ಕಟೀಲ್ ಅಭಿನಂದನೆ ನೆಪದಲ್ಲಿ ಬಿಜೆಪಿ ಒಗ್ಗಟ್ಟು ಪ್ರದರ್ಶನ
ಬೆಂಗಳೂರು, ಜನವರಿ 16: ಕರ್ನಾಟಕವನ್ನು ಮಾದರಿ ರಾಜ್ಯವಾಗಿ ಮಾಡುವ ಅನ್ನದಾತನ ಹೊಲಕ್ಕೆ ನೀರು, ಬೆಳೆದ ಬೆಳೆಗೆ ಸೂಕ್ತ ಬೆಲೆ ಕೊಡುವ ಜವಾಬ್ದಾರಿ ನಮ್ಮ ಮೇಲಿದೆ, ಮಾರ್ಚ್ 5ಕ್ಕೆ ಬಜೆಟ್ ನಿಗದಿಯಾಗಿದೆ, ಒಂದು ಒಳ್ಳೆ ಬಜೆಟ್ ಕೊಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಸಿಎಂ ಯಡಿಯೂರಪ್ಪ ಹೇಳಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಗೆ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದ್ದೇವೆ, ಅನ್ಯ ಪಕ್ಷಗಳಿಂದ 15-17 ಜನ ಶಾಸಕ ಸ್ಥಾನ ಮಂತ್ರಿ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬಂದ ಪರಿಣಾಮ ನಾವು ಇಂದು ಆಡಳಿತ ಪಕ್ಷವಾಗಲು ಸಾಧ್ಯವಾಗಿದೆ, ಹಾಗಾಗಿ ಅವರ ಅಭಿಪ್ರಾಯವನ್ನೂ ಪಡೆದು ಅವರನ್ನೂ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು' ಎಂದರು.
ಹಲವಾರು ಜನಾಂಗದ ಮುಖಂಡರು ಬಿಜೆಪಿಗೆ ಸೇರಲು ಸಾಲುಗಟ್ಟಿ ನಿಂತಿದ್ದಾರೆ, ಯಾರೆಲ್ಲಾ ಮುಖಂಡರು ಬಿಜೆಪಿಗೆ ಬಂದರೆ ನಮ್ಮ ಖುರ್ಚಿಗೆ ಸಂಚಕಾರ ಬರುತ್ತದೊ ಎಂಬ ಭಾವನೆ ಬಿಟ್ಟು, ಅವರನ್ನೂ ಪಕ್ಷಕ್ಕೆ ಸ್ವಾಗತಿಸಬೇಕು ಎಂದರು.
ರಾಜ್ಯಾಧ್ಯಕ್ಷ ನಳೀನ್ ಕಟಿಲ್ ಅನ್ನು ಹೊಗಳಿದ ಯಡಿಯೂರಪ್ಪ, 'ಇಂದಿನಿಂದ ಮೂರು ವರ್ಷಗಳ ಕಾಲ ಕರ್ನಾಟಕದಲ್ಲಿ ಬಿಜೆಪಿ ಕಟ್ಟುವ ದೊಡ್ಡ ಜವಾಬ್ದಾರಿ ಅವರ ಮೇಲೆ ಬಿದ್ದಿದೆ, ಬಹುಶಃ ಬಿಜೆಪಿ ಒಂದೇ ಈ ರೀತಿಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಅಧ್ಯಕ್ಷರ ಆಯ್ಕೆ ಮಾಡುವ ಪಕ್ಷ, ಕಟೀಲ್ ಸಹ ಎಲ್ಲ ಜಿಲ್ಲೆಗಳಿಗೆ ಎರಡು ಬಾರಿ ಪ್ರವಾಸ ಮಾಡಿ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ಪಕ್ಷದ ಬಲ ವರ್ಧನೆ ಮಾಡಿದ್ದಾರೆ' ಎಂದರು.
