ಬಿಟ್ಕಾಯಿನ್ ಅಕ್ರಮ: ವೈರಲ್ ಅಡಿಯೋ ಜಾಡು ಪತ್ತೆ ಮಾಡಿದ ಸಿಐಡಿ
ಬೆಂಗಳೂರು, ನ. 18: ರಾಜ್ಯ ರಾಜಕಾರಣದಲ್ಲಿ ಸಂಚಲನ ಹುಟ್ಟಿಸಿರುವ ಬಿಟ್ಕಾಯಿನ್ ಅಕ್ರಮದ ಕೇಂದ್ರ ಬಿಂದು ಹ್ಯಾಕರ್ ಶ್ರೀಕೃಷ್ಣ. ರಾಯಲ್ ಆರ್ಕೀಡ್ ಹೋಟೆಲ್ ಗಲಾಟೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದ ನಂತರ ಶ್ರೀಕಿ ಮತ್ತೆ ಕಣ್ಮರೆಯಾಗಿದ್ದಾನೆ.
ಇನ್ನೊಂದೆಡೆ ಹ್ಯಾಕರ್ ಶ್ರೀಕೃಷ್ಣನ ಆಪ್ತನ ವಿಚಾರಣೆಯಲ್ಲಿ ಬಿಟ್ಕಾಯಿನ್ ವೆಬ್ಸೈಟ್ ಮಾತ್ರವಲ್ಲದೇ ಫುಡ್ ಡೆಲಿವರಿ ವೆಬ್ ತಾಣಗಳನ್ನೂ ಹ್ಯಾಕ್ ಮಾಡಿರುವ ಸಂಗತಿ ಬಯಲಾಗಿದೆ. ಬಿಟ್ ಕಾಯಿನ್ ಅಕ್ರಮಕ್ಕೆ ಸಂಬಂಧಿಸಿದಂತೆ ವೈರಲ್ ಆಗಿದ್ದ ಪೊಲೀಸ್ ಅಡಿಯೋ ಮೂಲ ಕೂಡ ಪತ್ತೆ ಮಾಡಲಾಗಿದೆ.
ಫುಡ್ ಡೆಲಿವರಿ ಆಪ್ಗೂ ಕೈ ಇಟ್ಟಿದ್ದ ಶ್ರೀಕಿ :
ಅಂತಾರಾಷ್ಟ್ರೀಯ ಮಟ್ಟದ ಹ್ಯಾಕರ್ಗಳ ಸಂಪರ್ಕ ಇಟ್ಟುಕೊಂಡಿರುವ ಹ್ಯಾಕರ್ ಶ್ರೀಕೃಷ್ಣ ಫುಡ್ ಡೆಲಿವರಿ ಆಪ್ನ್ನು ಕೂಡ ಹ್ಯಾಕ್ ಮಾಡಿದ್ದ ಸಂಗತಿ ಇದೀಗ ಬಯಲಾಗಿದೆ. ಶ್ರೀಕಿ ಹ್ಯಾಕ್ ಮಾಡಿದ ಬಿಟ್ಕಾಯಿನ್ ಪಡೆದು ಹಣ ವರ್ಗಾವಣೆ ಮಾಡುತ್ತಿದ್ದ ರಾಬಿನ್ ಖಂಡೇಲ್ವಾಲಾನಿಂದ ವಶಪಡಿಸಿಕೊಂಡಿರುವ ಹಾರ್ಡ್ ಡಿಸ್ಕ್ಗಳಲ್ಲಿ ಮಹತ್ವದ ಮಾಹಿತಿ ಬಯಲಾಗಿದೆ. ಹ್ಯಾಖರ್ ಶ್ರೀಕೃಷ್ಣ Zomato ಸೇರಿದಂತೆ www.cashfree.com, www.payucash.com ಎಂಬ ವೆಬ್ ಸೈಟ್ಗಳನ್ನ ಹ್ಯಾಕ್ ಮಾಡಿರುವ ಸಂಗತಿ ಬಯಲಾಗಿದೆ. ರಾಬಿನ್ನಿಂದ ವಶಪಡಿಸಿಕೊಂಡಿರುವ ಹಾರ್ಡ್ ಡಿಸ್ಕ್ನಲ್ಲಿ ಈ ಮಾಹಿತಿ ಬಯಲಾಗಿದ್ದು, ಇನ್ನೂ ನಾಲ್ಕು ಹಾರ್ಡ್ ಡಿಸ್ಕ್ಗಳನ್ನು ಸಿಸಿಬಿ ಪೊಲೀಸರು ವಿಶ್ಲೇಷಣೆಗೆ ಕಳುಹಿಸಿದ್ದಾರೆ. ಅದರಲ್ಲೂ ಸಹ ಹ್ಯಾಕರ್ ಶ್ರೀಕೃಷ್ಣನ ಬಿಟ್ ಕಾಯಿನ್ ಹ್ಯಾಕ್ ಲೀಲೆಗಳು ಹೊರ ಬರಲಿವೆ ಎಂದು ಹೇಳಲಾಗುತ್ತಿದೆ.
