ಬಜೆಟ್ 2021; ಜಿಲ್ಲಾ ಕೇಂದ್ರ ಘೋಷಣೆ ನಿರೀಕ್ಷೆಯಲ್ಲಿ ಬೆ. ಗ್ರಾಮಾಂತರ
ಬೆಂಗಳೂರು, ಮಾರ್ಚ್ 04: ರಾಜಧಾನಿ ಬೆಂಗಳೂರು ಜೊತೆ ಗಡಿಯನ್ನು ಹಂಚಿಕೊಂಡರೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಭಿವೃದ್ಧಿಯ ವಿಚಾರದಲ್ಲಿ ಇನ್ನೂ ನಿರೀಕ್ಷಿತ ವೇಗವನ್ನು ಪಡೆದುಕೊಂಡಿಲ್ಲ. ಮಾರ್ಚ್ 8ರಂದು ಮಂಡನೆಯಾಗಲಿರುವ ಬಜೆಟ್ನಲ್ಲಿ ಹಲವಾರು ನಿರೀಕ್ಷೆಗಳನ್ನು ಜಿಲ್ಲೆ ಇಟ್ಟುಕೊಂಡಿದೆ.
ದಶಕಗಳ ಹಿಂದೆ ಬೆಂಗಳೂರಿನಿಂದ ಬೇರ್ಪಟ್ಟು ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚನೆಗೊಂಡಿತು. ರಾಮನಗರ ಜಿಲ್ಲೆ ರಚನೆಯಾದ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4 ತಾಲೂಕುಗಳು ಉಳಿದವು.
ಕರ್ನಾಟಕ ಬಜೆಟ್ 2021: ಸಾಂಸ್ಕೃತಿಕ ನಗರಿ ಮೈಸೂರು ಜಿಲ್ಲೆಯ ನಿರೀಕ್ಷೆಗಳೇನು?
ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ಮತ್ತು ಹೊಸಕೋಟೆ ತಾಲೂಕು ಕೇಂದ್ರಗಳು ಜಿಲ್ಲೆಯ ವ್ಯಾಪ್ತಿಯಲ್ಲಿವೆ. ಈ ತಾಲೂಕು ಕೇಂದ್ರಗಳು ಬೆಂಗಳೂರು ನಗರಕ್ಕೆ ಈಗಾಗಲೇ ಸಂಪರ್ಕಗೊಂಡಿವೆ. ಆದರೆ ಅಭಿವೃದ್ಧಿ ವಿಚಾರದಲ್ಲಿ ಮಾತ್ರ ಬೆಳವಣಿಗೆ ಕಾಣಬೇಕಿದೆ.
ಕರ್ನಾಟಕ ಬಜೆಟ್ 2021: ಉಡುಪಿ ಜಿಲ್ಲೆಯ ಜನರ ನಿರೀಕ್ಷೆಗಳು
ಜಿಲ್ಲೆಯ ನಾಲ್ಕು ತಾಲೂಕುಗಳನ್ನು ಸ್ಯಾಟಲೈಟ್ ಟೌನ್ಗಳಾಗಿ ಅಭಿವೃದ್ಧಿಪಡಿಸಿದರೆ ಸಹಾಯಕವಾಗಲಿದೆ ಎಂಬುದು ಬೇಡಿಕೆಯಾಗಿದೆ. ಇದರಿಂದಾಗಿ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗಲಿದ್ದು, ಜನರು ಉದ್ಯೋಗ ಹುಡುಕಿಕೊಂಡು ಬೆಂಗಳೂರು ನಗರಕ್ಕೆ ಹೋಗುವುದು ತಪ್ಪಲಿದೆ.
ಜಿಲ್ಲಾ ಕೇಂದ್ರವೇ ಇಲ್ಲ: ಬೆಂಗಳೂರು ಗ್ರಾಮಾಂತರ ಜಿಲ್ಲೆ ರಚನೆಗೊಂಡಿದ್ದರೂ ಜಿಲ್ಲಾ ಕೇಂದ್ರವೇ ಇಲ್ಲವಾಗಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಒಡಲಲ್ಲಿ ಇಟ್ಟುಕೊಂಡಿರುವ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡಬೇಕು ಎಂಬುದುದ ಪ್ರಮುಖ ಬೇಡಿಕೆಯಾಗಿದೆ.
2014ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರ ಘೋಷಣೆ ಬಗ್ಗೆ ಬೆಂಗಳೂರಿನಲ್ಲಿ ಸಭೆ ನಡೆದಿತ್ತು. ನಾಲ್ಕು ತಾಲೂಕುಗಳ ಶಾಸಕರ ಸಭೆ ನಡೆಸಿ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಘೋಷಣೆ ಮಾಡುವುದು ಎಂದು ಅಭಿಪ್ರಾಯವನ್ನು ಸಂಗ್ರಹ ಮಾಡಲಾಗಿತ್ತು.