ಇದೇ ಜನವರಿ 18 ರಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹುಬ್ಬಳ್ಳಿಗೆ ಬರುತ್ತಿದ್ದಾರೆ, ಅಲ್ಲಿ ಒಂದು ಲಕ್ಷ ಜನರನ್ನು ಸೇರಿಸಿ, ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಷಿ ತಯಾರಿ ಮಾಡಿಕೊಂಡಿದ್ದಾರೆ ಎಂದರು.
ಕಾಂಗ್ರೆಸ್ನದ್ದು ಏಕಕುಟುಂಬ ಪ್ರವೃತ್ತಿ: ಜೋಷಿ
ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿಯವರಿಂದ ಮೊದಲುಗೊಂಡು ಜೆ.ಪಿ. ನಡ್ಡಾವರಗೆ ಮುಂದೆ ಯಾರು ಅಧ್ಯಕ್ಷರಾಗುತ್ತಾರೆ ಎಂಬುದು ಗೊತ್ತಾಗುವುದಿಲ್ಲ, ಆದರೆ ಕಾಂಗ್ರೆಸ್ ಪರಿಸ್ಥಿತಿ ಹಾಗಲ್ಲ, ಬಿಜೆಪಿಯದ್ದು ವಸುದೈವ ಕುಟಮಬಕಂ ಆದರೆ ಕಾಂಗ್ರೆಸ್ ನದ್ದು ಏಕಕುಟುಂಬಕಂ ಪ್ರವೃತ್ತಿ ಎಂದರು.
ಜೆಡಿಎಸ್-ಕಾಂಗ್ರೆಸ್ನ ಕುಟುಂಬ ರಾಜಕೀಯದ ಬಗ್ಗೆ ಲೇವಡಿ
'ರಾಹುಲ್ ಗಾಂಧಿ ರಾಜೀನಾಮೆ ಕೊಟ್ಟಾಗ ಮುಂದೇನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿದ್ದರು, ರಾಜ್ಯದಲ್ಲಿ ಹೀಗೆ ಒಂದೇ ಕುಟುಂಬದವರು ಸ್ಪರ್ಧೆ ಮಾಡಿದಾಗ, ತಾತ, ಮಗ, ಮೊಮ್ಮಕ್ಕಳು ಸ್ಪರ್ಧೆ ಮಾಡಿದ್ದರು, ಆದರೆ ರಾಜ್ಯದ ಜನ ಅವರಲ್ಲಿ ಒಬ್ಬರನ್ಬು ಬಿಟ್ಟು ಉಳಿದವರನ್ನೆಲ್ಲಾ ಸೋಲಿಸಿ ಮನೆಗೆ ಕಳಿಸಿದರು' ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ನ ಕುಟುಂಬ ರಾಜಕೀಯದ ವಿರುದ್ಧ ಹರಿಹಾಯ್ದರು.
ಕಾರ್ಯಕರ್ತರು ತಳಹದಿ ಹಾಕಿಕೊಡುತ್ತಾರೆ: ಜೋಷಿ
ನರೇಂದ್ರ ಮೋದಿ ಕುಟುಂಬದ ಬೆಂಬಲದಿಂದ ಗೆದ್ದು ಬಂದವರಲ್ಲ, ಕಾರ್ಯಕರ್ತರ ಬೆಂಬಲದೊಂದಿಗೆ ಇಲ್ಲಿ ಅಧ್ಯಕ್ಷರು ಕಾರ್ಯನಿರ್ವಹಿಸಬೇಕು, ಒಂದು ರೀತಿಯಲ್ಲಿ ಗೋಕುಲಾಷ್ಟಮಿಯಲ್ಲಿ ಮೊಸರುಗಡಿಗೆ ಒಡೆಯುವ ಸ್ಪರ್ಧೆಗೆ ಪಿರಮಿಡ್ ರಚನೆ ಮಾಡುತ್ತಾರಲ್ಲ ಹಾಗೆ, ಬಿಜೆಪಿಯಲ್ಲಿ ಕಾರ್ಯಕರ್ತರು ಬೇಸ್ ನಿರ್ಮಿಸಿಕೊಡುತ್ತಾರೆ ಎಂದು ಕಾರ್ಯಕರ್ತರ ಶ್ರಮವನ್ನು ಹೊಗಳಿದರು.
