ಸಚಿವ ಸ್ಥಾನ ಉಳಿಯಬೇಕಾದ್ರೆ ಚುನಾವಣೆ ಗೆಲ್ಲಿಸಬೇಕು- ಬಿಎಸ್ ವೈ
ಬೆಂಗಳೂರು, ನವೆಂಬರ್.20: ರಾಜ್ಯದಲ್ಲಿ ಉಪ ಚುನಾವಣೆ ಕಾವು ದಿನೇ ದಿನೆ ಹೆಚ್ಚುತ್ತಿದೆ. ಬಿಜೆಪಿ ಪಾಲಿಗಂತೂ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪ್ರತಿಷ್ಛೆಯ ಪ್ರಶ್ನೆಯಾಗಿದೆ.
Recommended Video
ಬೆಂಗಳೂರು ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ ನಡೆಸಲಾಯಿತು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಉಪ ಚುನಾವಣೆ ಬಗ್ಗೆ ಬಿಜೆಪಿ ನಾಯಕರಿಗೆ ಗೆಲುವಿನ ಗುರಿ ನೀಡಲಾಯಿತು. ಈಗಾಗ್ಲೆ ಉಪ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಬಹುಪಾಲು ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ಅಭ್ಯರ್ಥಿಗಳನ್ನು ಗೆಲ್ಲಿಸಲು ಉಸ್ತುವಾರಿ ನೇಮಕ ಮಾಡಲಾಗಿದೆ. ಸರ್ಕಾರಕ್ಕೆ ಅಗ್ನಿಪರೀಕ್ಷೆ ಆಗಿರುವ ಉಪ ಚುನಾವಣೆಯನ್ನು ಸಿಎಂ ಬಿಎಸ್ ವೈ ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಹಾಗೆಯೇ ತಮ್ಮ ಸರ್ಕಾರದ ಸಚಿವರಿಗೂ ಕೂಡಾ ಸೀರಿಯಸ್ ಆಗಿ ಪ್ರಚಾರ ಮಾಡುವಂತೆ ಖಡಕ್ ಆದೇಶ ನೀಡಿದ್ದಾರೆ.
ಸಚಿವ ಸ್ಥಾನ ಉಳಿಯಬೇಕೋ ಬೇಡವೋ?
ಡಿಸೆಂಬರ್.05ರಂದು ನಡೆಯಲಿರುವ 15 ಕ್ಷೇತ್ರಗಳ ಉಪ ಚುನಾವಣಾ ಮತದಾನಕ್ಕೆ ಈಗಾಗಲೇ ಅಬ್ಬರದ ಪ್ರಚಾರ ಕಾರ್ಯ ನಡೆಯುತ್ತಿದೆ. ಕಾಂಗ್ರೆಸ್ ಶತಾಯಗತಯ ಅನರ್ಹ ಶಾಸಕರಿಗೆ ಪಾಠ ಕಲಿಸಲು ಪಟ್ಟು ಹಿಡಿದು ಕುಳಿತಿದೆ. ಇದರ ನಡುವೆ ಬಿಜೆಪಿ ನಡುವಿನ ಆಂತರಿಕ ಭಿನ್ನಮತ ಮುಖ್ಯಮಂತ್ರಿಗೆ ತಲೆನೋವಾಗಿದೆ.
ಬಿಜೆಪಿಯಲ್ಲಿ ಆಂತರಿಕ ಬೇಗುದಿಯ ಬಗ್ಗೆ ಅರಿತ ಮುಖ್ಯಮಂತ್ರಿ ಬಿಎಸ್ ವೈ ಕೆಲವು ಸಚಿವರಿಗೆ ಉಪ ಚುನಾವಣೆಯ ಉಸ್ತುವಾರಿ ವಹಿಸಿದ್ದಾರೆ. ಎಲ್ಲ ಮನಸ್ತಾಪವನ್ನು ಮರೆತು ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ಬಿಜೆಪಿ ಅಭ್ಯರ್ಥಿಯ ಗೆಲುವೊಂದೇ ನಮ್ಮ ಗುರಿ ಆಗಿರಬೇಕು. ಅದನ್ನು ಮರತೆ ನಡೆದುಕೊಂಡರೆ ಪರಿಣಾಮ ನೆಟ್ಟಗಿರುವುದಿಲ್ಲ.
ಸರ್ಕಾರದಲ್ಲಿ ನಿಮ್ಮ ಸಚಿವ ಸ್ಥಾನ ಗಟ್ಟಿಯಾಗಿ ಇರಬೇಕಾದರೆ ಈ ಚುನಾವಣೆಯನ್ನು ನೀವು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ, ನಿಮ್ಮನ್ನು ಸಚಿವ ಸ್ಥಾನದಲ್ಲಿ ಮುಂದುವರಿಸಬೇಕೋ ಬೇಡವೋ ಎಂಬುದರ ಬಗ್ಗೆ ನಾನು ಯೋಚಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.