ಚುನಾವಣೆ ಸನಿಹದಲ್ಲೇ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ ಸರ್ಕಾರ
ಬೆಂಗಳೂರು, ಅಕ್ಟೋಬರ್ 22: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಕಾಮಗಾರಿಗಳು ಮತ್ತು ಯೋಜನೆಗಳಿಗೆ ರಾಜ್ಯ ಬಿಜೆಪಿ ಸರ್ಕಾರ ಅನುಮೋದನೆ ನೀಡಿದೆ.
ರಾಜ್ಯದಲ್ಲಿ ಡಿಸೆಂಬರ್ನಲ್ಲಿ ಉಪ ಚುನಾವಣೆಗಳು ನಡೆಯಲಿದ್ದು, ಚುನಾವಣಾ ನೀತಿ ಸಂಹಿತೆ ನವೆಂಬರ್ 11ರಿಂದ ಜಾರಿಗೆ ಬರಲಿದೆ. ಸಂಪುಟ ಸಭೆಯಲ್ಲಿ ಹೊಸ ನಿರ್ಧಾರಗಳಿಗೆ ಅನುಮೋದನೆ ನೀಡುವುದಕ್ಕೆ ನೀತಿ ಸಂಹಿತೆ ಅಡ್ಡಿಯಾಗುವುದೇ ಎಂಬ ಬಗ್ಗೆ ಚರ್ಚೆ ನಡೆಸಲಾಗಿತ್ತು ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದರು.
Recommended Video
ಸಂಪುಟ ಸಭೆಯ ಬಳಿಕ ವಿಧಾನಸಭೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮಾಧುಸ್ವಾಮಿ, ಬೆಂಗಳೂರಿನಲ್ಲಿ ಮಹಿಳೆಯರ ರಕ್ಷಣೆಗೆ ಸುರಕ್ಷಾ ದೀಪ, ಸಿಸಿಟಿವಿ ಕ್ಯಾಮೆರಾ ಅಳವಡಿಸುವ ಸಲುವಾಗಿ ನಿರ್ಭಯಾ ಯೋಜನೆಗೆ 667 ಕೋಟಿ ರೂ ನೀಡಲು ಒಪ್ಪಿಗೆ ಪಡೆಯಲಾಗಿದೆ ಎಂದು ತಿಳಿಸಿದರು.
ಆಶಾ ಕಾರ್ಯಕರ್ತೆಯರಿಗೆ ದಸರಾ ಉಡುಗೊರೆ ನೀಡಿದ ಯಡಿಯೂರಪ್ಪ ಸರ್ಕಾರ
ರಾಜ್ಯ ಸಚಿವ ಸಂಪುಟದ ಎಲ್ಲ ಸಚಿವರು ವಿವಿಧ ತಂಡಗಳಾಗಿ ಬುಧವಾರದಿಂದ ಇಡೀ ರಾಜ್ಯದಾದ್ಯಂತ ಪ್ರವಾಸ ಕೈಗೊಂಡು ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲಿದ್ದಾರೆ ಎಂದು ಅವರು ಹೇಳಿದರು.
ಕ್ಯಾಲ್ಸಿಯಂ ಮಾತ್ರೆ ಖರೀದಿಗೆ ಅನುದಾನ
ದೇವದುರ್ಗದಲ್ಲಿ ಮೂಲಸೌಕರ್ಯ ಕಲ್ಪಿಸಲು 92 ಕೋಟಿ ರೂ, ಚಿತ್ರದುರ್ಗ ಜಿಲ್ಲೆಯ ವಿವಿಧ ಕಟ್ಟಡಗಳಿಗೆ 28 ಕೋಟಿ ರೂ, ಬೆಳಗಾವಿ ಪೊಲೀಸ್ ಆಯುಕ್ತರ ಕಚೇರಿ ನಿರ್ಮಾಣಕ್ಕೆ 17 ಕೋಟಿ ರೂ. ನೀಡಲು ಅನುಮೋದನೆ ಸಿಕ್ಕಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕ್ಯಾಲ್ಸಿಯಂ ಮಾತ್ರೆ ಖರೀದಿಗೆ 14.37 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ.
ಕೃಷಿ ಅಭವೃದ್ಧಿ ನಿಗಮಕ್ಕೆ ಅನುದಾನ
ಕೃಷಿ ಅಭಿವೃದ್ಧಿ ನಿಗಮಕ್ಕೆ 400 ಕೋಟಿ ರೂ., ರಸಗೊಬ್ಬರ ದಾಸ್ತಾನಿಗೆ 400 ಕೋಟಿ ಸಾಲಕ್ಕೆ ಖಾತರಿ ನೀಡಲು ತೀರ್ಮಾನಿಸಲಾಗಿದೆ. ಏತ ನೀರಾವರಿಗೆ 311 ಕೋಟಿ, ಹಿರೇಕೆರೂರಿನ ರಟ್ಟೆಹಳ್ಳಿ ಕೆರೆ ನೀರು ಭರ್ತಿಮಾಡಲು 177 ಕೋಟಿ ರೂ., ಸಂಡೂರಿಗೆ 77.47 ಕೋಟಿ ರೂ ವೆಚ್ಚದಲ್ಲಿ ನೀರು ಸರಬರಾಜು ಮಾಡಲು ಒಪ್ಪಿಗೆ ದೊರೆತಿದೆ.
