ಶಿಕಾರಿಪುರದಲ್ಲಿ ಬಿಎಸ್ ವೈ ಮಟ್ಟಹಾಕುವ ಸಿದ್ದು ತಂತ್ರ ಫಲಿಸುತ್ತಾ?
ಮೈಸೂರು, ಸೆಪ್ಟೆಂಬರ್ 1: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೆಡ್ಡು ಹೊಡೆಯಲು ಸಿಎಂ ಸಿದ್ದರಾಮಯ್ಯ ತಂತ್ರ ರೂಪಿಸುತ್ತಿದ್ದು, ಅದರಂತೆ ಅವರ ಸ್ವಕ್ಷೇತ್ರ ಶಿವಮೊಗ್ಗದ ಶಿಕಾರಿಪುರದಲ್ಲೇ ಟಾಂಗ್ ಕೊಡಲು ಮುಂದಾಗಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯಗಳಲ್ಲಿ ಕೇಳಿ ಬರುತ್ತಿವೆ.
ಶಿಕಾರಿಪುರದಲ್ಲಿ ಬಿಎಸ್ವೈ 'ಶಿಕಾರಿ'ಗೆ ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್?
ಈಗಾಗಲೇ ರಾಜ್ಯದಲ್ಲಿ ಚುನಾವಣಾ ಕಾಲ ಸನ್ನಿಹಿತವಾಗಿರುವುದರಿಂದಾಗಿ ಎಲ್ಲ ರಾಜಕೀಯ ಪಕ್ಷಗಳು ತಾವು ಮಾಡುವ ಎಲ್ಲ ಕೆಲಸ ಕಾರ್ಯಗಳನ್ನೂ ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದು, ಅದರಂತೆ ಗೆಲುವಿಗೆ ತಂತ್ರಗಳನ್ನು ಕೂಡ ಮಾಡುತ್ತಿವೆ. ಈ ನಡುವೆ ಬಿಜೆಪಿ ರಾಜ್ಯದಲ್ಲಿ ಅಧಿಕಾರ ಪಡೆಯಲು ಹವಣಿಸಿದರೆ, ಸಿಎಂ ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳಲು ಹೋರಾಟ ನಡೆಸುತ್ತಿದ್ದಾರೆ. ಇವರ ನಡುವೆ ಇಬ್ಬರ ಕಚ್ಚಾಟದಿಂದಾಗುವ ಲಾಭ ಪಡೆಯಲು ಜೆಡಿಎಸ್ ನಾಯಕರು ಕಾಯುತ್ತಿದ್ದಾರೆ.
ಶೀಘ್ರವೇ ಸಿದ್ದರಾಮಯ್ಯನವರ ಸರ್ಕಾರದ ಬಣ್ಣ ಬಯಲು: ಬಿಎಸ್ವೈ
ಕಳೆದ ಬಾರಿ ಬಿಜೆಪಿಯಲ್ಲಿದ್ದ ನಾಯಕರು ಹಂಚಿ ಹೋಗಿ ಪ್ರತ್ಯೇಕ ಪಕ್ಷದಲ್ಲಿ ಗುರುತಿಸಿಕೊಂಡಿದ್ದರಿಂದ ಸೋಲಾಗಿದೆ. ಈ ಬಾರಿ ಎಲ್ಲರೂ ಒಂದೇ ಪಕ್ಷದಡಿ ಕೆಲಸ ಮಾಡುತ್ತಿದ್ದೇವೆ. ಜತೆಗೆ ಮೋದಿ ಹವಾ ಇರುವುದರಿಂದ ಗೆಲುವು ತಮ್ಮದೇ ಎಂಬ ಲೆಕ್ಕಾಚಾರ ಬಿಜೆಪಿಯವರದ್ದಾದರೆ, ತಾವು ನೀಡಿದ ಕಾರ್ಯಕ್ರಮಗಳು ಜನತೆಗೆ ತಲುಪಿದೆ. ಉಪ ಚುನಾವಣೆಯಲ್ಲಿ ಗೆಲುವು ನಮ್ಮದಾಗಿದೆ ಹೀಗಾಗಿ ಗೆಲುವು ನಮ್ಮದೇ ಎಂಬುದು ಕಾಂಗ್ರೆಸ್ ನಾಯಕರ ಆಶಾಭಾವನೆಯಾಗಿದೆ.
ಗೆಲುವಿಗಾಗಿ ಕಾಂಗ್ರೆಸ್ ತಂತ್ರ
ಇದರ ಮಧ್ಯೆ ಗೆಲುವಿಗಾಗಿ ಏನೆಲ್ಲ ತಂತ್ರಗಳನ್ನು ಮಾಡಬೇಕೋ ಅದೆಲ್ಲವನ್ನು ಕಾಂಗ್ರೆಸ್ ಮಾಡುತ್ತಲೇ ಇದೆ. ಈಗಾಗಲೇ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ನಡೆಯುತ್ತಿರುವ ಭೂಮಿ ಪೂಜೆಯನ್ನೇ ಗಮನಿಸಿದರೆ ಎಲ್ಲವೂ ಬರೀ ಗಿಮಿಕ್ ಎನ್ನುವುದು ಸುಲಭವಾಗಿ ಅರ್ಥವಾಗಿ ಬಿಡುತ್ತದೆ. ಉಪಚುನಾವಣೆ ಸಂದರ್ಭ ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಡೆದ ಭೂಮಿ ಪೂಜೆಗಳ ಪೈಕಿ ಎಷ್ಟರಲ್ಲಿ ಕಾಮಗಾರಿ ಆರಂಭವಾಗಿದೆ ಎಂಬುದನ್ನು ನೋಡಿದರೆ ಮನದಟ್ಟಾಗಿ ಬಿಡುತ್ತದೆ.
