ರಾಜ್ಯ ಸಚಿವ ಸಂಪುಟ ಸಭೆ: ಜಿಂದಾಲ್ಗೆ ಜಮೀನು ಕುರಿತು ಮಹತ್ವದ ಚರ್ಚೆ
ಬೆಂಗಳೂರು, ಮೇ 27: ಸಿಎಂ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಈ ವೇಳೆ ಪ್ರಮುಖ ಆಡಳಿತಾತ್ಮಕ ವಿಷಯಗಳು ಚರ್ಚೆಗೆ ಬರಲಿವೆ.
ಸಚಿವ ಸಂಪುಟ ಸಭೆಯಲ್ಲಿ ಮುಖ್ಯವಾಗಿ ಜಿಂದಾಲ್ಗೆ ಜಮೀನು ನೀಡುವ ತೀರ್ಮಾನವನ್ನು ಮರು ಪರಿಶೀಲನೆ ಮಾಡುವ ಸಾಧ್ಯತೆ ಇದೆ. ಈ ವಿಚಾರ ಹೈಕಮಾಂಡ್ವರೆಗೂ ತಲುಪಿದ್ದು, ಸಂಪುಟ ಸಭೆಯಲ್ಲಿ ಚರ್ಚೆಯಾಗುವ ಪ್ರಮುಖ ವಿಷಯವಾಗಿದೆ.
ಸಿಎಂ ಬದಲಾವಣೆ: ಕೋವಿಡ್ ನಿರ್ವಹಣೆ ಬಿಟ್ಟು ಏನಿದು ಬಿಜೆಪಿಯಲ್ಲಿ, ಜನ ನಿಮ್ಮನ್ನು ಕ್ಷಮಿಸಿಯಾರೇ?
ಒಟ್ಟು 28 ವಿಷಯಗಳ ಕುರಿತು ಮಹತ್ವದ ತೀರ್ಮಾನ ಕೈಗೊಳ್ಳಲಿರುವ ಸಂಪುಟ ಸಭೆಯಲ್ಲಿ ಜಿಂದಾಲ್ಗೆ ಭೂಮಿ ಮಾರಾಟ ನಿರ್ಧಾರ ವಾಪಸ್ಗೆ ಸಚಿವರ ಆಗ್ರಹ ಮಾಡುವ ಸಾಧ್ಯತೆ ಇದೆ. ಆಡಳಿತ ಪಕ್ಷದ ಬಹುತೇಕ ಶಾಸಕರು ಸರ್ಕಾರದ ಈ ನಿರ್ಧಾರಕ್ಕೆ ವಿರೋಧಿಸಿದ್ದರು.
ರಾಜ್ಯ ಸರ್ಕಾರ ಜಿಂದಾಲ್ ಕಬ್ಬಿಣ ಮತ್ತು ಉಕ್ಕು ಸಂಸ್ಥೆೆಗೆ ರಾಜ್ಯ ಸರ್ಕಾರ ಕಡಿಮೆ ದರದಲ್ಲಿ 3667 ಎಕರೆ ಜಮೀನು ಮಾರಾಟ ಮಾಡಿರುವ ಆರೋಪ ಕೇಳಿಬಂದಿದೆ. ವಿರೋಧ ಪಕ್ಷದಲ್ಲಿದ್ದಾಗ ಬಿಜೆಪಿ ಹಲವು ನಾಯಕರು ಇದನ್ನು ವಿರೋಧಿಸಿದ್ದರು. ಈಗ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಮಾರಾಟ ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.
ಕೆಲವು ಸಚಿವರೂ ಸಹ ಸರ್ಕಾರದ ನಿರ್ಧಾರವನ್ನು ಬೆಂಬಲಿಸದೆ, ವಾಪಸ್ ಪಡೆಯುವಂತೆ ಸಿಎಂಗೆ ಮನವಿ ಮಾಡಲಿದ್ದಾರೆ. ಜಿಂದಾಲ್ಗೆ ಭೂಮಿ ಮಾರಾಟದಲ್ಲಿ ಅಕ್ರಮ ನಡದಿದೆ ಎಂದು ಬಿಜೆಪಿ ಹೈಕಮಾಂಡ್ಗೆ ಸ್ವಪಕ್ಷದ ಶಾಸಕರೇ ದೂರು ಸಲ್ಲಿಸಿದ್ದಾರೆ ಎಂಬ ಮಾಹಿತಿಯೂ ಇದೆ.
ಹಿರಿಯ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಸೇರಿದಂತೆ ಅನೇಕ ಶಾಸಕರು ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಹೈಕಮಾಂಡ್ಗೆ ಲಿಖಿತ ದೂರು ಸಲ್ಲಿಸಿದ್ದರು.
ಇದೂ ಕೂಡ ಬಿ.ಎಸ್ ಯಡಿಯೂರಪ್ಪರ ಸಿಎಂ ಕುರ್ಚಿಗೆ ಕಂಟಕ ತರಲಿದೆ ಎಂಬ ಮಾತುಗಳೂ ಕೇಳಿಬಂದಿವೆ. ಜಿಂದಾಲ್ಗೆ ಭೂಮಿ ಮಾರಾಟ ವಿಷಯವೇ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಏಳಲು ಪ್ರಮುಖ ಕಾರಣವಾಗಿದೆ.