ಮಂಡೂರಿನಲ್ಲಿ ಸಿಎಂ: ಶಿಳ್ಳೆ ಹೊಡೆಯೋಕೆ ಅಣ್ಣಾವ್ರ ಸಿನಿಮಾನ
ಬೆಂಗಳೂರು, ಆ 3: ಮಂಡೂರು ತ್ಯಾಜ್ಯ ಘಟಕಕ್ಕೆ ಶನಿವಾರ (ಆ 2) ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದ್ದಾರೆ. ತನ್ನ ಭಾಷಣದ ವೇಳೆ ಶಿಳ್ಳೆ ಹಾಕುತ್ತಿದ್ದ ಗ್ರಾಮಸ್ಥರಿಗೆ 'ಇದ್ಯಾಕೆ ಶಿಳ್ಳೆ ಹಾಕುತ್ತಿದ್ದೀರಾ, ಇದೇನು ರಾಜಕುಮಾರ್ ಸಿನಿಮಾನ, ಹಾಗೆಲ್ಲಾ ಶಿಳ್ಳೆ ಹೊಡೆದರೆ ಬೇರೆ ಅರ್ಥ ಬರುತ್ತೆ' ಎಂದು ವ್ಯಂಗ್ಯ ಮಿಶ್ರಿತ ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಮಂಡೂರು ಘಟಕಕ್ಕೆ ಡಿಸೆಂಬರ್ ಒಂದರಿಂದ ಯಾವುದೇ ಕಾರಣಕ್ಕೂ ಕಸ ಸುರಿಯಲು ಬಿಡುವುದಿಲ್ಲ. ಇದು ನಾನು ನಿಮಗೆ ಕೊಡುತ್ತಿರುವ ವಾಗ್ದಾನ. ಇಲ್ಲಿ ಬಿದ್ದಿರುವ ಕಸವನ್ನು ಮೂರ್ಲಾಲ್ಕು ವರ್ಷದಲ್ಲಿ ವಿಲೇವಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ. (ಜು 26ರಂದು ಸಿಎಂ ಮಂಡೂರಿಗೆ ಭೇಟಿ)
ಸಿಎಂ ನೀಡಿದ ಭರವಸೆಯಿಂದ ಸಂತೋಷಗೊಂಡ ಗ್ರಾಮಸ್ಥರು ಶಿಳ್ಳೆ ಹಾಕಿದಾಗ, ಸಿಎಂ ಮೇಲಿನಂತೆ ಗದರಿಸಿದರು. ಆಗ ಗ್ರಾಮಸ್ಥರು ನಿಮ್ಮ ಭರವಸೆಯಿಂದ ಇಲ್ಲಿನ ಯುವಕರಿಗೆ ಹೊಸ ಹುರುಪು ಬಂದಿದೆ. ಅದಕ್ಕೆ ಶಿಳ್ಳೆ ಹಾಕುತ್ತಿದ್ದಾರೆ ಎಂದು ನಗುನಗುತ್ತಲೇ ಪ್ರತ್ಯುತ್ತರ ನೀಡಿದರು. ಆಗ ಅಲ್ಲಿ ನೆರೆದಿದ್ದ ಯುವಕರು ಮತ್ತೆ ಶಿಳ್ಳೆ ಹೊಡೆದರು.
ನಿಮ್ಮೂರಿಗೆ ಬಂದು ನಿಮ್ಮ ಸಮಸ್ಯೆಯನ್ನು ಆಲಿಸುತ್ತೇನೆಂದು ಮಾತು ಕೊಟ್ಟಿದ್ದೆ. ಅದರಂತೆ ಬಂದಿದ್ದೇನೆ. ವಿಧಾನಸಭೆಯ ಅಧಿವೇಶನ ಇದ್ದ ಕಾರಣ ಹೋದ ತಿಂಗಳು ಬರಲಾಗಲಿಲ್ಲ. ನೀವು ಪಡುತ್ತಿರುವ ಕಷ್ಟದ ಅರಿವಾಗಿದೆ ಎಂದು ಸಿದ್ದರಾಮಯ್ಯ ಈ ಸಂದರ್ಭದಲ್ಲಿ ಹೇಳಿದ್ದಾರೆ.
