ಒಮ್ಮೆಯೂ ಚುನಾವಣೆ ಗೆಲ್ಲದ ಅಭ್ಯರ್ಥಿಗೆ, ಕಾಂಗ್ರೆಸ್ ಮತ್ತೆಮತ್ತೆ ಟಿಕೆಟ್
ಡಿಸೆಂಬರ್ ಐದರಂದು ನಡೆಯಲಿರುವ ಹದಿನೈದು ಕ್ಷೇತ್ರಗಳ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಡಿಸೆಂಬರ್ 9ರಂದು ಈ ಕ್ಷೇತ್ರಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.
ಮೂರು ಪಕ್ಷಗಳಲ್ಲಿ ಬಿಜೆಪಿಗೆ ಬಂಡಾಯದ ಬಿಸಿ ತುಸು ಹೆಚ್ಚೇ ತಟ್ಟಿದೆ. ಹೊಸಕೋಟೆಯಲ್ಲಿ ನೇರವಾಗಿ ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ವಿರುದ್ದ ವಾಗ್ದಾಳಿ ನಡೆಸಿ, ಪಕ್ಷದಿಂದ ಉಚ್ಚಾಟಿಸಿರುವುದಾಗಿ ಹೇಳಿದ್ದಾರೆ.
ಶಿವಾಜಿನಗರ: ರಿಜ್ವಾನ್ ಅರ್ಷದ್ ಗೆ ಕಾಂಗ್ರೆಸ್ ಮುಖಂಡರಿಂದಲೇ ವಿರೋಧ
ಇನ್ನು ಕಾಂಗ್ರೆಸ್ ನಲ್ಲೂ ಭಿನ್ನಮತದ ಹೊಗೆ ಬೀಸುತ್ತಿದೆ. ಶಿವಾಜಿನಗರ ಕ್ಷೇತ್ರದಲ್ಲಿ ಮಾತ್ರ ಸ್ವಲ್ಪ ಹೆಚ್ಚಾಗಿಯೇ ಇದೆ. ಪಕ್ಷದ ಅಭ್ಯರ್ಥಿ ರಿಜ್ವಾನ್ ಅರ್ಷದ್ ನಾಮಪತ್ರ ಸಲ್ಲಿಸುವ ವೇಳೆ, ಹಿರಿಯ ಮುಖಂಡರು ಗೈರಾಗಿದ್ದರು.
ಸಿದ್ದರಾಮಯ್ಯನವರೇ 'ನೀನೇ ಸಾಕಿದ ಗಿಣಿ, ನಿನ್ನಾ ಹದ್ದಾಗಿ ಕುಕ್ಕಿತಲ್ಲೋ'
ಶಿವಾಜಿನಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟಿಗಾಗಿ ಭಾರೀ ಸ್ಪರ್ದೆ ಏರ್ಪಟ್ಟಿತ್ತು. ಕೊನೆಗೂ, ಟಿಕೆಟ್ ಗಿಟ್ಟಿಸುವಲ್ಲಿ ರಿಜ್ವಾನ್ ಯಶಸ್ವಿಯಾಗಿದ್ದರು. ಇದು, ಹಲವು ಮುಖಂಡರ ಸಿಟ್ಟಿಗೆ ಕಾರಣವಾಗಿದೆ. ಒಮ್ಮೆಯೂ ನೇರ ಚುನಾವಣೆ ಗೆಲ್ಲದ ಅಭ್ಯರ್ಥಿಗೆ, ಕಾಂಗ್ರೆಸ್ ಮತ್ತೆಮತ್ತೆ ಟಿಕೆಟ್
ರಿಜ್ವಾನ್ ಅರ್ಷದ್ ನಾಮಪತ್ರ ಸಲ್ಲಿಕೆ
ರೋಷನ್ ಬೇಗ್ ರಾಜೀನಾಮೆಯಿಂದಾಗಿ ತೆರವಾಗಿರುವ ಶಿವಾಜಿನಗರ ಕ್ಷೇತ್ರಕ್ಕೆ ಚುನಾವಣೆ ನಡೆಯುತ್ತಿದ್ದು, ಸುಮಾರು ಇಪ್ಪತ್ತು ಜನರು ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದರು. ಆದರೆ ಇವರ ನಡುವೆ ರಿಜ್ವಾನ್ ಅರ್ಷದ್ಗೆ ಟಿಕೆಟ್ ನೀಡಲಾಗಿದೆ. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಶಾಂತಿನಗರ ಶಾಸಕ ಎನ್.ಎ.ಹ್ಯಾರಿಸ್, ಐವಾನ್ ಡಿಸೋಜ ಮುಂತಾದವರು ಮಾತ್ರ ರಿಜ್ವಾನ್ ಅರ್ಷದ್ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.
