ಬಿಎಸ್ ಯಡಿಯೂರಪ್ಪ ಆಧುನಿಕ ಹಿಟ್ಲರ್ ಎಂದ ವಾಟಾಳ್ ನಾಗರಾಜ್
ಬೆಂಗಳೂರು, ಡಿಸೆಂಬರ್ 05: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಆಧುನಿಕ ಹಿಟ್ಲರ್ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ.
ಕನ್ನಡಿಗರನ್ನು ಬಿಟ್ಟು, ತೆಲುಗು, ಮರಾಠಿಗರಿಗೆ ಪಟ್ಟ ಕಟ್ಟುತ್ತಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೋಸಗಾರ. ನಾನು ಕುಟುಂಬಸ್ಥರನ್ನು ಕಳೆದುಕೊಂಡಾಗ ಅಷ್ಟು ನೋವಾಗಿರಲಿಲ್ಲ. ಆದರೆ, ಯಡಿಯೂರಪ್ಪ ಅವರು ಮಾಡಿದ ಮೋಸದಿಂದ ಅತೀವ ನೋವಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಪೊಲೀಸರು ಮಫ್ತಿಯಲ್ಲಿ ತೆರಳಿ ಸುಮಾರು 30 ಸಾವಿರಕ್ಕೂ ಅಧಿಕ ಕನ್ನಡ ಪರ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆರೋಪಿಸಿದ್ದಾರೆ. ಕರ್ನಾಟಕ ಬಂದ್ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಬುಧವಾರ ಜೈಲ್ ಭರೋ ಚಳವಳಿಗಾಗಿ ಸಭೆ ಕರೆಯಲಾಗಿದೆ ಎಂದರು.
ಬಿಜೆಪಿ, ಆರ್ ಎಸ್ ಎಸ್ ಕನ್ನಡ ವಿರೋಧಿಗಳಾಗಿವೆ. ಪೊಲೀಸರು 30 ಸಾವಿರ ಕನ್ನಡ ಪರ ಹೋರಾಟಗಾರರನ್ನು ಬಂಧಿಸಿದ್ದಾರೆ ಎಂದು ವಾಟಾಳ್ ನಾಗರಾಜ್ ಅವರು ಕಿಡಿಕಾರಿದ್ದಾರೆ.
ಬಂದ್ ಗೆ ಅನುಮತಿ ಕೇಳಿಲ್ಲ ಎಂಬ ಪೊಲೀಸ್ ಆಯುಕ್ತರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ನಗರ ಪೊಲೀಸ್ ಆಯುಕ್ತರಿಗೆ ನಾವೇಕೆ ಅನುಮತಿ ಕೇಳಬೇಕು, ಅವರು ಪರ ಭಾಷಿಕರು. ಅವರಿಗೆ ಕನ್ನಡ ಬರುವುದಿಲ್ಲ. ಮೊದಲು ಅವರನ್ನು ವರ್ಗಾವಣೆ ಮಾಡಬೇಕು ಎಂದರು.
ಮುಖ್ಯಮಂತ್ರಿ ಗಳು ರಾಜೀನಾಮೆ ನೀಡಬೇಕು. ಪರಭಾಷಿಗರು ನಗರ ಪೊಲೀಸ್ ಆಯುಕ್ತರಾಗಬಾರದು. ಹೀಗಾಗಿ ಕಮಲ್ ಪಂತ್ ಅವರನ್ನು ವರ್ಗಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಇಂದಿನ ಕರ್ನಾಟಕ ಬಂದ್ ಸಂಪೂರ್ಣವಾಗಿ ಯಶಸ್ವಿಯಾಗಿದೆ.ಮರಾಠ ಅಭಿವೃದ್ಧಿ ನಿಗಮ ರಚನೆ ವಿರುದ್ಧದ ಹೋರಾಟ ಮುಂದುವರೆಯಲಿದೆ ಎಂದರು.
Recommended Video
ಮುಖ್ಯಮಂತ್ರಿ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿತ್ತಿದಾಗ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ಸಾ.ರಾ. ಗೋವಿಂದ್ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣ ಗೌಡ ಸೇರಿದಂತೆ ಹಲವಾರು ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.