ಕರ್ನಾಟಕ ಬಂದ್: ಟೌನ್ ಹಾಲ್ ಹೋರಾಟದ ಕೇಂದ್ರ ಬಿಂದು!
ಬೆಂಗಳೂರು, ಡಿಸೆಂಬಬರ್ 05: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ರಾಜ್ಯದಲ್ಲಿ ಕರೆ ನೀಡಿದ್ದ ಬಂದ್ ಗೆ ರಾಜಧಾನಿಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಸ್ವಯಂ ಪ್ರೇರಿತ ವಾಗಿ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಿದ್ದಾರೆ. ಸವಾರರು ಇಲ್ಲದೇ ರಸ್ತೆಗಳು ಬಿಕೋ ಎನ್ನುತ್ತಿವೆ. ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಗೆ ಹೋಗುವ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಟೌನ್ಹಾಲ್ , ವೃತ್ತಹೋರಾಟದ ಕೇಂದ್ರ ಬಿಂಧುವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಬೆಳಗ್ಗೆ ಹೋರಾಟದ ಹಾದಿ ಹೇಗಿತ್ತು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
Recommended Video
ಸಿಎಂ ಮನೆಗೆ ಮುತ್ತಿಗೆ ತಯಾರಿ: ಮರಾಠ ಅಭಿವೃದ್ಧಿ ನಿಗಮ ಘೋಷಣೆ ಮಾಡುವ ಮೂಲಕ ಕನ್ನಡ ವಿರೋಧಿ ನಿರ್ಧಾರ ತೆಗೆದುಕೊಂಡಿದ್ದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ. ಅವರ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಕನ್ನಡಪರ ಸಂಘಟನೆ ಕಾರ್ಯಕರ್ತರು ಮುಂದಾಗಿದ್ದಾರೆ. ಮೌರ್ಯ ವೃತ್ತದಿಂದ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದತ್ತ ಕರವೇ ಅಧ್ಯಕ್ಷ ನಾರಾಯಣಗೌಡ ಬಣದ ಕಾರ್ಯಕರ್ತರು ತೆರಳಿದರು. ಈ ವೇಳೆ ಕರವೇ ಕಾರ್ಯಕರ್ತರನ್ನು ಬಲವಂತವಾಗಿ ತಡೆದು ಬಸ್ನಲ್ಲಿ ತುಂಬಿಸಿಕೊಂಡು ಪೊಲೀಸರು ಕರೆದೊಯ್ದರು. ಕರವೇ ಅಧ್ಯಕ್ಷ ನಾರಾಯಣಗೌಡ ಹಾಗೂ ಬೆಂಬಲಿಗರನ್ನು ಪೊಲೀಸರು ಬಂಧಿಸಿದರು.
Karnataka Bandh Live Updates:ಕರವೇಯಿಂದ ಸಿಎಂ ಮನೆ ಮುತ್ತಿಗೆ ಯತ್ನ: ನಾರಾಯಣಗೌಡ ಬಂಧನ
ಟೌನ್ಹಾಲ್ ಬಳಿ ಕಾರ್ಯಕರ್ತರ ಬಂಧನ: ಮರಾಠ ಅಭಿವೃದ್ಧಿ ನಿಗಮ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಬಂದ್ ಕರೆ ನೀಡಿದ್ದು, ಟೌನ್ ಹಾಲ್ ಹೋರಾಟದ ಕೇಂದ್ರವಾಗಿ ರೂಪಗೊಂಡಿತು. ನಾನಾ ಕನ್ನಡ ಪರ ಸಂಘಟನೆಗಳು ಟೌನ್ ಹಾಲ್ ಬಳಿ ಸೇರಿದ್ದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಟೌನ್ ಹಾಲ್ ಬಳಿ ಕೆಲ ಕನ್ನಡ ಪರ ಸಂಘಟನೆ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕರ್ನಾಟಕ ಬಂದ್ ಪ್ರತಿಭಟನೆ ನಡೆಸುವ ಬಗ್ಗೆ ಯಾರೂ ಅನುಮತಿ ಪಡೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ ಪಂತ್ ನಿನ್ನೆ ಹೇಳಿದ್ದರು. ಹೀಗಾಗಿ ತಂಡೋಪತಂಡವಾಗಿ ಕಾರ್ಯಕರ್ತರ ಬಂಧನ ಮುಂದುವರೆದಿದೆ. ಪೊಲೀಸರು ಕಾರ್ಯಕರ್ತರನ್ನು ಬಸ್ ಗಳಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದರೆ ಮತ್ತೊಂದಡೆ ಸಾವಿರಾರು ಕಾರ್ಯಕರ್ತರು ಅಲ್ಲಿ ಜಮಾಯಿಸುತ್ತಿದ್ದಾರೆ.
