ವಿಧಾನ ಮಂಡಲ ಅಧಿವೇಶನಕ್ಕೆ ಕೊನೆಗೂ ದಿನಾಂಕ ನಿಗದಿ
ಬೆಂಗಳೂರು, ಆಗಸ್ಟ್ 21: ವಿಧಾನಸಭೆ ಅಧಿವೇಶನ ನಡೆದು ಆರು ತಿಂಗಳ ಬಳಿಕ ರಾಜ್ಯ ವಿಧಾನಸಭೆ ಕಾರ್ಯ ಕಲಾಪಗಳು ಸೆ. 21ರಿಂದ ನಡೆಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಗುರುವಾರ ನಡೆದ ಸಂಪುಟ ಸಭೆಯಲ್ಲಿ ಹತ್ತು ದಿನಗಳ ಅಧಿವೇಶನ ನಡೆಸಲು ತೀರ್ಮಾನಿಸಲಾಯಿತು. ಕಲಾಪದ ಕಾರ್ಯ ಸ್ವರೂಪಗಳ ಬಗ್ಗೆ ಇನ್ನೂ ನಿರ್ಧಾರ ಅಂತಿಮಗೊಳಿಸಿಲ್ಲ.
ಕಳೆದ ಮಾರ್ಚ್ನಲ್ಲಿ ನಡೆದಿದ್ದ ಅಧಿವೇಶನ, ಕೊರೊನಾ ವೈರಸ್ ಭೀತಿ ತೀವ್ರವಾಗಿದ್ದರಿಂದ ಅರ್ಧದಲ್ಲಿಯೇ ಮೊಟಕಾಗಿತ್ತು. ಇದರ ಬಳಿಕ ಮತ್ತೆ ಅಧಿವೇಶನ ಯಾವಾಗ ನಡೆಯಲಿದೆ ಎನ್ನುವುದು ದೃಢಪಟ್ಟಿರಲಿಲ್ಲ. ಆದರೆ ಸಂವಿಧಾನದ ನಿಯಮದಂತೆ ವರ್ಷದಲ್ಲಿ ಕನಿಷ್ಠ ಎರಡು ಬಾರಿ ಸದನ ನಡೆಯಬೇಕು ಮತ್ತು ಎರಡು ಕಲಾಪಗಳ ನಡುವಿನ ಅವಧಿ ಆರು ತಿಂಗಳು ಮೀರಬಾರದು. ಹೀಗಾಗಿ ರಾಜ್ಯ ಸಂಪುಟವು ಮುಂದಿನ ತಿಂಗಳ ಅಂತ್ಯದಲ್ಲಿ ಸದನ ನಡೆಸಲು ತೀರ್ಮಾನಿಸಿದೆ.
ಈ ಸಲ ವಿಧಾನಮಂಡಲ ಅಧಿವೇಶನ ಎಲ್ಲಿ ನಡೆಯಲಿದೆ?
ವಿಧಾನಸಭೆ ಸ್ಪೀಕರ್ ಮತ್ತು ಪರಿಷತ್ ಅಧ್ಯಕ್ಷರ ಜತೆ ಚರ್ಚಿಸಿ ಕಲಾಪದ ವಿಧಾನಗಳು, ಸ್ಥಳ, ಮಾರ್ಗದರ್ಶಿ ಮುಂತಾದ ಸಂಗತಿಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳು ನನಗೆ ಸೂಚನೆ ನೀಡಿದ್ದಾರೆ. ಸದ್ಯಕ್ಕೆ ಕಲಾಪ ನಡೆಸಲು ದಿನಾಂಕಗಳನ್ನು ನಿಗದಿಗೊಳಿಸಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.
ಅಧಿವೇಶನ ನಡೆಸುವ ದಿನಾಂಕ ನಿಗದಿ ಜತೆಗೆ ಮಹತ್ವದ ಬೆಳೆ ಸಮೀಕ್ಷೆಯನ್ನು ಒಂದು ತಿಂಗಳವರೆಗೆ ವಿಸ್ತರಿಸಲು ಕೂಡ ಸಭೆಯಲ್ಲಿ ತೀರ್ಮಾನಿಸಲಾಯಿತು. ಕೊರೊನಾ ವೈರಸ್ ಕಾರಣದಿಂದ ಬೆಳೆ ಸಮೀಕ್ಷೆ ಕುರಿತು ರೈತರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಸಾಧ್ಯವಾಗಿರಲಿಲ್ಲ. ಕೇವಲ 5.5 ಲಕ್ಷ ರೈತರು ತಮ್ಮ ಬೆಲೆ ಹಾಗೂ ತಮ್ಮ ಫೋಟೊಗಳನ್ನು ಅಪ್ಲೋಡ್ ಮಾಡಿದ್ದಾರೆ. ರೈತರ ಅನುಕೂಲಕ್ಕಾಗಿ ಇದರ ಅಂತಿಮ ದಿನಾಂಕವನ್ನು ಸೆ. 24ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.