ವೈರಲ್ ಅಡಿಯೋ ಮೂಲ ಪತ್ತೆ:
ಇನ್ನು ಬಿಟ್ ಕಾಯಿನ್ ಅಕ್ರಮದಲ್ಲಿ ಯಾವೆಲ್ಲಾ ಪೊಲೀಸ್ ಅಧಿಕಾರಿಗಳು ಶಾಮೀಲಾಗಿದ್ದಾರೆ, ರಾಜಕಾರಣಿಗಳ ಕೈವಾಡ ಇದೆ ಎಂಬುದರ ಬಗ್ಗೆ ಪೊಲೀಸರ ನಡುವೆ ನಡೆದಿದ್ದ ಸಂಭಾಷಣೆಯ ಅಡಿಯೋ ಮೂಲವನ್ನು ಸಿಐಡಿ ಪೊಲೀಸರು ಪತ್ತೆ ಮಾಡಿದ್ದಾರೆ. ಸಿಐಡಿಯ ಮುಖ್ಯಪೇದೆ ಮತ್ತು ನಿವೃತ್ತ ಪಿಎಸ್ಐ ನಡುವೆ ಸಂಭಾಷಣೆ ನಡೆದಿದೆ. ಈ ಬಗ್ಗೆ ಆಂತರಿಕ ತನಿಖೆ ನಡೆಸಿ ಸಿಐಡಿ ಅಧಿಕಾರಿಗಳು ಡಿಜಿಪಿಗೆ ವರದಿ ನೀಡಿದ್ದಾರೆ.
ಸಿಐಡಿಯ ಹೆಡ್ಕಾನ್ಸ್ಟೇಬಲ್ಗೆ ನಿವೃತ್ತ ಪಿಎಸ್ಐ ಕರೆ ಮಾಡಿದ್ದಾರೆ. ಈ ಇಬ್ಬರ ನಡುವಿನ ಸಂಭಾಷಣೆಯನ್ನು ಮಹಿಳಾ ಐಪಿಎಸ್ ಅಧಿಕಾರಿ ಕೇಳಿಸಿಕೊಳ್ಳುತ್ತಿದ್ದರು. ನಿವೃತ್ತ ಸಬ್ ಇನ್ಸ್ಪೆಕ್ಟರ್ಗೆ ಪೋನ್ ಮಾಡಿ, ಬಿಟ್ ಕಾಯಿನ್ ಅಕ್ರಮದಲ್ಲಿ ಶಾಮೀಲಾಗಿರುವ ಪೊಲೀಸ್ ಅಧಿಕಾರಿಗಳ ಮಾಹಿತಿ ಕೇಳಿದ್ದರು. ಮೇಲಾಧಿಕಾರಿಯ ಮಾತಿನಂತೆ ಸಿಐಡಿ ಘಟಕದಲ್ಲಿ ಕಾರ್ಯನಿರ್ವಹಿಸುವ ಮುಖ್ಯ ಪೇದೆ ಜತೆ ನಿವೃತ್ತ ಪಿಎಸ್ಐ ಮಾತನಾಡಿದ್ದಾರೆ. ಇಬ್ಬರ ನಡುವಿನ ಸಂಭಾಷಣೆಯನ್ನು ಮಹಿಳಾ ಐಪಿಎಸ್ ಅಧಿಕಾರಿ ಕೇಳಿಸಿಕೊಂಡಿದ್ದಾರೆ. ಅದೇ ಅಡಿಯೋ ಬಿಡುಗಡೆಯಾಗಿ ಸಾರ್ವಜನಿಕವಾಗಿ ವೈರಲ್ ಆಗಿದೆ. ಇದೀಗ ಆಂತರಿಕ ತನಿಖೆ ನಡೆಸಿರುವ ಸಿಐಡಿ ಪೊಲೀಸರು ಮುಖ್ಯ ಪೇದೆಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಘಟನೆ ಸಂಬಂಧ ವರದಿಯನ್ನು ಸಹ ಐಜಿಪಿಗೆ ರವಾನಿಸಿದ್ದು, ಸಂಭಾಷಣೆ ನಡೆಸಿರುವರ ವಿರುದ್ಧ ಶಿಸ್ತುಕ್ರಮ ಜರುಗಿಸುವ ಸಾಧ್ಯತೆಯಿದೆ.
ಶ್ರೀಕಿ ಎಲ್ಲಿದ್ದಾನೆ ?
Recommended Video
ಹ್ಯಾಕರ್ ಶ್ರೀಕೃಷ್ಣನಿಗೆ ಜೀವ ಭಯದ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಆತ ಮತ್ತೆ ಕಣ್ಮರೆಯಾಗಿದ್ದಾನೆ. ಮೊಬೈಲ್ ಇಟ್ಟುಕೊಳ್ಳದ ಹ್ಯಾಕರ್ ಶ್ರೀಕೃಷ್ಣನನ್ನು ಪತ್ತೆ ಮಾಡುವುದು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಪೊಲೀಸರು ರಕ್ಷಣೆ ಕೊಡಲು ಮುಂದಾದರೂ ಆತನನ್ನು ಪತ್ತೆ ಮಾಡಲಾಗುತ್ತಿಲ್ಲ. ಶ್ರೀಕಿ ನಾಪತ್ತೆ ಹಿಂದೆ ಇದೀಗ ಅನುಮಾನ ವ್ಯಕ್ತವಾಗಿದೆ. ಕಳೆದ ನಾಲ್ಕು ದಿನಗಳಿಂದ ಶೋಧ ನಡೆಸಿದರೂ ಆತನ ಹೆಜ್ಜೆ ಗುರುತು ಪತ್ತೆ ಮಾಡಲು ಪೊಲೀಸರಿಗೆ ಸಾಧ್ಯವಾಗಿಲ್ಲ. ಶ್ರೀಕಿ ಬೆಂಗಳೂರು ತೊರೆದು ಹೊರ ರಾಜ್ಯಗಳಿಗೆ ತೆರಳಿ ತಲೆ ಮರೆಸಿಕೊಂಡನೇ ಎಂಬ ಅನುಮಾನ ವ್ಯಕ್ತವಾಗಿದೆ. ಶ್ರೀಕಿಗಾಗಿ ಪೊಲೀಸರ ಶೋಧ ಮುಂದುವರಿದಿದೆ.