ಬೀದಿಗೆ ಇಳಿದ ಸಂಘಟನೆಗಳು:
ಮರಾಠ ಅಭಿವೃದ್ಧಿ ನಿಗಮ ರಚನೆ ಸರ್ಕಾರದ ತೀರ್ಮಾನ ವಿರೋಧಿಸಿ ರಾಜ್ಯಾದ್ಯಂತ ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ನಗರದ ಟೌನ್ ಹಾಲ್ ನಲ್ಲಿ ವಿವಿಧ ಕನ್ನಡ ಪರ ಸಂಘಟನೆಗಳು ಜಮಾಯಿಸಿದ್ದವು. ಕರ್ನಾಟಕ ರಕ್ಷಣಾ ವೇದಿಕೆ, ಕರ್ನಾಟಕ ಸಂಘಟನೆಗಳ ಒಕ್ಕೂಟ ಸೇರಿದಂತೆ ನಾನಾ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಟೌನ್ ಹಾಲ್ ಮಂದೆ ಜಾಮಾಯಿಸಿದ್ದರು. ತಾಕತ್ ಇದ್ದರೆ ವಿಜಯಪುರದಲ್ಲಿ ಬಂದ್ ಮಾಡಿ ನೋಡಿ ಎಂದು ಹೇಳಿಕೆ ನೀಡಿದ್ದ ಶಾಸಕ ಬಸವ ರಾಜ್ ಯತ್ನಾಳ್ ವಿರುದ್ಧ ಕನ್ನಡ ಪರ ಸಂಘಟನೆಗಳು ಘೋಷಣೆ ಕೂಗಿದರು.
ಬೆಳಗ್ಗೆ ಹನ್ನೊಂದು ಗಂಟೆ ಸುಮಾರಿಗೆ ಟೌನ್ ಹಾಲ್ ಬಳಿ ಹೋರಾಟದ ಕಿಚ್ಚು ಹೆಚ್ಚಾಯಿತು. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಮಾಡುತ್ತಿದ್ದಾರೆ. ಪೊಲೀಸರು ಹಾಗೂ ಹೋರಾಟಗಾರರ ನಡುವೆ ತಳ್ಳಾಟ ನಡೆಯಿತು. ಪ್ರತಿಭಟನೆ ನಡೆಯುವ ಮುನ್ನ ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
25 ಸಾವಿರ ಹೋರಾಟಗಾರರ ಬಂಧನ:
ರಾಜ್ಯದಲ್ಲಿ ಹೋರಾಟವನ್ನು ಹತ್ತಿಕ್ಕುವ ಕೆಲಸ ಮುಖ್ಯಮಂತ್ರಿ ಯಡಿಯೂರಪ್ಪ ಮಾಡಿದ್ದಾರೆ. ಇಪ್ಪತ್ತೈದು ಸಾವಿರ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಯಡಿಯೂರಪ್ಪ ಒಬ್ಬ ದ್ರೋಹಿ. ಮೋಸಗಾರ. ಇಷ್ಟಕ್ಕೆ ನಾವು ಹೋರಾಟ ಬಿಡಲ್ಲ. ಎಲ್ಲಾ ಕನ್ನಡ ಪರ ಸಂಘಟನೆಗಳ ಜತೆ ಚರ್ಚಿಸಿ ಬರುವ ಬುಧವಾರ ಜೈಲ್ ಬರೋ ಚಳುವಳಿ ಹಮ್ಮಿಕೊಳ್ಳುತ್ತೇವೆ. ಬಂದ್ ಮಾಡುವರು ನಾವು ಯಾಕೆ ಅನುಮತಿ ಪಡೆಯಬೇಕು ? ಯಡಿಯೂರಪ್ಪ ಅವರ ಕನ್ನಡಿಗರಿಗೆ ಮೋಸ ಮಾಡಿದ್ದಾರೆ ಎಂದು ಕನ್ನಡ ಪರ ಸಂಘಟನೆಗಳ ಹೋರಾಟ ನೇತೃತ್ವ ವಹಿಸಿರುವ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ರಾತ್ರೋ ರಾತ್ರಿ ಮನೆಗಳಿಗೆ ನುಗ್ಗಿ ಇಪ್ಪತ್ತೈದು ಸಾವಿರ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಈ ಮೂಲಕ ಬಂದ್ ಹತ್ತಿಕ್ಕುವ ಪ್ರಯತ್ನ ಮಾಡಿದ್ದಾರೆ. ಇಷ್ಟಕ್ಕೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು. ಇದೇ ವೇಳೆ ವಾಟಾಳ್ ನಾಗರಾಜ್, ಕನ್ನಡರ ಪರ ಸಂಘಟನೆ ಮುಖಂಡರನ್ನು ಪೊಲೀಶರು ವಶಕ್ಕೆ ತೆಗೆದುಕೊಂಡರು.