ನಿಮ್ಮ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ
ಜನಪ್ರತಿನಿಧಿಗಳಿಂದ ನೀವು ಸಾಕಷ್ಟು ರೋಸಿ ಹೋಗಿದ್ದೀರಿ ಎಂದು ಅರಿತಿದ್ದೇನೆ. ಆದರೂ ನೀವು ನನಗೆ ಕೊಡುತ್ತಿರುವ ಸ್ವಾಗತ, ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ. ಡಿಸೆಂಬರ್ ಒಂದರಿಂದ ಇಲ್ಲಿ ಕಸ ಬೀಳುವುದಿಲ್ಲ - ಸಿದ್ದರಾಮಯ್ಯ (ಚಿತ್ರ: ಕರ್ನಾಟಕ ವಾರ್ತಾ ಇಲಾಖೆ)
ಗೃಹ ಕಚೇರಿಯಿಂದ ಹೊರಟ ಸಿದ್ದು
ಗೃಹ ಕಚೇರಿ ಕೃಷ್ಣಾದಿಂದ ಶನಿವಾರ ಬೆಳಗ್ಗೆ ಹನ್ನೊಂದು ಗಂಟೆಗೆ ಮುಖ್ಯಮಂತ್ರಿಗಳು ವೊಲ್ವೋ ಬಸ್ಸಿನಲ್ಲಿ ಹೊರಟರು. ಇವರ ಜೊತೆ ಶಾಸಕರು, ಪಾಲಿಕೆ ಸದಸ್ಯರೂ ಇದ್ದರು. ಸಿಎಂ ಪ್ರಯಾಣಿಸುತ್ತಿದ್ದ ಬಸ್ಸನ್ನು ಸುಮಾರು 70 ವಾಹನಗಳೂ ಹಿಂಬಾಲಿಸಿದವು. (ಒನ್ ಇಂಡಿಯಾ ಸಂಗ್ರಹ ಚಿತ್ರ)
ಎಂಟು ಕಡೆ ಸಂಸ್ಕರಣಾ ಘಟಕ
ದರ್ಪಣ್ ಜೈನ್ ಎಂಬ ಹಿರಿಯ ಅಧಿಕಾರಿಯನ್ನು ವಿಶೇಷ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ. ಎಂಟು ಕಡೆ ಸಂಸ್ಕರಣಾ ಘಟಕ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಹೈಕೋರ್ಟಿಗೂ ಮಾಹಿತಿ ನೀಡಲಾಗಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಎಲ್ಲಾ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಸಂಸ್ಕರಣಾ ಘಟಕ ಸ್ಥಾಪಿಸುವಂತೆ ನ್ಯಾಯಾಲಯ ಸಲಹೆ ನೀಡಿದೆ - ಸಿದ್ದರಾಮಯ್ಯ (ಚಿತ್ರ: ಕರ್ನಾಟಕ ವಾರ್ತಾ ಇಲಾಖೆ)
ಜೀವನದಲ್ಲಿ ನಂಬಿಕೆ ಮಖ್ಯ ಎಂದರು ಮುಖ್ಯಮಂತ್ರಿಗಳು
ನಿಮ್ಮ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ. ನಮ್ಮನ್ನು ಈ ಕಸದಿಂದ ಮುಕ್ತಗೊಳಿಸಿ ಎಂದು ಅಲ್ಲಿ ಹಾಜರಿದ್ದ ವೈದ್ಯರೊಬ್ಬರು ಹೇಳಿದಾಗ, ಮಂಡೂರನ್ನು ದುರ್ನಾತೆ ಬರದಂತೆ ನೋಡಿಕೊಳ್ಳುತ್ತೇನೆ. ಮನುಷ್ಯನಿಗೆ ಜೀವನದಲ್ಲಿ ನಂಬಿಕೆ ಮುಖ್ಯ. ನನ್ನ ಮಾತಿಗೆ ನಾನು ತಪ್ಪುವುದಿಲ್ಲ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. (ಚಿತ್ರ: ಕರ್ನಾಟಕ ವಾರ್ತಾ ಇಲಾಖೆ)
ಮೂಗು ಮುಚ್ಚಿಕೊಂಡೇ ಸುತ್ತಾಡಿದ ಸಿಎಂ
ಕಸದ ಸಮಸ್ಯೆಯನ್ನು ಪರಿಶೀಲಿಸುತ್ತಿದ್ದಾಗ ಮುಖ್ಯಮಂತ್ರಿಗಳು ಮೂಗು ಮುಚ್ಚಿಕೊಂಡೇ ಸುತ್ತಾಡಿದರು. ಸಿಎಂ ಬರುವ ಮುನ್ನವೇ ಬಿಬಿಎಂಪಿ ಅಧಿಕಾರಿಗಳು ಕಸದ ರಾಶಿಗಳಿಗೆ ಸುಗಂಧ ದ್ರವ್ಯದ ಸಿಂಪಡಣೆ ಮಾಡಲಾಗಿತ್ತು. ಸಿಎಂ ಭೇಟಿಯ ವೇಳೆ ಮಂಡೂರಿನ ಚಿತ್ರಣವೇ ಬದಲಾಗಿತ್ತು. (ಚಿತ್ರ: ಕರ್ನಾಟಕ ವಾರ್ತಾ ಇಲಾಖೆ)