ರಾಣೆಬೆನ್ನೂರಿನ ಬಿಜೆಪಿ ಯುವ ಮೋರ್ಚಾದಿಂದ ರಾಹುಲ್ ಗೆ ಹೊಸ ಅಂಗಿ ರವಾನೆ
ಬೆಂಗಳೂರು, ಜನವರಿ 19: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಹರಿದ ಕುರ್ತಾ ತೋರಿಸಿ, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅದಾದ ಕೆಲ ದಿನಕ್ಕೆ ಕರ್ನಾಟಕ ಬಿಜೆಪಿ ಯುವ ಘಟಕದಿಂದ ರಾಹುಲ್ ಗಾಮ್ಧಿ ಅವರಿಗೆ ಹೊಚ್ಚ ಹೊಸ ಅಂಗಿಯನ್ನು ಕೊರಿಯರ್ ಮೂಲಕ ಕಳಿಸಲಾಗಿದೆ.
ರಾಣೆಬೆನ್ನೂರಿನ ಬಿಜೆಪಿ ಯುವ ಮೋರ್ಚಾದಿಂದ ಅಂಗಿಯೊಂದನ್ನು ಕೊರಿಯರ್ ಮಾಡಿದ್ದು, ಇದನ್ನು ಫೇಸ್ ಬುಕ್ ನಲ್ಲಿ ಲೈವ್ ಕೂಡ ಮಾಡಲಾಗಿದೆ. "ರಾಹುಲ್ ಅವರು ಕುರ್ತಾ ಹರಿದಿದೆ ಎಂದು ತೋರಿಸಿದರು. ಅಪನಗದೀಕರಣದ ನಂತರ 4 ಸಾವಿರ ಬಿಟ್ಟರೆ ಅವರ ಬಳಿ ಏನೂ ಇಲ್ಲ ಅನ್ನೋದು ನಮಗೆ ಗೊತ್ತಿದೆ. ಆದ್ದರಿಂದ ಹೊಸ ಬಿಳಿ ಅಂಗಿಯೊಂದನ್ನು ಕೊರಿಯರ್ ಮಾಡಿದ್ದೇವೆ. ಅವರಿನ್ನು ಹರಿದ ಕುರ್ತಾ ಹಾಕುವ ಅಗತ್ಯ ಇಲ್ಲ" ಎಂದು ಬಿಜೆಪಿ ಸದಸ್ಯ ಉದಯ್ ಹೇಳಿದ್ದಾರೆ.[ಆರ್ ಎಸ್ಎಸ್ ಕೇಂದ್ರ ಕಚೇರೀಲಿ 52 ವರ್ಷ ತ್ರಿವರ್ಣ ಧ್ವಜ ಇರ್ಲಿಲ್ಲ: ರಾಹುಲ್]
ಉತ್ತರಾಖಂಡದ ಹೃಷಿಕೇಶದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ರಾಹುಲ್ ಮಾತನಾಡುತ್ತಾ, ತಮ್ಮ ಹರಿದ ಕುರ್ತಾ ತೋರಿಸಿದ್ದರು. ಜತೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಈ ರೀತಿ ಹರಿದ ಕುರ್ತಾ ಧರಿಸಿರುವುದನ್ನು ನೋಡಲು ಸಾಧ್ಯವಿಲ್ಲ ಎಂದು ಕೂಡ ಹೇಳಿದ್ದರು.