ವೋಟರ್ ಐಡಿ ಪತ್ತೆ: ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ವಿರುದ್ಧ ಎಫ್ಐಆರ್
ಬೆಂಗಳೂರು, ಮೇ 10: ಜಾಲಹಳ್ಳಿಯ ಮನೆಯೊಂದರಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾದ ಪ್ರಕರಣದಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ವಿರುದ್ಧ ಚುನಾವಣಾ ಆಯೋಗ ಎಫ್ಐಆರ್ ದಾಖಲಿಸಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಈ ಪ್ರಕರಣದಲ್ಲಿ 11ನೇ ಆರೋಪಿಯಾಗಿ ಮುನಿರತ್ನ ವಿರುದ್ಧ ಚುನಾವಣಾ ನೀತಿ ಸಂಹಿತೆ ತಂಡದಿಂದ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.
ನಕಲಿ ವೋಟರ್ ಐಡಿ ಪ್ರಕರಣ: ಸಮಗ್ರ ವರದಿ ಕೇಳಿದ ECI
ಜಾಲಹಳ್ಳಿಯ ನಿವಾಸಿ ರಾಕೇಶ್ ಅವರು ನೀಡಿದ ದೂರಿನ ಅನ್ವಯ ಮುನಿರತ್ನ ವಿರುದ್ಧ ದೂರು ದಾಖಲಿಸಲಾಗಿದೆ.
ರಾಕೇಶ್ ದೂರಿನಲ್ಲಿ ಏನಿದೆ?
ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಸಂದೇಹದ ಮೇರೆಗೆ ಎಸ್ಎಲ್ವಿ ಪಾರ್ಕ್ವ್ಯೂ ಅಪಾರ್ಟ್ಮೆಂಟ್ನ ಫ್ಲಾಟ್ ನಂ 115ಕ್ಕೆ ಸ್ನೇಹಿತರೊಂದಿಗೆ ತೆರಳಿದ್ದೆವು. ಆಗ ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ನಕಲಿ ಗುರುತಿನ ಚೀಟಿಗಳು ಮತ್ತು ಇತರೆ ಸಾಧನಗಳೊಂದಿಗೆ ಸಿಕ್ಕಿಬಿದ್ದಿದ್ದರು ಎಂದು ರಾಕೇಶ್ ದೂರಿನಲ್ಲಿ ತಿಳಿಸಿದ್ದರು.
ಸುನಂದಾ, ಮೋಹನ್, ಕಿರಣ, ವೆಂಕಟೇಶ್, ಮಂಜುನಾಥ್, ರಘು ಮತ್ತು ಇತರೆ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ವೆಂಕಟೇಶ್ ಮತ್ತು ರಘು ಅವರನ್ನು ಬಂಧಿಸಲಾಗಿದೆ.
Array |
ಹನ್ನೊಂದು ಮಂದಿ ವಿರುದ್ಧ ಪ್ರಕರಣ
ಸಾದಿರ್ ಮೋಮಿನ್, ಚಿನ್ನತಂಬಿ ಪೊನ್ನಿಯಮ್ಮ, ಚಿನ್ನದೊರೈ, ಲಕ್ಷ್ಮಮ್ಮ ರಶ್ಮಿ, ಲಲಿತಮ್ಮ, ಶಾರದಾ ಶರವಣ, ರೇಖಾ, ಮಂಜುಳಾ ನಂಜಾಮರಿ, ನಟರಾಜ್ ಕೃಷ್ಣಪ್ಪ, ಮಂಜುನಾಥ್ ಮತ್ತು ಅಭ್ಯರ್ಥಿ ಮುನಿರತ್ನ ನಾಯ್ಡು ವಿರುದ್ಧ ಚುನಾವಣಾ ನೀತಿ ಸಂಹಿತೆ ತಂಡ ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಿದೆ.
ಇದಕ್ಕೂ ಮೊದಲು ಸೋಮವಾರ (ಮೇ 7) 90 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ಮುನಿರತ್ನ ನಾಯ್ಡು ಅವರ ವಿರುದ್ಧ ಸದಾಶಿವ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಗುರುತಿನ ಚೀಟಿ ಗೊಂದಲ, ಅಕ್ರಮಕ್ಕೆ ಮುನಿರತ್ನ ಕಾರಣ : ಬಿಜೆಪಿ
ಆರೋಪ-ಪ್ರತ್ಯಾರೋಪ
ಜಾಲಹಳ್ಳಿಯ ಮನೆಯಲ್ಲಿ ದೊರೆತ ವೋಟರ್ ಐಡಿಗಳು ನಕಲಿಯಲ್ಲ ಅಸಲಿ ಎಂದು ಚುನಾವಣಾ ಆಯೋಗ ಬುಧವಾರ ಸ್ಪಷ್ಟಪಡಿಸಿತ್ತು.