ಯಡಿಯೂರಪ್ಪಗೆ ಸ್ವಕ್ಷೇತ್ರದಲ್ಲೇ ಮುಖಭಂಗ?
ಬಿಜೆಪಿಗೆ ಇರುವುದು ಒಂದೇ ಒಂದು ಅಸ್ತ್ರ, ಸರ್ಕಾರವನ್ನು ಟೀಕಿಸುವುದು ಬಿಟ್ಟರೆ ತಮ್ಮ ಅವಧಿಯಲ್ಲಿ ಮಾಡಿದ ಸಾಧನೆಗಳನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗಲೂ ಬಿಜೆಪಿ ಮೇಲೆ ಅದು ಕೇಂದ್ರದಲ್ಲಿ ಮೋದಿ ಆಡಳಿತ ಇರುವ ಕಾರಣ ಜನ ಒಲವು ತೋರಿ ಬಿಡಬಹುದು ಎಂಬ ಭಯವೂ ಕಾಂಗ್ರೆಸ್ ನಾಯಕರಿಗಿದೆ. ಹೀಗಾಗಿ ಯಡಿಯೂರಪ್ಪ ಅವರ ಸ್ವಕ್ಷೇತ್ರದಲ್ಲೇ ಮುಖಭಂಗ ಮಾಡಲು ಸಿದ್ದರಾಮಯ್ಯ ತಂತ್ರ ರೂಪಿಸಿದ್ದಾರಂತೆ.
ಸಿದ್ದು ತಂತ್ರ ಫಲಿಸುತ್ತಾ?
ಅದೇನೆಂದರೆ, ಯಡಿಯೂರಪ್ಪನವರ ಪರಮಾಪ್ತ ಎಂದೇ ಹೇಳಲಾಗುವ ಮಹಾಲಿಂಗಪ್ಪನವರನ್ನು ಕಾಂಗ್ರೆಸ್ ಗೆ ಸೆಳೆದು ಯಡಿಯೂರಪ್ಪ ವಿರುದ್ಧವೇ ಕಣಕ್ಕಿಳಿಸಲು ತಂತ್ರ ನಡೆಸಲಾಗುತ್ತಿದೆ ಎನ್ನಲಾಗಿದೆ. ಇದರಲ್ಲಿ ಎಷ್ಟರ ಮಟ್ಟಿಗೆ ಸಿಎಂ ಸಕ್ಸಸ್ ಆಗುತ್ತಾರೆ ಎಂಬುದು ಮಾತ್ರ ಸದ್ಯ ಯಕ್ಷಪ್ರಶ್ನೆಯಾಗಿದೆ.
ಯಡಿಯೂರಪ್ಪ vs ಮಹಾಲಿಂಗಪ್ಪ
ಮಹಾಲಿಂಗಪ್ಪ ಅವರನ್ನು ಸಿಎಂ ಸೆಳೆಯಲು ಕಾರಣವಿದೆ. 1999ರ ವಿಧಾನಸಭಾ ಚುನಾವಣೆಯಲ್ಲಿ ಶಿಕಾರಿಪುರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಹಾಲಿಂಗಪ್ಪ ಅವರು ಯಡಿಯೂರಪ್ಪನವರನ್ನು ಸೋಲಿಸಿ ವಿಧಾನಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು. ಬದಲಾದ ಕಾಲಘಟ್ಟದಲ್ಲಿ ಮತ್ತೆ ಇಬ್ಬರು ಒಂದಾಗಿದ್ದರು.
ಸಿದ್ಧವಾಗುತ್ತಿದೆ ಅಖಾಡ!
ಇದೀಗ ಮತ್ತೆ ಮಹಾಲಿಂಗಪ್ಪ ಅವರನ್ನು ಯಡಿಯೂರಪ್ಪ ವಿರುದ್ಧ ಸ್ಪರ್ಧೆ ಮಾಡಲು ಅಖಾಡ ತಯಾರು ಮಾಡುವ ಪ್ರಕಿಯೆ ನಡೆಯುತ್ತಿದೆ. ಇದರಲ್ಲಿ ಸಿಎಂ ಸಫಲರಾದರೆ ಯಡಿಯೂರಪ್ಪ ಅವರಿಗೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಲಿದೆ. ಇಷ್ಟಕ್ಕೂ ಬಿಜೆಪಿಯವರು ಮಹಾಲಿಂಗಪ್ಪ ಅವರನ್ನು ಬಿಟ್ಟು ಕೊಡಲು ತಯಾರಿದ್ದಾರಾ ಎಂಬ ಪ್ರಶ್ನೆಯೂ ಕಾಡುತ್ತದೆ. ಆದರೆ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು ಸದ್ಯ ಮುಂದೆ ಆಗಲಿರುವ ಬೆಳವಣಿಗೆಯನ್ನು ಕಾದು ನೋಡುವುದು ಅನಿವಾರ್ಯವಾಗಿದೆ.