'ಲಕ್ಕಿ ಸ್ಟಾರ್' ನವರಸ ನಾಯಕ ಜಗ್ಗೇಶ್ ರಾಜಕೀಯ ಪಯಣ
ಕರ್ನಾಟಕ ವಿಧಾನಸಭೆಗಾಗಿ ಪ್ರಮುಖ ಮೂರು ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ತಮ್ಮ ಅಭ್ಯರ್ಥಿಗಳ ಪಟ್ಟಿಯನ್ನು ಕೊನೆಗೂ ಪ್ರಕಟಿಸಿವೆ. ಈ ಪೈಕಿ ಕನ್ನಡ ಸಿನಿಮಾರಂಗದ ಅನೇಕರಿಗೂ ಟಿಕೆಟ್ ಭಾಗ್ಯ ಸಿಕ್ಕಿದೆ. ಸೋಮವಾರ(ಏಪ್ರಿಲ್ 23)ದಂದು ಪ್ರಕಟವಾದ ಬಿಜೆಪಿ ಪಟ್ಟಿಯಲ್ಲಿ ನಟ ಜಗ್ಗೇಶ್ ಕಾಣಿಸಿಕೊಂಡಿದೆ. 'ಲಕ್ಕಿ ಸ್ಟಾರ್' ಆದ ನವರಸ ನಾಯಕ ಜಗ್ಗೇಶ್ ರಾಜಕೀಯ ಪಯಣದ ಸಂಕ್ಷಿಪ್ತ ವಿವರ ಇಲ್ಲಿದೆ.
ನಟ ಜಗ್ಗೇಶ್ ಕಣಕ್ಕೆ ಎಂಟ್ರಿ, ಯಶವಂತಪುರದಿಂದ ಸ್ಪರ್ಧೆ
ಕನ್ನಡ ಸಿನಿಮಾ ರಂಗಕ್ಕೂ ರಾಜಕೀಯ ಕ್ಷೇತ್ರಕ್ಕೂ ಬಲವಾದ ನಂಟು ಹಿಂದಿನಿಂದ ಬೆಳೆದುಕೊಂಡು ಬಂದಿದೆ. ಈ ಎರಡು ಕ್ಷೇತ್ರಗಳಲ್ಲೂ ಸಕ್ರಿಯವಾಗಿ ತೊಡಗಿಕೊಂಡವರಿದ್ದಾರೆ. ಕೆಲವರು ಚುನಾವಣೆ ಸಂದರ್ಭದಲ್ಲಿ ತಮ್ಮ ಸ್ಟಾರ್ ಗಿರಿ ಪ್ರಭಾವದಿಂದ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಾರೆ. ಪ್ರಸ್ತುತ ವಿಧಾನಸಭಾ ಚುನಾವಣೆ 2018ರಲ್ಲಿ ಅನೇಕ ತಾರೆಗಳು ಚುನಾವಣಾ ಕಣದಲ್ಲಿ ಹೋರಾಟಕ್ಕಿಳಿದಿದ್ದಾರೆ.
ಚುನಾವಣಾ ಕಣದಲ್ಲಿ ಕನ್ನಡ ಚಿತ್ರರಂಗದ ತಾರೆಗಳು, ಸೆಲೆಬ್ರಿಟಿಗಳು
'ನವರಸ ನಾಯಕ' ಕಾಮಿಡಿ ಕಿಲಾಡಿಗಳು ಶೋನ ಪ್ರಿನ್ಸಿಪಾಲ್ ಜಗ್ಗೇಶ್ ಅವರು ಜನಿಸಿದ್ದು 17 ಮಾರ್ಚ್ 1963 ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಮಾಯಸಂದ್ರ ಗ್ರಾಮದಲ್ಲಿ. ಜಡೇ ಮಾಯಸಂದ್ರ ವರ್ಲ್ಡ್ ಫೇಮಸ್ ಮಾಡಿದ ಜಗ್ಗೇಶ್ ಈಗ ತಮ್ಮ ಸ್ವಕ್ಷೇತ್ರ ಬಿಟ್ಟು ಬೆಂಗಳೂರಿನ ಯಶವಂತಪುರದಿಂದ ಸ್ಪರ್ಧೆ ಬಯಸಿದ್ದಾರೆ. ಟಿಕೆಟ್ ಬಯಸದ ಬಂದ ಭಾಗ್ಯವಾದ ಕಾರಣ. ಸದ್ಯಕ್ಕೆ ಜಗ್ಗೇಶ್ 'ಲಕ್ಕಿ ಸ್ಟಾರ್'.
