Breaking: ಮತ್ತೆ ಮತ್ತೆ ಸಿಎಂ ಬೊಮ್ಮಾಯಿ ಜನೋತ್ಸವ ಮುಂದೂಡಿಕೆ
ಬೆಂಗಳೂರು, ಆಗಸ್ಟ್ 18: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿಯು ಜನೋತ್ಸವ ನಡೆಸಲು ನಿರ್ಧರಿಸಿತ್ತು. ಆದರೆ ಇದು ಪದೇ ಪದೇ ಮುಂದೂಡಿಕೆಯಾಗುತ್ತಿದೆ.
ದೊಡ್ಡಬಳ್ಳಾಪುರದಲ್ಲಿ ಆಗಸ್ಟ್ 28ರಂದು ಈ ಜನೋತ್ಸವ ಮೆರವಣಿಗೆ ನಡೆಸಲಾಗುವುದು ಎಂದು ನಿನ್ನೆಯಷ್ಟೇ ಕೇಳಿ ಬಂದಿತ್ತು. ಅಷ್ಟರಲ್ಲಾಗಲೇ ಮತ್ತೆ ಮುಂದೂಡಿಕೆಯಾಗುತ್ತಿರುವುದನ್ನು ಪಕ್ಷ ದೃಢಪಡಿಸಿದೆ. ಆಗಸ್ಟ್ 28 ರಂದು ಬಿಜೆಪಿ ನಡೆಸಲು ಉದ್ದೇಶಿಸಿದ್ದ ಜನೋತ್ಸವ ಮೆರವಣಿಗೆ ಮುಂದೂಡಲಾಗಿದ್ದು, ಸೆಪ್ಟೆಂಬರ್ 11 ಕ್ಕೆ ನಡೆಸುವ ಸಾಧ್ಯತೆ ಇದೆ.
ಕಳೆದ ಜುಲೈ 28ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಅಂದೇ ದೊಡ್ಡಬಳ್ಳಾಪುರದಲ್ಲಿ ದೊಡ್ಡ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಆದರೆ ಜುಲೈ 26 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟರ್ ಹತ್ಯೆಯ ಆಕ್ರೋಶದ ನಂತರ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು.
ಇದರಿಂದಾಗಿ ಆಗಸ್ಟ್ 28 ರಂದು ಮತ್ತೆ ದೊಡ್ಡಬಳ್ಳಾಪುರದಲ್ಲಿ ಕಾರ್ಯಕ್ರಮ ನಡೆಯಲಾಗುತ್ತದೆ ಎನ್ನಲಾಗಿತ್ತು. ಆದರೆ, ಈ ತಿಂಗಳ 28 ರ ಆಸುಪಾಸಿನಲ್ಲಿಯೇ ಗೌರಿ-ಗಣೇಶ ಹಬ್ಬ ಇರುವುದರಿಂದ ಜನೋತ್ಸವದಲ್ಲಿ ಪಕ್ಷದ ನಾಯಕರು, ಸಚಿವರು, ಶಾಸಕರು ಮತ್ತು ಕಾರ್ಯಕರ್ತರು ಪೂರ್ಣ ಪ್ರಮಾಣದಲ್ಲಿ ಪಾಲ್ಗೊಳ್ಳುವುದು ಕಷ್ಟ ಎನ್ನುವ ಕಾರಣಕ್ಕೆ ಮುಂದೂಡಲಾಗಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ.
ಈ ಬಗ್ಗೆ ಮೊದಲೆ ಮಾಹಿತಿ ತಿಳಿಸಿದ್ದ ಕಾಂಗ್ರೆಸ್, ಬೊಮ್ಮಾಯಿಯವರ ಕಾಲೆಳೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೈಗೊಂಬೆ ಎಂದಿರುವ ಕಾಂಗ್ರೆಸ್, "ಮತ್ತೊಮ್ಮೆ ಜನೋತ್ಸವ ಮುಂದೂಡಲಾಗಿದೆಯಂತೆ. ಬಿಜೆಪಿ ಜನೋತ್ಸವ ಮಾಡುತ್ತಿರುವ ಸಿಎಂ ಬೊಮ್ಮಾಯಿಯವರಿಗೆ ಜನೋತ್ಸವ ಮಾಡುವ ಶಕ್ತಿಯೂ ಇರಲಿಲ್ಲ, ಈಗ ಯೋಗವೂ ಇಲ್ಲ ಎಂದೆನಿಸುತ್ತದೆ! ಸುರೇಶ್ ಗೌಡರ 'ಸಿಎಂ ಬದಲಾವಣೆ' ಹೇಳಿಕೆಗೂ, ಮುಂದಿನ ಸಿಎಂ ನಿರಾಣಿ ಎಂಬ ಪೋಸ್ಟರ್ಗೂ ಹಾಗೂ ಜನೋತ್ಸವದ ಮುಂದೂಡಿಕೆಗೂ ಸಂಬಂಧವಿದೆಯೇ ಬಿಜೆಪಿ?" ಎಂದು ಪ್ರಶ್ನಿಸಿದೆ.
ಮುಂದುವರೆದು, "ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾಲಿ ಕುರ್ಚಿ ಉತ್ಸವವನ್ನು ಕಂಡ ಬಸವರಾಜ ಬೊಮ್ಮಾಯಿಯವರು ಜನೋತ್ಸವ ಮಾಡಲು ಹೆದರಿದ್ದಾರೆ! ಬಿಜೆಪಿಯೊಳಗೆ 'ಕಲಹೋತ್ಸವ' ನಡೆಯುತ್ತಿರುವಾಗ, ಬೊಮ್ಮಾಯಿಯವರು 'ಆತಂಕೋತ್ಸವ'ಎದುರಿಸುತ್ತಿರುವಾಗ, ಸರ್ಕಾರದಲ್ಲಿ ಬಿಜೆಪಿ ಜನೋತ್ಸವ ನಡೆಯುತ್ತಿರುವಾಗ, ಜನರು ಬರುವುದುಂಟೇ, ಜನೋತ್ಸವ ನಡೆಯುವುದುಂಟೇ!" ಎಂದು ವ್ಯಂಗ್ಯವಾಡಿದೆ.