ಉಪ ಸಮರದಲ್ಲಿ ಮುಗ್ಗರಿಸಿದ 'ತೆನೆ ಹೊತ್ತ ಮಹಿಳೆ' ಕಾರಣ ಇಲ್ಲಿದೆ
ಬೆಂಗಳೂರು, ಡಿಸೆಂಬರ್.12: ರಾಜ್ಯದಲ್ಲಿ ನಡೆದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಈ ಬಾರಿ ತೆನೆ ಹೊತ್ತ ಮಹಿಳೆ ಮುಗ್ಗರಿಸಿ ಬಿದ್ದಿದ್ದಾಳೆ. ಉಪ ಚುನಾವಣಾ ಫಲಿತಾಂಶಕ್ಕೆ ಕಾಂಗ್ರೆಸ್ ಕಕ್ಕಾಬಿಕ್ಕಿಯಾದರೆ, ಜೆಡಿಎಸ್ ಶೂನ್ಯ ಸುತ್ತಿದೆ.
ಕಾಂಗ್ರೆಸ್ ನಲ್ಲಿ ಸೋಲಿನ ಹೊಣೆ ಹೊತ್ತುಕೊಂಡು ಹಿರಿಯ ನಾಯಕರೇ ಸಾಲು ಸಾಲು ರಾಜೀನಾಮೆ ಸಲ್ಲಿಸುತ್ತಿದ್ದಾರೆ. ಇದರ ನಡುವೆ ಶೂನ್ಯ ಸುತ್ತಿದ ಜೆಡಿಎಸ್ ನಲ್ಲಿ ಸೋಲಿನ ಕಾರಣ ಏನು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರಲ್ಲೂ ತನ್ನ ಭದ್ರಕೋಟೆ ಕೆ.ಆರ್.ಪೇಟೆಯನ್ನೇ ತೆನೆಹೊತ್ತ ಮಹಿಳೆ ಈ ಬಾರಿ ಕೈ ಚೆಲ್ಲಿದ್ದಾಳೆ.
ಯಡಿಯೂರಪ್ಪ ಸಂಪುಟ ವಿಸ್ತರಣೆ, ಯಾರಿಗೆ ಯಾವ ಖಾತೆ ಸಿಗಲಿದೆ?
ಉಪ ಚುನಾವಣೆ ಸೋಲಿನ ಹಿಂದಿನ ಕಾರಣ ಏನು ಎಂಬುದಕ್ಕೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಉತ್ತರ ಕೊಟ್ಟಿದ್ದಾರೆ. ಇತಿಹಾಸವನ್ನೊಮ್ಮೆ ನೋಡಿ ಸ್ವಾಮಿ ನಿಮಗೆ ಅರ್ಥವಾಗುತ್ತದೆ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ.
ಜೆಡಿಎಸ್ ಸೋಲಿನ ಹಿಂದಿನ ಇತಿಹಾಸ ಹೀಗಿದೆ
ವಿಧಾನಸೌಧದಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಇತಿಹಾಸದ ಪಾಠ ಮಾಡಿದ್ದಾರೆ. ಈ ಹಿಂದಿನ ಇತಿಹಾಸವನ್ನೆಲ್ಲ ಒಮ್ಮೆ ನೋಡುತ್ತಾ ಬನ್ನಿ. ಯಾವ ಪಕ್ಷ ಅಧಿಕಾರದಲ್ಲಿ ಇರುತ್ತದೆಯೋ ಆ ಪಕ್ಷವೇ ಉಪ ಚುನಾವಣೆಗಳಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದಿದ್ದಾರೆ.
ಉಪ ಚುನಾವಣೆ ಗೆಲುವು ಹೇಗೆ ಅಂತಾ ಗೊತ್ತಿಲ್ಲವೇ?
ಅಲ್ಲದೇ ಉಪ ಚುನಾವಣೆಯಲ್ಲಿ ಅವರೆಲ್ಲ ಹೇಗೆ ಗೆದ್ದರು, ಏನು ಮಾಡಿದರೂ ಎಂಬುದು ಎಲ್ಲರಿಗೂ ಗೊತ್ತಿದೆ. ಅದರ ಬಗ್ಗೆ ನಾನು ಮತ್ತೆ ಮಾತನಾಡಲು ಹೋಗುವುದಿಲ್ಲ. ಜನರು ಇದೀಗ ಮುಖ್ಯಮಂತ್ರಿ ಯಡಿಯೂರಪ್ಪರನ್ನು ಬೆಂಬಲಿಸಿದ್ದಾರೆ. ಅದನ್ನು ನಾವು ಒಪ್ಪಿಕೊಳ್ಳಬೇಕಷ್ಟೇ ಎಂದು ಹೇಳಿದರು.
ಮತದಾರರಿಗೆ ಮಂತ್ರ ಹಾಕಿತಾ ಬಿಜೆಪಿ?
ರಾಜ್ಯದ ಮತದಾರರಿಗೆ ಉಪ ಚುನಾವಣೆಯಲ್ಲಿ ಬಿಜೆಪಿಯವರು ಮಂತ್ರ ಹಾಕಿದ್ದಾರೆ ಎಂದು ಶಿವಲಿಂಗೇಗೌಡ ಆರೋಪಿಸಿದ್ದಾರೆ. ನಾಯಕರನ್ನು ಮಂತ್ರಿ ಮಾಡುತ್ತೇವೆ ಎಂದು ಹೇಳುತ್ತಲೇ ಜನರಿಗೆ ಮಂತ್ರ ಹಾಕಿದ್ದಾರೆ. ಹೀಗಾಗಿ ಮತದಾರರು ತಮ್ಮ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿದ್ದಾರೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿದರು.
ನಾವು ವೋಟ್ ಬ್ಯಾಂಕ್ ಕಳೆದುಕೊಂಡಿಲ್ಲ
ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಸೋಲಿನ ಬಗ್ಗೆಯೂ ಶಾಸಕ ಶಿವಲಿಂಗೇಗೌಡ ಪ್ರತಿಕ್ರಿಯೆ ನೀಡಿದರು. ಈಗ ಏನಾದರೂ ಮಾತನಾಡಿದರೆ, ಕೈಯಲ್ಲಿ ಆಗದವರು ಎನ್ನುತ್ತಾರೆ. ಹೀಗಾಗಿ ಸೋಲಿನ ಬಗ್ಗೆ ನಾನೇನೂ ಹೇಳುವುದಿಲ್ಲ. ಇವಿಎಂ ಬಗ್ಗೆ ನಮಗೆ ಯಾವುದೇ ಸಂದೇಹವೂ ಇಲ್ಲ. ಕೆ.ಆರ್.ಪೇಟೆಯಲ್ಲಿ ನಮ್ಮ ಮತಗಳು ನಮಗೆ ಇದ್ದೇ ಇವೆ. ಜೆಡಿಎಸ್ ಎಲ್ಲೂ ನೆಲೆ ಕಳೆದುಕೊಂಡಿಲ್ಲ ಎಂದರು.