ಮಸ್ಕಿ ಉಪ ಚುನಾವಣೆ ಸೋಲಿಗೆ ಸಚಿವ ವಿ.ಸೋಮಣ್ಣ ಕೊಟ್ಟ ಕಾರಣವೇನು?
ಬೆಂಗಳೂರು, ಮೇ 2: ಮಸ್ಕಿ ಕ್ಷೇತ್ರದ ಸೋಲು ಕೇವಲ ಬಿ.ವೈ ವಿಜಯೇಂದ್ರ ಹಾಗೂ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಸೋಲು ಅಲ್ಲ, ಪಕ್ಷದ ಸೋಲು. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿ ಮಾಡಿಕೊಂಡು ಹೋಗುತ್ತೇವೆ ಎಂದು ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
ಬೆಂಗಳೂರು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಸ್ಕಿಯಲ್ಲಿ ಕಳೆದ ಬಾರಿ ಬಿಜೆಪಿ ಅಭ್ಯರ್ಥಿ 200 ಮತಗಳ ಅಂತರದಲ್ಲಿ ಸೋತಿದ್ದರು. ಯಡಿಯೂರಪ್ಪ ಆಡಳಿತ ಮೆಚ್ಚಿ ಪ್ರತಾಪಗೌಡ ಪಾಟೀಲ್ ಅವರು ಬಿಜೆಪಿಗೆ ಬಂದರು. ಕೆಲವೊಂದು ಸಾರಿ ಒಳ್ಳೆಯ ಕೆಲಸ ಮಾಡಿದರೂ ಸೋಲ್ತಾರೆ. ನಾನು 2009ರಲ್ಲಿ ಸೋತಿದ್ದೆ. ಸೋಲು-ಗೆಲುವು ಒಟ್ಟಾಗಿ ಸ್ವೀಕಾರ ಮಾಡಬೇಕು ಎಂದರು.
ಮತ ಗಳಿಕೆಯಲ್ಲಿ ನಾವೇ ನಂಬರ್ ಒನ್: ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್
ತಮ್ಮ ಸೋಲಿಗೆ ಬಿಜೆಪಿ ಅವರು ಕಾರಣ ಅನ್ನುವ ಪ್ರತಾಪಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಯಾಕೆ ಹಾಗೆ ಮಾತಾಡಿದರು ಗೊತ್ತಿಲ್ಲ. ಅವರ ಜೊತೆ ಮಾತನಾಡುತ್ತೇನೆ. ಇದು ವಿಜಯೇಂದ್ರ ಅಥವಾ ಪ್ರತಾಪಗೌಡ ಪಾಟೀಲ್ ಸೋಲು ಅಲ್ಲ, ಪಕ್ಷದ ಸೋಲು. ಮುಂದಿನ ದಿನಗಳಲ್ಲಿ ಎಲ್ಲವನ್ನು ಸರಿ ಮಾಡಿಕೊಂಡು ಹೋಗ್ತೀವಿ ಎಂದರು.
ಸಿಎಂ ಯಡಿಯೂರಪ್ಪ ಕೂಡಾ ಎರಡು ದಿನ ಪ್ರಚಾರ ಮಾಡಿದ್ದರು. ಜನ ಬದಲಾವಣೆ ಬೇಕು ಅಂತ ಹೀಗೆ ಮಾಡಿರಬಹುದು. ಮುಂದೆ ತಪ್ಪು ತಿದ್ದುಪಡಿ ಮಾಡಿಕೊಳ್ತೀವಿ. ಸೋಲು-ಗೆಲುವು ಸಹಜ. ಪಕ್ಷದ ಕೆಲಸವನ್ನು ಎಲ್ಲರೂ ಮಾಡಿದ್ದಾರೆ. ಜವಾಬ್ದಾರಿ ನಿಭಾಯಿಸಿದ್ದೇವೆ. ಸೋತಾಗ ವಿಜಯೇಂದ್ರ ಸೋಲು ಅನ್ನೋದು ಸರಿಯಲ್ಲ ಎಂದು ಸಚಿವ ವಿ.ಸೋಮಣ್ಣ ಹೇಳಿದರು.
