ಸಚಿವ ಸ್ಥಾನದ ಭರವಸೆ ನೀಡಿದ್ದರು. ಆದರೆ, ಅತೃಪ್ತ ಶಾಸಕರು ಅದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ. ಪ್ರತಿ ಬಾರಿಯೂ ನಮಗೆ ಈ ಭರವಸೆ ನೀಡಲಾಗುತ್ತಿದೆ. ಮೊದಲೇ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಾಗ ಗಮನ ಹರಿಸಿರಲಿಲ್ಲ ಎಂದು ಶಾಸಕರು ಡಿಕೆ ಶಿವಕುಮಾರ್ ಅವರಿಗೆ ಖಡಕ್ಕಾಗಿ ಹೇಳಿದ್ದಾರೆ.
ಯಡಿಯೂರಪ್ಪ ಕೈಗೆ ಅಧಿಕಾರವೋ, ರಾಷ್ಟ್ರಪತಿ ಆಳ್ವಿಕೆಯೋ?
ಡಿಕೆ ಶಿವಕುಮಾರ್ ಕಾರ್ನಲ್ಲಿ ಶಾಸಕರು
ಡಿಕೆ ಶಿವಕುಮಾರ್ ಅವರ ಸಂಧಾನಸ ಭೆ ವಿಫಲವಾಗಿದೆ ಎನ್ನಲಾದರೂ ಕಾಂಗ್ರೆಸ್ನ ನಾಲ್ವರು ಶಾಸಕರು ವಿಧಾನಸೌಧದಿಂದ ಡಿಕೆ ಶಿವಕುಮಾರ್ ಅವರ ಕಾರ್ನಲ್ಲಿ ತೆರಳಿದ್ದರು. ರಾಮಲಿಂಗಾರೆಡ್ಡಿ, ಮುನಿರತ್ನ, ಭೈರತಿ ಬಸವರಾಜ್ ಮತ್ತು ಎಸ್ ಟಿ ಸೋಮಶೇಖರ್ ಅವರ ಕಾರಿನಲ್ಲಿ ಶಾಸಕರು ತೆರಳಿದ್ದು, ಕುತೂಹಲ ಮೂಡಿಸಿದೆ.