ಹೊಸಕೋಟೆ ಕ್ಷೇತ್ರದ ಬಿಜೆಪಿ ನಾಯಕ ಎಂಟಿಬಿ ನಾಗರಾಜ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದಾರೆ. ಆದ್ದರಿಂದ, ಈ ಬಾರಿ ಜಿಲ್ಲೆಗೆ ಹಲವು ಕೊಡುಗೆಗಳು ಸಿಗಬಹುದು ಎಂಬ ನಿರೀಕ್ಷೆ ಜನರದ್ದಾಗಿದೆ.
ಕುಡಿಯುವ ನೀರು ಪೂರೈಕೆ, ಜಿಲ್ಲಾ ಮಟ್ಟದಲ್ಲೇ ಉದ್ಯೋಗ ಕಲ್ಪಿಸುವುದು, ತಾಲೂಕಿನ ಕೆರೆಗಳನ್ನು ತುಂಬಿಸುವುದು, ಜಿಲ್ಲೆಯ ಪ್ರವಾಸೋದ್ಯಮ ಕ್ಷೇತ್ರಗಳ ಅಭಿವೃದ್ಧಿ, ಬೆಂಗಳೂರು ನಗರಕ್ಕೆ ಸಾರಿಗೆ ಸಂಪರ್ಕ ಉತ್ತಮ ಪಡಿಸುವುದು ಸೇರಿದಂತೆ ಹಲವಾರು ಬೇಡಿಕೆಗಳು ಜಿಲ್ಲೆಯಲ್ಲಿವೆ.
ದೇವನಹಳ್ಳಿಯಲ್ಲಿ ಜಿಲ್ಲಾ ಆಸ್ಪತ್ರೆ ನಿರ್ಮಾಣವಾಗಬೇಕು. ದೇವನಹಳ್ಳಿ-ವಿಜಯಪುರಗಳನ್ನು ಹುಬ್ಬಳ್ಳಿ-ಧಾರವಾಡದಂತೆ ಅವಳಿ ನಗರವಾಗಿ ಅಭಿವೃದ್ಧಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳು ಇವೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ತಂದು ಸುರಿಯಲಾಗುತ್ತದೆ. ಜಿಲ್ಲೆ ಕಸ ತಂದು ಸುರಿಯುವ ತೊಟ್ಟಿಯಾಗಬಾರದು ಎಂಬುದು ಜನರ ಆಗ್ರಹವಾಗಿದೆ.
ಕರ್ನಾಟಕ ಬಜೆಟ್ 2021: ಪ್ರವಾಸಿ ಜಿಲ್ಲೆ ಕೊಡಗು ಜನತೆಯ ನಿರೀಕ್ಷೆಗಳೇನು?
ಬೆಂಗಳೂರು ನಗರದ ಮೆಜೆಸ್ಟಿಕ್ಗೆ ತಾಲೂಕುಗಳಿಂದ ರೈಲು ಸಂಪರ್ಕದ ವ್ಯವಸ್ಥೆ ಮಾಡಬೇಕು ಎಂಬುದು ಜನರ ಬೇಡಿಕೆಯಾಗಿದೆ. ಉದ್ಯೋಗಕ್ಕಾಗಿ ನಿತ್ಯ ತಾಲೂಕುಗಳಿಂದ ಸಾವಿರಾರು ಜನರು ಬೆಂಗಳೂರು ನಗರಕ್ಕೆ ಪ್ರಯಾಣ ಬೆಳೆಸುತ್ತಾರೆ. ಅವರಿಗೆ ಇದರಿಂದ ಸಹಾಯಕವಾಗಲಿದೆ ಎಂಬ ಬೇಡಿಕೆಯೂ ಇದೆ.
ದೊಡ್ಡಬಳ್ಳಾಪುರದಲ್ಲಿ ಶತಮಾನಗಳಿಂದಲೂ ರೇಷ್ಮೆ ಸೀರೆ ನೇಯುವ ನೇಕಾರಿಕೆ ನಡೆಯುತ್ತಿದೆ. ಬಜೆಟ್ನಲ್ಲಿ ಈ ಸೀರೆಗಳಿಗೆ ಬ್ರ್ಯಾಡಿಂಗ್ ನೀಡಬೇಕು. ನೇಕಾರ ಕುಟುಂಬಗಳಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂಬ ಬೇಡಿಕೆಯನ್ನು ಇಡಲಾಗಿದೆ.
Recommended Video
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಉಸ್ತುವಾರಿ ಸಚಿವರು ಕಂದಾಯ ಸಚಿವ ಆರ್. ಅಶೋಕ. ಆದ್ದರಿಂದ, ಬಜೆಟ್ ಬಗ್ಗೆ ನಿರೀಕ್ಷೆಗಳು ಹೆಚ್ಚಿದ್ದು, ಜಿಲ್ಲಾ ಕೇಂದ್ರ ಘೋಷಣೆ ಬಗ್ಗೆ ಜನರು ಕಾಯುತ್ತಿದ್ದಾರೆ.