ಮಾಯಸಂದ್ರದ ಪ್ರತಿಭಾವಂತ ನಟ
ಜಗ್ಗೇಶ್ ಅವರ ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಮಾಯಸಂದ್ರದಲ್ಲೇ. ಇವರ ತಂದೆ ಶಿವಲಿಂಗಪ್ಪ ತಾಯಿ ನಂಜಮ್ಮ. ಇವರು ಪರಿಮಳ ಎನ್ನುವರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಸ್ವೀಕರಿಸಿದ್ದಾರೆ. ಅವರದ್ದೇ ಭಾಷೆಯಲ್ಲಿ ಹೇಳುವುದಾದರೆ ಲವ್ ಮಾಡಿ ಎತ್ತಾಕ್ಕೊಂಡು ಹೋಗಿ ಮದುವೆಯಾದರು. ಇಬ್ಬರು ಗಂಡು ಮಕ್ಕಳು ಯತಿರಾಜ್, ಗುರುರಾಜ್, ಮೊಮ್ಮಗು ಸುಖ ಸಂಸಾರ, ಗುರು ರಾಘವೇಂದ್ರಸ್ವಾಮಿ ಪರಮ ಭಕ್ತ. ಕನ್ನಡ, ಡಾ. ರಾಜ್ ಕಟ್ಟಾ ಅಭಿಮಾನಿ.
ರಾಜಕೀಯ ಜೀವನ
'ಮಾತಿನ ಮಲ್ಲ' ಜಗ್ಗೇಶ್ ಅವರು ತುರುವೇಕೆರೆ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದರು. ಜಗದೀಶ್ ಶೆಟ್ಟರ್ ಅವರು ವಿಧಾನಸಭೆ ಸ್ಪೀಕರ್ ಆಗಿದ್ದ ಕಾಲದಲ್ಲಿ ಶಾಸಕ ಸ್ಥಾನ ತೊರೆದು ಬಿಜೆಪಿ ಸೇರ್ಪಡೆಗೊಂಡರು. ಕೆಎಸ್ಸಾರ್ಟಿಸಿ ಉಪಾಧ್ಯಕ್ಷರಾಗಿ ಕ್ಯಾಬಿನೆಟ್ ದರ್ಜೆ ಹುದ್ದೆ ನಿಭಾಯಿಸಿದರು.ಸದ್ಯ ಕರ್ನಾಟಕ ಬಿಜೆಪಿಯ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರಾಗಿದ್ದಾರೆ.