ಇದುವರೆಗೂ ನೇರವಾಗಿ ಚುನಾವಣೆಯನ್ನು ಗೆದ್ದವರಲ್ಲ
ವಿಧಾನ ಪರಿಷತ್ ಸದಸ್ಯರಾಗಿರುವ ರಿಜ್ವಾನ್ ಅರ್ಷದ್ ಇದುವರೆಗೂ ನೇರವಾಗಿ ಚುನಾವಣೆಯನ್ನು ಗೆದ್ದವರಲ್ಲ. ಇದೇ ಕಾರಣಕ್ಕಾಗಿ, ಅವರಿಗೆ ಟಿಕೆಟ್ ನೀಡುವುದಕ್ಕೆ ಕಾಂಗ್ರೆಸ್ಸಿನಲ್ಲೇ ವಿರೋಧ ವ್ಯಕ್ತವಾಗಿತ್ತು. ರಿಜ್ವಾನ್ ಅರ್ಷದ್ ಎದುರಿಸುತ್ತಿರುವ ಮೂರನೇ ಚುನಾವಣೆಯಿದು. ಈ ಹಿಂದೆ, ಎರಡು ಬಾರಿ ಸೋತಿದ್ದರೂ, ಪಕ್ಷದ ಆಯಕಟ್ಟಿನ ಮುಖಂಡರ ಕೃಪಾಕಟಾಕ್ಷ ಇವರ ಮೇಲೆ ಜೋರಾಗಿಯೇ ಇದೆ.
ಮೊದಲ ಪ್ರಯತ್ನದಲ್ಲೇ ಸೋಲು ಅನುಭವಿಸಿದ್ದರು
2014ರಲ್ಲಿ ರಿಜ್ವಾನ್ ಅರ್ಷದ್ ಮೊದಲ ಬಾರಿಗೆ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದರು ಮತ್ತು ಮೊದಲ ಪ್ರಯತ್ನದಲ್ಲೇ ಸೋಲು ಅನುಭವಿಸಿದ್ದರು. ರಿಜ್ವಾನ್, ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಪಿ.ಸಿ.ಮೋಹನ್ ವಿರುದ್ದ 1,37,500 ಮತಗಳಿಂದ ಪರಾಭವಗೊಂಡಿದ್ದರು. ಮೋಹನ್ ಗೆ 5,57,130 ಮತಗಳು, ರಿಜ್ವಾನ್ ಗೆ 4,19,630 ಮತಗಳು ಬಿದ್ದಿದ್ದವು.
2019ರ ಲೋಕಸಭಾ ಚುನಾವಣೆ
2019ರ ಲೋಕಸಭಾ ಚುನಾವಣೆಯಲ್ಲೂ ರಿಜ್ವಾನ್ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ರಿಜ್ವಾನ್, ಮತ್ತೆ, ಬಿಜೆಪಿಯ ಪಿ.ಸಿ.ಮೋಹನ್ ವಿರುದ್ದ ಸೋಲು ಅನುಭವಿಸಿದ್ದರು. ಪಿ.ಸಿ.ಮೋಹನ್ ಗೆ 6,02,853 ಮತಗಳು ಬಿದ್ದರೆ, ರಿಜ್ವಾನ್ ಅರ್ಷದ್ ಗೆ 5,31,885 ಮತಗಳು ಬಂದಿದ್ದವು. ರಿಜ್ವಾನ್, 70,968 ಮತಗಳ ಅಂತರದಿಂದ ಸೋಲುಂಡಿದ್ದರು.
ಎರಡು ಸೋಲಿನ ನಂತರ ರಿಜ್ವಾನ್ ಅರ್ಷದ್ ಮತ್ತೆ ತಮ್ಮ 'ನಸೀಬ್' ಪರೀಕ್ಷೆಗೊಡ್ಡಿದ್ದಾರೆ
ಎರಡು ಸೋಲಿನ ನಂತರ ರಿಜ್ವಾನ್ ಅರ್ಷದ್ ಮತ್ತೆ ತಮ್ಮ 'ನಸೀಬ್' ಪರೀಕ್ಷೆಗೊಡ್ಡಿದ್ದಾರೆ. ರಿಜ್ವಾನ್ ಹೊರತಾಗಿ ಬೇರೆ ಯಾರಿಗಾದರೂ ಟಿಕೆಟ್ ನೀಡಿದರೂ ನಾನು ಬೆಂಬಲಿಸುತ್ತೇನೆ ಎಂದು ರೋಷನ್ ಬೇಗ್ ಹೇಳಿದ್ದರು. ಮತ್ತೆಮತ್ತೆ ಸೋಲುವ ಅಭ್ಯರ್ಥಿಗೆ ಟಿಕೆಟ್ ನೀಡಿದ್ದು ಸರಿಯೇ ಎನ್ನುವುದು ಕಾರ್ಯಕರ್ತರ ಆಕ್ರೋಶ. ಈ ಬಾರಿಯಾದರೂ, ರಿಜ್ವಾನ್ ನೇರ ಚುನಾವಣೆಯಲ್ಲಿ ಗೆಲ್ಲುತ್ತಾರಾ? ಕಾದು ನೋಡಬೇಕಿದೆ.