ನೆರೆ ಪರಿಹಾರಕ್ಕೆ ಪೂರಕ ಬಜೆಟ್: ಸಂಪುಟ ನಿರ್ಧಾರ
ವಿದ್ಯಾರ್ಥಿಗಳಿಗೆ ಸೋಪ್ ಕಿಟ್ ಖರೀದಿ
ಜಲಸಂಪನ್ಮೂಲ ಇಲಾಖೆಯಲ್ಲಿ 1,000 ಕೋಟಿ ರೂ. ಟರ್ಮ್ ಲೋನ್ ಸಂಗ್ರಹಕ್ಕೆ ಸೂಚನೆ ನೀಡಲಾಗಿದೆ. ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮಕ್ಕೆ 18 ಕೋಟಿ ರೂ ಸಾಲಕ್ಕೆ ಖಾತರಿ ನೀಡಲು ಒಪ್ಪಿಕೊಳ್ಳಲಾಗಿದೆ. ಸಿರಿಗಂಧ ಕಿಟ್ ಖರೀದಿಗೆ ಒಪ್ಪಿಗೆ ದೊರೆತಿದೆ. 18.62 ಕೋಟಿ ರೂ ವೆಚ್ಚಕ್ಕೆ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮೈಸೂರ್ ಸ್ಯಾಂಡಲ್ ಸಂಸ್ಥೆಯಿಂದ ಸೋಪ್ ಕಿಟ್ ಖರೀದಿ ಮಾಡಲು ಹಾಗೂ ಬೆಂಗಳೂರಿನ ಕೆಎಸ್ಆರ್ಪಿ ಖಾಲಿ ಜಾಗದಲ್ಲಿ ಗುಪ್ತವಾರ್ತೆ ಕಟ್ಟಡ ಅನುಮೋದನೆ ನೀಡಲಾಗಿದೆ ಎಂದು ಮಾಧುಸ್ವಾಮಿ ಮಾಹಿತಿ ನೀಡಿದರು.
ಪ್ರವಾಹ ಸಂತ್ರಸ್ತರ ಮನೆ ನಿರ್ಮಾಣಕ್ಕೆ ಸಾವಿರ ಕೋಟಿ ಬಿಡುಗಡೆ
ಪ್ರವಾಹದಿಂದ 11 ಮಂದಿ ಸಾವು
ಈ ಹಿಂದೆ ಮಾಡಿದಂತೆ ಸಚಿವರ ತಂಡ ರಚನೆ ಮಾಡಿ ಪ್ರವಾಹ ಸಂತ್ರಸ್ತರಿಗೆ ನೆರವಾಗಲು ಪರಿಹಾರ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಜತೆಗೆ ಎಲ್ಲ ಸಚಿವರು ರಾಜ್ಯದಾದ್ಯಂತ ಪ್ರವಾಸ ನಡೆಸಲಿದ್ದಾರೆ. ಮಳೆಯಿಂದ ಉಂಟಾದ ಪ್ರವಾಹದಿಂದಾಗಿ ಈವರೆಗೆ 84 ಮಂದಿ ಮೃತಪಟ್ಟಿದ್ದು, 14 ಜನರು ಕಣ್ಮರೆಯಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ ಈಗ ಎರಡು ದಿನಗಳಿಂದ ಮತ್ತೆ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, 11 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.
263 ಕೋಟಿ ರೂಗೆ ಟೆಂಡರ್
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಪಠ್ಯಪುಸ್ತಕಗಳನ್ನು, ಅಭ್ಯಾಸ ಪುಸ್ತಕಗಳನ್ನು, ದಿನಚರಿಗಳನ್ನು ಮತ್ತು ಸರಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಸಮವಸ್ತ್ರ ಬಟ್ಟೆಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ 263 ಕೋಟಿ ರೂಗಳಿಗೆ ಟೆಂಡರ್ ಕರೆಯಲು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕನ್ನಡ ಶಾಲೆಗಳನ್ನು ಉಳಿಸಲು, ಪ್ರೋತ್ಸಾಹಿಸಲು, ಬೆಳೆಸಲು ಅನುದಾನರಹಿತ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳಿಗೂ ಮಧ್ಯಾಹ್ನದ ಬಿಸಿ ಊಟ ಕಾರ್ಯಕ್ರಮ ವಿಸ್ತರಿಸಲು ಮುಖ್ಯಮಂತ್ರಿ ಒಪ್ಪಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.