ಗುಂಡ್ಲುಪೇಟೆ, ನಂಜನಗೂಡಿನಲ್ಲಿ ಎಸ್ಸೆಂ ಕೃಷ್ಣ ಶಂಖನಾದ
ಗುಂಡ್ಲುಪೇಟೆ, ಏಪ್ರಿಲ್ 03 : ಭಾರತೀಯ ಜನತಾ ಪಕ್ಷವನ್ನು ಸೇರಿದ ನಂತರ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಪಕ್ಷದ ಪರ ಉಪಚುನಾವಣಾ ಪ್ರಚಾರದಲ್ಲಿ ಪ್ರಥಮ ಬಾರಿಗೆ ಇತರ ಹಿರಿಯ ನಾಯಕರೊಂದಿಗೆ ಕಾಣಿಸಿ ಸಂಚಲನ ಮೂಡಿಸಿದರು.
ನಲವತ್ತು ವರ್ಷಗಳ ತಮ್ಮ ಸಾಂಗತ್ಯವನ್ನು ಕಳಚಿಕೊಂಡು ಹೊಸ ಹುಮ್ಮಸ್ಸಿನೊಂದಿಗೆ ಭಾರತೀಯ ಜನತಾ ಪಕ್ಷ ಸೇರಿರುವ 84 ವರ್ಷದ ಹಿರಿಯ ರಾಜಕಾರಣಿ, ಇಷ್ಟು ವರ್ಷ ತಮ್ಮ ವಿರುದ್ಧವೇ ತೋಳೇರಿಸಿ ಸೆಣಸಿದ್ದ ಪಕ್ಷದ ಪರವಾಗಿ ನಿಂತಿರುವ ಅಭ್ಯರ್ಥಿಗಳಿಗಾಗಿ ಮತ ಯಾಚಿಸಿದರು.
ಪ್ರಚಾರದ ಭರಾಟೆಯನ್ನು ಆರಂಭಿಸಿದ ಎಸ್ಎಂ ಕೃಷ್ಣ ಅವರು, ನವಯುವಕನಂತೆ ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಕ್ರಮವಾಗಿ ನಿರಂಜನ ಮತ್ತು ವಿ ಶ್ರೀನಿವಾಸ ಪ್ರಸಾದ ಅವರಿಗೆ ಮತ ನೀಡಿ ಗೆಲ್ಲಿಸಬೇಕೆಂದು ಮತದಾರರನ್ನು ಕೇಳಿಕೊಂಡರು.
ಗುಂಡ್ಲುಪೇಟೆಯಲ್ಲಿ ಬಿಜೆಪಿಯ ನಿರಂಜನ್ ಅವರ ವಿರುದ್ಧ ಗೀತಾ ಮಹದೇವ್ ಪ್ರಸಾದ್ ಅವರು ಕಣಕ್ಕಿಳಿದಿದ್ದರೆ, ನಂಜನಗೂಡಿನಲ್ಲಿ ಶ್ರೀನಿವಾಸ ಪ್ರಸಾದ್ ಅವರ ವಿರುದ್ಧ ಕಾಂಗ್ರೆಸ್ಸಿನಿಂದ ಕಳಲೆ ಕೇಶವಮೂರ್ತಿ ಸೆಣಸುತ್ತಿದ್ದಾರೆ. ಈ ಎರಡೂ ಕ್ಷೇತ್ರಗಳು ಎರಡೂ ಪಕ್ಷಗಳಿಗೆ ಭಾರೀ ಪ್ರತಿಷ್ಠೆಯ ಕಣವಾಗಿವೆ.
ಕೇವಲ ಒಂದು ದಿನದ ಮಟ್ಟಿಗೆ ಕೃಷ್ಣ ಪ್ರಚಾರ ಮಾಡಲು ಬಂದಿದ್ದರೂ ಕಾರ್ಯಕರ್ತರಲ್ಲಿ ಎಂದಿಲ್ಲದ ಉತ್ಸಾಹ ಕಂಡುಬರುತ್ತಿತ್ತು. 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದು ಒಂದು ದಾಖಲೆಯೇ ಎಂದು ಹೇಳಲಾಗುತ್ತಿದೆ.
ಒಂದೆಡೆ ಬಿಜೆಪಿ ಪಾಳಯದಲ್ಲಿ ಗೆದ್ದೇ ಗೆಲ್ಲುವೆನೆಂಬ ಛಲ ಕಂಡುಬರುತ್ತಿದ್ದರೆ, ಕಾಂಗ್ರೆಸ್ ಬಿಟ್ಟು ತೊಲಗಿರುವ ಎಸ್ಎಂ ಕೃಷ್ಣ ಮತ್ತು ವಿ ಶ್ರೀನಿವಾಸ ಪ್ರಸಾದ್ ಅಂಥವರನ್ನು ಜನರೇ ಸೋಲಿಸಿ ಪಾಠ ಕಲಿಸುತ್ತಾರೆ ಎಂದು ಕಾಂಗ್ರೆಸ್ ಸಮರಾಭ್ಯಾಸದಲ್ಲಿ ತೊಡಗಿದೆ. ಸ್ವತಃ ಸಿದ್ದರಾಮಯ್ಯನವರೇ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದಾರೆ.