ಅನರ್ಹ ಶಾಸಕರ ವಿರುದ್ಧ ಸಿದ್ದರಾಮಯ್ಯ ಬಿಟ್ಟ ಟ್ವೀಟಾಸ್ತ್ರ ಎಂಥದ್ದು?
ಬೆಂಗಳೂರು, ಡಿಸೆಂಬರ್.02: ವಿಧಾನಸಭೆ ಉಪ ಚುನಾವಣೆ ಅಖಾಡಕ್ಕೆ ಧುಮುಕಿರುವ ಕಾಂಗ್ರೆಸ್ ಗೆ ಅನರ್ಹ ಶಾಸಕರೇ ನೇರ ಗುರಿ. ಪಕ್ಷಕ್ಕೆ ಕೈ ಕೊಟ್ಟು ಹೋಗಿರುವವರಿಗೆ ಸರಿಯಾಗಿ ಪಾಠ ಕಲಿಸಬೇಕು ಎನ್ನುವರು ಕಾಂಗ್ರೆಸ್ ನಾಯಕರರ ಮುಖ್ಯ ಉದ್ದೇಶ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗಂತೂ ಅನರ್ಹ ಶಾಸಕರ ಮೇಲೆ ಕೆಂಡದಂತಾ ಕೋಪ. ಪ್ರತಿಬಾರಿ ಅನರ್ಹ ಶಾಸಕರ ಬಗ್ಗೆ ಮಾತನಾಡುವಾಗಲೂ ಸಿದ್ದರಾಮಯ್ಯ ಕಣ್ಣು ಕೆಂಪಾಗಿರುತ್ತದೆ. ಏಕೆಂದರೆ ಈಗ ಪಕ್ಷ ತೊರೆದು ಹೋಗಿರುವ ಪ್ರತಿಯೊಬ್ಬ ಶಾಸಕರೂ ಒಂದಾನೊಂದು ಕಾಲದಲ್ಲಿ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದರು.
ಸಿದ್ದರಾಮಯ್ಯ ಯಾರಿಗೂ ಬೇಡವಾದ ಕೂಸು ಎಂದು ಶೋಭಾ ಕರಂದ್ಲಾಜೆ
ಹೀಗಾಗಿ ಪ್ರತಿಬಾರಿ ಅನರ್ಹ ಶಾಸಕರ ವಿರುದ್ಧ ಗುಟುರು ಹಾಕುವ ಟಗರು, ಬೆನ್ನಿಗೆ ಚೂರಿ ಹಾಕಿದರು ಎಂದೇ ಅಬ್ಬರಿಸುತ್ತಿದ್ದರು. ಈಗ ಮತ್ತೊಮ್ಮೆ ಅನರ್ಹ ಶಾಸಕರ ಮೇಲೆ ಮಾಜಿ ಮುಖ್ಯಂತ್ರಿ ಸಿದ್ದರಾಮಯ್ಯ ಟ್ವೀಟಾಸ್ತ್ರ ಪ್ರಯೋಗಿಸಿದ್ದಾರೆ.
ಸ್ವಾರ್ಥ ಅಳಿಯಲಿ, ಪ್ರಜಾತಂತ್ರ ಉಳಿಯಲಿ:
ರಾಜ್ಯದಲ್ಲಿ ಎದುರಾಗಿರುವ ಉಪ ಚುನಾವಣೆಯಲ್ಲಿ ಅನರ್ಹರನ್ನು ತಿರಸ್ಕರಿಸಿ, ಅರ್ಹರಿಗೆ ಮತ ನೀಡಿ. ಈ ಚುನಾವಣೆಯ ಫಲಿತಾಂಶ ಪಕ್ಷಾಂತರಿಗಳಿಗೆ ಒಂದು ಪಾಠವಾಗಲಿ, ದೇಶಕ್ಕೆ ಮಾದರಿಯಾಗಲಿ, ದೇಶದ ಜನರು ಕರ್ನಾಟಕದ ಬಗ್ಗೆ ಹೆಮ್ಮೆ ಪಡುವಂತಾಗಲಿ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಸುರೇಶ್ ಅವರಿಗೆ ಅಮೂಲ್ಯ ಮತವನ್ನು ನೀಡುವಂತೆ ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಮೂಲಕ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.