15 ಸಾವಿರ ಪೊಲೀಸರ ನಿಯೋಜನೆ:
ನಗರದಲ್ಲಿ ಕರ್ನಾಟಕ ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹದಿನೈದು ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಕೆಎಸ್ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದೆ. ಪ್ರತಿಭಟನೆಗೆ ಮುಂದಾದ ಹೋರಾಟಗಾರರನ್ನು ಪೊಲೀಸರು ಬಂಧಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮೌರ್ಯ ಸರ್ಕಲ್, ಶಿವಾನಂದ ಸರ್ಕಲ್ ಹಾಗೂ ಟೌನ್ ಹಾಲ್ ಬಳಿ ಹೆಚ್ಚು ಪೊಲೀಸರನ್ನು ನಿಯೋಜಿಸಿದ್ದು, ಎಲ್ಲಾ ಕಡೆ ಕನ್ನಡ ಪರ ಹೋರಾಟಗಾರರನ್ನು ಬಂಧಿಸಲಾಗಿದೆ.
ದೇವಸ್ಥಾನಗಳು ಬಿಕೋ:
ಬಂದ್ ಹಿನ್ನೆಲೆಯಲ್ಲಿ ಬಹುತೇಕ ಕಡೆ ದೇವಾಯಗಳು ಬಿಕೋ ಎನ್ನುತ್ತಿದ್ದವು. ಸರ್ಕಲ್ ಮಾರಮ್ಮ ದೇಗುಲ ಸೇರಿದಂತೆ ಮಲ್ಲೇಶ್ವರಂ, ಚಾಮರಾಜಪೇಟೆ ಸುತ್ತಮುತ್ತ ದೇವಸ್ಥಾನಗಳು ಭಕ್ತರು ಇಲ್ಲದೇ ಬಿಕೋ ಎನ್ನುತ್ತಿದ್ದವು. ಬಂದ್ ಹಿನ್ನೆಲೆಯಲ್ಲಿ ಯಾರೂ ದೇವಾಲಯಗಳ ಸುತ್ತ ಸುಳಿದಿರಲಿಲ್ಲ. ಇನ್ನು ಬಹುತೇಕ ಕಡೆ ವ್ಯಾಪರ ಚಟುವಟಿಕೆ ಕೂಡ ಸ್ಥಗಿತಗೊಂಡಿತ್ತು. ಬೀದಿ ಬದಿ ವ್ಯಾಪಾರಿಗಳು ಅಂಗಡಿ ತೆಗೆದಿದ್ದರೂ, ಖರೀದಸುವರು ಇಲ್ಲದೇ ಬಿಕೋ ಎನ್ನುತ್ತಿದ್ದವು. ಚಿಕ್ಕಪೇಟೆ, ಮಲ್ಲೇಶ್ವರ ಕಡೆ ಅಂಗಡಿ ಮುಂಗಟ್ಟು ತೆಗೆದಿದ್ದರೂ ಸಹ ಗ್ರಾಹಕರು ಇರಲಿಲ್ಲ.