ವಿಧಾನಸಭೆಯಲ್ಲಿ ಶಾಸಕ ಸಂಗಮೇಶ್ ಅಂಗಿ ಬಿಚ್ಚಿದ ಪ್ರಕರಣ ಹಕ್ಕು ಬಾಧ್ಯತಾ ಸಮಿತಿಗೆ
ಬೆಂಗಳೂರು, ಮಾರ್ಚ್ 10: ವಿಧಾನಸಭೆಯಲ್ಲಿ ಅಂಗಿ ಬಿಚ್ಚಿದ ಪ್ರತಿಭಟನೆ ನಡೆಸಿದ ಭದ್ರಾವತಿಯ ಕಾಂಗ್ರೆಸ್ ಶಾಸಕ ಬಿ.ಕೆ. ಸಂಗಮೇಶ್ ಅವರ ವಿರುದ್ಧದ ಪ್ರಕರಣವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಹಕ್ಕುಬಾಧ್ಯತಾ ಸಮಿತಿಗೆ ವಹಿಸಿದ್ದಾರೆ.
ವಿಧಾನಸಭೆಯಲ್ಲಿ 'ಒಂದು ರಾಷ್ಟ್ರ-ಒಂದು ಚುನಾವಣೆ' ಕುರಿತು ಚರ್ಚೆ ನಡೆಯುತ್ತಿದ್ದಾಗ ಶಾಸಕ ಬಿ.ಕೆ. ಸಂಗಮೇಶ್ ಅವರು ಅಂಗಿ ಬಿಚ್ಚಿ ಪ್ರತಿಭಟಿಸಿದ್ದರು. ಸಂಗಮೇಶ್ ಅವರ ವರ್ತನೆಯಿಂದ ಇಡೀ ಸದನವೇ ತಲೆತಗ್ಗಿಸುವಂತಾಗಿದೆ. ಇದರಿಂದ ಸದಸ್ಯರು ಮತ್ತು ಸಭಾಧ್ಯಕ್ಷರ ಹಕ್ಕುಚ್ಯುತಿಯಾಗಿದೆ ಎಂದು ತೀರ್ಥಹಳ್ಳಿಯ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ಪ್ರಸ್ತಾವ ಮಂಡಿಸಲು ಮುಂದಾದಾಗ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಸದನದಲ್ಲಿ ಅಂಗಿ ಬಿಚ್ಚಿ ಕಾಂಗ್ರೆಸ್ ಶಾಸಕ ಸಂಗಮೇಶ್ ಪ್ರತಿಭಟನೆ: ಐಡಿಯಾ ಕೊಟ್ಟಿದ್ದು ಅದೇ ಪಕ್ಷದ ಶಾಸಕ!
'ಸಂಗಮೇಶ್ ಅವರನ್ನು ಸದನದಿಂದ ಅಮಾನತುಮಾಡಿ ಒಳಗೆ ಬರದಂತೆ ತಡೆದಿದ್ದೀರಿ. ಅವರಿಗೆ ಸಮರ್ಥನೆ ಮಾಡಿಕೊಳ್ಳಲು ಅವಕಾಶವೆ ಇಲ್ಲದಂತೆ ಮಾಡಿ ಹಕ್ಕುಚ್ಯುತಿ ಮಂಡಿಸುವುದು ಸರಿಯಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ' ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಶಾಸಕನ ಕುಟುಂಬದ ಮೇಲೆ ಸುಳ್ಳು ಕೇಸ್ ಹಾಕಲಾಗಿದೆ. ಏಳು ಜನರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ. ಈ ಹಿಂದೆ ಗೂಳಿಹಟ್ಟಿ ಶೇಖರ್ ಅಂಗಿ ಹರಿದುಕೊಂಡಿದ್ದರು. ಆಗ ಅವರನ್ನು ಅಮಾನತು ಮಾಡಿದ್ದರಾ? ಹಾಗಿರುವಾಗ ಈಗ ಏಕೆ ಸಂಗಮೇಶ್ ಅವರನ್ನು ಅಮಾನತು ಮಾಡುತ್ತೀರಿ? ಎಂದು ಪ್ರಶ್ನಿಸಿದರು.
ಸಭಾಧ್ಯಕ್ಷರ ಪೀಠದ ಮುಂದೆ ಕಾಂಗ್ರೆಸ್ ಸದಸ್ಯರು ಪ್ರತಿಭಟನೆ ನಡೆಸಿದರು. 'ಆರೆಸ್ಸೆಸ್ ಕೈಗೊಂಬೆ ಸರ್ಕಾರ, ಸಿ.ಡಿ ಸರ್ಕಾರ, ಅಶ್ಲೀಲ ಸರ್ಕಾರ, ರಾಸಲೀಲೆ ಸರ್ಕಾರಕ್ಕೆ ಧಿಕ್ಕಾರ' ಎಂದು ಘೋಷಣೆಗಳನ್ನು ಕೂಗಿದರು.
ಅಂಗಿ ಬಿಚ್ಚಿದ್ದಕ್ಕೆ ಕಾರಣ ಕೊಟ್ಟ ಭದ್ರಾವತಿ ಕಾಂಗ್ರೆಸ್ ಶಾಸಕ ಸಂಗಮೇಶ್!
Recommended Video
ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಹಕ್ಕುಚ್ಯುತಿಯನ್ನು ಸಮರ್ಥಿಸಿಕೊಂಡರು. ಈ ಗದ್ದಲದ ಮಧ್ಯೆಯೇ ಸಭಾಧ್ಯಕ್ಷ ಕಾಗೇರಿ, 'ಹಕ್ಕುಚ್ಯುತಿ ಪ್ರಸ್ತಾವದ ಬಗ್ಗೆ ಚರ್ಚಿಸಲು ಕಾಂಗ್ರೆಸ್ ಸದಸ್ಯರು ಸಿದ್ಧರಿಲ್ಲ. ಹೀಗಾಗಿ ಪ್ರಕರಣವನ್ನು ಹಕ್ಕುಬಾಧ್ಯತಾ ಸಮಿತಿಗೆ ವಹಿಸುತ್ತೇನೆ' ಎಂದರು.