Karnataka By Elections Results 2021 Live Updates: ಬಸವಕಲ್ಯಾಣ ಬಿಜೆಪಿ ತೆಕ್ಕೆಗೆ, ಮಸ್ಕಿ ಕಾಂಗ್ರೆಸ್ ವಶಕ್ಕೆ
ಬಸವಕಲ್ಯಾಣದಲ್ಲಿ ನಾವು ಟೀಂ ವರ್ಕ್ ಮಾಡಿದ್ದೇವೆ. ಟೀಂ ವರ್ಕ್ ಮಾಡಿದ್ದಕ್ಕೆ ಗೆಲುವಾಯ್ತು. ಭಿನ್ನಾಭಿಪ್ರಾಯ ಸರಿ ಮಾಡಿ ಟೀಂ ವರ್ಕ್ ಮಾಡಿ ಗೆದ್ದೆವು. ಕಟೀಲು ಎರಡು ಬಾರಿ ಪ್ರಚಾರ ಮಾಡಿದರು. ನಾನು, ಸವದಿ, ಬೊಮ್ಮಾಯಿ 3 ಜನ 6 ಜಿಲ್ಲಾ ಪಂಚಾಯತಿ ಆಯ್ಕೆ ಮಾಡಿಕೊಂಡು ಬುದ್ಧಿವಂತಿಕೆಯಿಂದ ಕೆಲಸ ಮಾಡಿದ್ದೇವೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ವ್ಯಕ್ತಿ ಕೇಂದ್ರಿತ ಚುನಾವಣೆ ಎದುರಿಸುವುದನ್ನು ವಿರೋಧಿಸಿದರು.
ನಾನು ಚುನಾವಣೆಗೆ ಇಳಿದರೆ ಹಿಂದೆ ತಿರುಗಿ ನೋಡಲ್ಲ. ಯಾರೂ ನಿರೀಕ್ಷೆ ಮಾಡದ ರೀತಿ ಗೆಲುವನ್ನು ನಾವು ಗೆದ್ದಿದ್ದೇವೆ. ಯಡಿಯೂರಪ್ಪ, ಮೋದಿ ಅವ್ರ ಮೇಲೆ ಭರವಸೆ ಇಟ್ಟು ಜನ ಮತ ಕೊಟ್ಟಿದ್ದಾರೆ. ನಮ್ಮ ಅಭ್ಯರ್ಥಿ ಆಕ್ಟೀವ್ ಆಗಿದ್ದಾರೆ. ಟೀಂ ವರ್ಕ್ ಮಾಡಿದರೆ ಗೆಲುವು ಶತ ಸಿದ್ಧ ಅಂತ ಈ ಕ್ಷೇತ್ರದ ಗೆಲುವಿನಿಂದ ಗೊತ್ತಾಗಿದೆ ಎಂದರು.
ನಾನು ಸತ್ಯ ಹೇಳುತ್ತೇನೆ, ನಾನು ಎಕೆ 47 ಇದ್ದ ಹಾಗೆ. ಇರೋದನ್ನು ಹೇಳ್ತೀನಿ. ಮಸ್ಕಿಯಲ್ಲಿ ಏನ್ ಆಗಿದೆ ಗೊತ್ತಿಲ್ಲ. ನಾನು ಆ ಕಡೆ ಹೋಗಿಲ್ಲ. ಎಲ್ಲವನ್ನು ವಿಜಯೇಂದ್ರ ಮೇಲೆ ಹಾಕೋದು ಸರಿಯಲ್ಲ. ಕೆಲವರಲ್ಲಿ ದೌರ್ಬಲ್ಯ ಇದೆ. ಅದನ್ನು ಸರಿ ಮಾಡಿಕೊಂಡು ಹೋಗಬೇಕು. ನನಗೂ ಕೆಲ ದೌರ್ಬಲ್ಯ ಇರುತ್ತದೆ. ಅದನ್ನು ಸರಿ ಮಾಡಿಕೊಳ್ಳಬೇಕು ಎಂದು ಸಚಿವ ಸೋಮಣ್ಣ ತಿಳಿಸಿದರು.
Recommended Video