ಮಾಸ್ಕ್ಡೇಗೆ ಚಾಲನೆ: ವಿಧಾನಸೌಧದಿಂದ ಕಬ್ಬನ್ ಪಾರ್ಕ್ಗೆ ಸಿಎಂ ಕಾಲ್ನಡಿಗೆ
ಬೆಂಗಳೂರು, ಜೂನ್ 18: ಕೊರೊನಾ ವೈರಸ್ ಹರಡುವಿಕೆ ವಿರುದ್ಧ ಜಾಗೃತಿ ಮೂಡಿಸಲು ಕರ್ನಾಟಕದಲ್ಲಿ ಇಂದು ಮಾಸ್ಕ್ ಡೇ ಆಚರಣೆ ಮಾಡಲಾಗಿದೆ.
ಬೆಂಗಳೂರಿನ ವಿಧಾನಸೌಧ ಬಳಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಯಡಿಯೂರಪ್ಪ, ವಿಧಾನಸೌಧದ ಡಾ. ಬಿ. ಆರ್. ಅಂಬೇಡ್ಕರ್ ಪ್ರತಿಮೆಯ ಬಳಿಯಿಂದ ಕಬ್ಬನ್ ಪಾರ್ಕ್ ವರೆಗೆ ಪಾದಯಾತ್ರೆ ನಡೆಸಿದರು.
'ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು ಎಂಬಂತಾಗಿದೆ ಯಡಿಯೂರಪ್ಪ ಸ್ಥಿತಿ!'
ಈ ವೇಳೆ ಡಿಸಿಎಂ ಅಶ್ವಥ್ ನಾರಾಯಣ, ಗೋವಿಂದ ಕಾರಜೋಳ, ಸಚಿವರಾದ ಸುರೇಶ್ ಕುಮಾರ್, ಸಿ.ಟಿ ರವಿ, ಆರ್ ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್, ಕ್ರಿಕೇಟ್ ದಿಗ್ಗಜ ಅನಿಲ್ ಕುಂಬ್ಳೆ ಹಾಗೂ ನಟಿ ರಾಗಿಣಿ ಸೇರಿದಂತೆ ಹಲವು ಭಾಗಿಯಾಗಿದ್ದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಆಯೋಜಿಸಿದ್ದ ಮಾಸ್ಕ್ ಡೇಗೆ ಚಾಲನೆ ನೀಡಿ ಮಾತನಾಡಿದ ಸಿಎಂ ''ಕೊರೊನಾ ವೈರಸ್ ಹರಡುವಿಕೆ ತಡೆಗಟ್ಟಲು ಮಾಸ್ಕ್ ಬಳಸುವುದು ಅವಶ್ಯಕತೆ ಇದೆ. ಸೋಪಿನಿಂದ ಕೈ ತೊಳೆಯುವುದು, ಸ್ಯಾನಿಟೈಸರ್ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಷ್ಟೇ ಮುಖ್ಯ. ಈ ನಿಬಂಧನೆಗಳನ್ನು ಸಾರ್ವಜನಿಕರು ಕಡ್ಡಾಯವಾಗಿ ಪಾಲನೆ ಮಾಡಿ'' ಎಂದು ಜಾಗೃತಿ ಮೂಡಿಸಿದರು.
'ಹೊರರಾಜ್ಯಗಳಿಂದ ಜನರು ನಮ್ಮ ರಾಜ್ಯಕ್ಕೆ ಬಂದಿರಲಿಲ್ಲ ಅಂದಿದ್ದರೆ ಕೊರೊನಾ ವೈರಸ್ ಕರ್ನಾಟಕದಲ್ಲಿ ನಿಯಂತ್ರಣದಲ್ಲಿರುತ್ತಿತ್ತು. ಈಗಲಾದರೂ ಎಚ್ಚೆತ್ತುಕೊಂಡು ಕೊರೊನಾ ತಡೆಯಲು ಸರ್ಕಾರದ ಜೊತೆ ಸಾರ್ವಜನಿಕರು ಕೈಜೋಡಿಸಬೇಕು' ಎಂದು ಸಿಎಂ ಕರೆ ನೀಡಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮಾಸ್ಕ್ ಡೇ ಆಚರಣೆ ಮಾಡಲಾಗುತ್ತಿದೆ ಎಂದು ಸಿಎಂ ತಿಳಿಸಿದರು.