'ಕುಗ್ರಾಮದಿಂದ ಬಂದವರೂ ಅಧ್ಯಕ್ಷರಾಗಲು ಬಿಜೆಪಿಯಲ್ಲಿ ಸಾಧ್ಯ'
ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಮಾತನಾಡಿ, ಬಿಜೆಪಿ ಕೇಡರ್ ಆಧಾರಿತ ಪಕ್ಷ, ಇಲ್ಲಿ ಕುಗ್ರಾಮದಿಂದ ಬಂದಂತ ನನ್ನಂತವರು, ನಳೀನ್ ಕುಮಾರ್ ಕಟೀಲ್ ತರದವರು ಅಧ್ಯಕ್ಷರಾಗಲು ಸಾಧ್ಯ, ಒಬ್ಬ ಸಾಮಾನ್ಯ ಕಾರ್ಯಕರ್ತ ತನ್ನಪರಿಶ್ರಮದಿಂದ ಬೆಳೆಯುತ್ತಾ ಹೋಗುತ್ತಾರೆ ಎಂದರು.
ಕಟೀಲ್ಗೆ ಸದಾನಂದಗೌಡ ಕಿವಿಮಾತು
'ರಾಜ್ಯಾಧ್ಯಕ್ಷರಾದವರು ವಿಶಾಲ ಹೃದಯಹೊಂದಿರಬೇಕು, ಎಲ್ಲರೊಂದಿಗೆ ಪ್ರೀತಿಯಿಂದ ವ್ಯವಹರಿಸಬೇಕು, ಪ್ರತಿಯೊಬ್ಬ ಕಾರ್ಯಕರ್ತರ ಸಮಸ್ಯೆಗೆ ಕಿವಿಯಾಗಬೇಕು, ಅದನ್ನು ಪರಿಹರಿಸಬೇಕು' ಎಂದು ಸಲಹೆ ನೀಡಿದ ಸದಾನಂದಗೌಡ, ದಕ್ಷಿಣ ಕನ್ನಡ ಜಿಲ್ಲೆಯವರು ಸಂಘಟನೆಗೆ ಹೆಸರಾದವರು, ಕಟೀಲ್ ದಕ್ಷಿಣಕನ್ನಡ ಜಿಲ್ಲೆಯವರು, ನಾಯಕತ್ವದ ಗುಣ ಜಿಲ್ಲೆಯ ಜನರ ರಕ್ತದಲ್ಲೇ ಇದೆ ಎಂದರು.
ಕಾಂಗ್ರೆಸ್ನ ದೆಹಲಿ-ಬೆಂಗಳೂರು ಆಟದ ಬಗ್ಗೆ ಲೇವಡಿ
'ಕಾಂಗ್ರೆಸ್ನಲ್ಲಿ ಒಬ್ಬರು ದೆಹಲಿಗೆ ಹೋಗುವುದು, ಅವರು ಬಂದಿಳಿದ ಕೂಡಲೇ ಮತ್ತೊಬ್ಬರು ದೆಹಲಿಗೆ ಹೋಗುವುದು ಮಾಡುತ್ತಿದ್ದಾರೆ, ಅಂತಹಾ ಪರಿಸ್ಥಿತಿ ರಾಜ್ಯ ಬಿಜೆಪಿಯಲ್ಲಿ ಇಲ್ಲ, ಎಲ್ಲರ ಒಮ್ಮತದ ಅಭ್ಯರ್ಥಿಯಾಗಿ ನಳೀನ್ ಕುಮಾರ್ ಕಟೀಲ್ ಆಯ್ಕೆಯಾಗಿದ್ದಾರೆ' ಎಂದು ಹೇಳಿದರು.