ನನ್ನ ಮತಗಳನ್ನು ಕದಿಯಲು ಬಿಜೆಪಿ ಹುನ್ನಾರ: ಮುನಿರತ್ನ
ಬೆಂಗಳೂರು, ಮೇ 10: ಜಾಲಹಳ್ಳಿಯ ಫ್ಲಾಟ್ ಒಂದರಲ್ಲಿ ಮತದಾರರ ಗುರುತಿನ ಚೀಟಿ ದೊರೆತ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ನಾಯ್ಡು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ತಮ್ಮ ಮತಗಳನ್ನು ಕಸಿಯುವ ಸಲುವಾಗಿ ಬಿಜೆಪಿ ಈ ತಂತ್ರ ಮಾಡಿದೆ ಎಂದು ಆರೋಪಿಸಿದರು.
ವೋಟರ್ ಐಡಿ ಪತ್ತೆ: ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ವಿರುದ್ಧ ಎಫ್ಐಆರ್
ಮನೆಯಲ್ಲಿ ದೊರೆತಿರುವುದು ಕೊಳೆಗೇರಿಗಳ ಮತದಾರರ ಗುರುತಿನ ಚೀಟಿಗಳು. ಈ ಕೊಳೆಗೇರಿ ಸುಮಾರು 20 ವರ್ಷದಿಂದ ಕಾಂಗ್ರೆಸ್ನ ಭದ್ರಕೋಟೆ. ಇವೆಲ್ಲವೂ ನನಗೆ ಬರಬೇಕಾಗಿದ್ದ ಮತಗಳು. ಹೀಗಿರುವಾಗ ಅವರ ಗುರುತಿನ ಚೀಟಿಗಳನ್ನು ಇಲ್ಲಿ ತಂದು ಇರಿಸುವ ಅವಶ್ಯಕತೆ ನನಗೇನಿದೆ ಎಂದು ಮುನಿರತ್ನ ಪ್ರಶ್ನಿಸಿದ್ದಾರೆ.
ಇಡೀ ಕೊಳೆಗೇರಿಯ ಮತದಾರರ ಗುರುತಿನ ಚೀಟಿಗಳನ್ನು ಎತ್ತಿಕೊಂಡು ಬಂದಿದ್ದಾರೆ. ನನಗೆ ಮತ ಸಿಗಬಾರದು ಎನ್ನುವುದು ಇದರ ಉದ್ದೇಶ. ಈ ಚೀಟಿಗಳು ಸಿಗದಿದ್ದರೆ ಇವೆಲ್ಲವೂ ಮತದಾನದ ದಿನದಂದು ಬಿಜೆಪಿ ಮತಗಳಾಗಿ ಬದಲಾಗುತ್ತಿದ್ದವು. ಬೂತ್ನ ಮತಗಳೆಲ್ಲವೂ ಅವರ ಪಾಲಾಗುತ್ತಿದ್ದವು ಎಂದು ಮುನಿರತ್ನ ಹೇಳಿದ್ದಾರೆ.
ನಮಗೆ ಮಾಹಿತಿ ಬರುವ ಮೊದಲೇ ಕೆಲವರು ಮನೆಗೆ ನುಗ್ಗಿ ವಿಡಿಯೊ ಮಾಡಿದ್ದಾರೆ. ಆ ಮನೆಯಿಂದ ಪೊಲೀಸ್ ಠಾಣೆ ಕೂಗಳತೆ ದೂರದಲ್ಲಿ ಇದ್ದರೂ ಪೊಲೀಸರಿಗೆ ಮಾಹಿತಿ ನೀಡಿಲ್ಲ. ಅಲ್ಲಿ ಹೋಗಿ ನೋಡಿದಾಗ ವೋಟರ್ ಐಡಿಗಳು ಸಿಕ್ಕಿವೆ ಎಂದರು.