ಸಾಮಾಜಿಕ ಜಾಲ ತಾಣಗಳಲ್ಲಿ ಸಕ್ರಿಯ
2010ರ ಫೆಬ್ರವರಿ 03ರಂದು ಕರ್ನಾಟಕ ವಿಧಾನಪರಿಷತ್ತಿಗೆ ನಾಮ ನಿರ್ದೇಶನ ಮಾಡಲಾಯಿತು. ಸಾಮಾಜಿಕ ಜಾಲ ತಾಣಗಳಲ್ಲಿ ಸದಾ ಸಕ್ರಿಯವಾಗಿರುವ ರಾಜಕಾರಣಿಗಳ ಪೈಕಿ ಒಬ್ಬರು. ಆದರೆ, ಸ್ಪಷ್ಟವಾಗಿ ಕನ್ನಡದಲ್ಲಿ ಟ್ವೀಟ್ ಮಾಡಲ್ಲ ಎಂಬ ಅಪವಾದ ಹೊತ್ತುಕೊಂಡವರು. ಕೆಣಕಿ ಟ್ವೀಟ್ ಮಾಡುವವರಿಗೆ ಕುಟುಕುವವರು, ಜಿದ್ದಿಗೆ ಬಿದ್ದು ಟ್ವೀಟ್ ವಾರ್ ನಡೆಸುವವರು. ಪ್ರಕಾಶ್ ರೈ ವಿರುದ್ಧದ ಟ್ವೀಟ್ ವಾರ್ ಇಲ್ಲಿ ಸ್ಮರಿಸಬಹುದು. ಮಿಕ್ಕಂತೆ, ಅಭಿಮಾನಿಗಳ ಜತೆ ಸದಾ ಕಾಲ 'ಟಚ್ಚಿಂಗ್ ಟಚ್ಚಿಂಗ್' ನಲ್ಲಿರುವ ಜಗ್ಗೇಶ್, ಅಜ್ಜನಾದರೂ ಪ್ಯಾಪುಲರ್ ಫಿಗರ್ ಕಣ್ರಿ.
2018ರಲ್ಲಿ ಮತ್ತೆ ಚುನಾವಣಾ ರಾಜಕೀಯ
ಬೆಂಗಳೂರಿನ ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಜಗ್ಗೇಶ್ ಸ್ಪರ್ಧಿಸುವುದು ಖಚಿತವಾಗಿದೆ. ಈ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಜವರೇಗೌಡ ಹಾಗೂ ಕಾಂಗ್ರೆಸ್ಸಿನಿಂದ ಎಸ್. ಟಿ ಸೋಮಶೇಖರ್ ಅವರು ಕಣದಲ್ಲಿದ್ದಾರೆ. ಜಗ್ಗೇಶ್ ಗೆಲುವಿನ ಬಗ್ಗೆ ಸದ್ಯಕ್ಕಂತೂ ಏನು ಹೇಳೋಕೆ ಆಗಲ್ಲ. ಕಾದು ನೋಡೋಣ.
ಅತ್ತ ತುರುವೇಕೆರೆಯಿಂದ ಈ ಬಾರಿ ಕಾಂಗ್ರೆಸ್ಸಿನಿಂದ ರಂಗಪ್ಪ ಚೌಧರಿ, ಬಿಜೆಪಿಯಿಂದ ಮಸಾಲೆ ಜಯರಾಮ್ ಹಾಗೂ ಜೆಡಿಎಸ್ ನಿಂದ ಎಂಟಿ ಕೃಷ್ಣಪ್ಪ ಕಣದಲ್ಲಿದ್ದಾರೆ.
ಆಪರೇಷನ್ ಕಮಲ ಸಂಜಾತ ಜಗ್ಗೇಶ
2008ರಲ್ಲಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಜಗ್ಗೇಶ್ 47,849 ಮತಗಳನ್ನು ಗಳಿಸಿದರೆ, ಬಿಜೆಪಿಯ ಎಂ. ಡಿ ಲಕ್ಷ್ಮಿನಾರಾಯಣ (ಅಣ್ಣಯ್ಯ) ಅವರು 30776 ಮತ ಗಳಿಸಿ ಸೋಲು ಕಂಡಿದ್ದರು.
ನಂತರ ಬಿಜೆಪಿ ಅಧಿಕಾರ ಹಿಡಿಯಲು ಬೇರೆ ಪಕ್ಷಗಳಿಂದ ಶಾಸಕರ ಖರೀದಿ ಮಾಡತೊಡಗಿತು. ಇದಕ್ಕೆ ಆಪರೇಷನ್ ಕಮಲ ಎಂಬ ಕೋಡ್ ವರ್ಡ್ ನೀಡಲಾಗಿತ್ತು. ಆರ್ ಆಶೋಕ್ ಅವರು ಜಗ್ಗೇಶ್ ಅವರನ್ನು ಬಿಜೆಪಿಗೆ ಈ ರೀತಿ ಕರೆ ತಂದರು.