ನಕಲಿ ಮತದಾರರನ್ನು ಸೃಷ್ಟಿಸಲು ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ನಾಯ್ಡು ಈ ಚಟುವಟಿಕೆ ನಡೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದರೆ, ಇದು ಬಿಜೆಪಿಯದ್ದೇ ಕೃತ್ಯ ಎಂದು ಕಾಂಗ್ರೆಸ್ ಪ್ರತ್ಯಾರೋಪ ಮಾಡಿದೆ. ಎರಡೂ ಪಕ್ಷಗಳು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದವು.
ಕೋಟಿ ರೂಪಾಯಿ ನಗದು ವಶ
ಬೆಂಗಳೂರು ನಗರದಲ್ಲಿ ಇದುವರೆಗೂ 32 ಪ್ರಕರಣದಲ್ಲಿ 6.8 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮಹೇಶ್ವರ್ ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಒಟ್ಟು 2,007 ಪ್ರಕರಣದಲ್ಲಿ 5.29 ಕೋಟಿ ರೂಪಾಯಿ ಮೌಲ್ಯದ 11,699 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. ಹಾಗೆಯೇ 39,540 ಪ್ರಕರಣಗಳಲ್ಲಿ 19.43 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಮದ್ಯ ಮಾರಾಟ ಬಂದ್
ಗುರುವಾರ ಸಂಜೆ 5 ಗಂಟೆಯಿಂದ ಮದ್ಯ ಮಾರಾಟ ಬಂದ್ ಆಗಲಿದೆ. ಮತದಾನದ ದಿನಾಂಕ 12ರಿಂದ ಮರುದಿನ ಮಧ್ಯರಾತ್ರಿಯವರೆಗೆ ಲಿಕ್ಕರ್ ಮಾರಾಟ ಸ್ಥಗಿತಗೊಳ್ಳಲಿದೆ.
ಗುರುವಾರ ಸಂಜೆ 6 ಗಂಟೆಯಿಂದ ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ. ಬಹಿರಂಗ ಸಭೆ ನಿಷೇಧಿಸಲಾಗಿದ್ದು, 5ಕ್ಕಿಂತ ಹೆಚ್ಚು ಮಂದಿ ಗುಂಪುಗೂಡುವಂತಿಲ್ಲ.
ಮತಗಟ್ಟೆಯ 100 ಮೀಟರ್ ವ್ಯಾಪ್ತಿಯಲ್ಲಿ ಪ್ರಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಗುರುವಾರ ಸಂಜೆಯಿಂದ ಮನೆ ಮನೆ ಪ್ರಚಾರಕ್ಕೆ ಮಾತ್ರ ಅವಕಾಶ ಸಿಗಲಿದೆ. ಯಾರೂ ಮತದಾರರ ಗುರುತಿನ ಚೀಟಿಗಳನ್ನು ಸಂಗ್ರಹಿಸಿ ತೆಗೆದುಕೊಂಡು ಹೋಗುವಂತಿಲ್ಲ ಎಂದು ಅವರು ತಿಳಿಸಿದರು.
ಹಾಜರಾಗದವರ ವಿರುದ್ಧ ಪ್ರಕರಣ
ಎಲ್ಲೆಡೆ ಬಿಗಿ ತಪಾಸಣೆ ನಡೆಸಲಾಗುತ್ತಿದ್ದು, ಬೆಂಗಳೂರಿನಾದ್ಯಂತ 81 ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಶುಕ್ರವಾರ ಮಧ್ಯಾಹ್ನ 1.35 ರ ಒಳಗೆ ಕರ್ತವ್ಯಕ್ಕೆ ಹಾಜರಾಗದ ನಿಯೋಜಿತ ಸಿಬ್ಬಂದಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲು ಮಾಡಲಾಗುವುದು ಎಂದು ಮಹೇಶ್ವರ್ ರಾವ್ ವಿವರಿಸಿದರು.
ಅಭ್ಯರ್ಥಿಗಳ ಮಾಧ್ಯಮ ಹೇಳಿಕೆಗಳು ಫಲಿತಾಂಶದ ಮೇಲೆ ಪ್ರಭಾವ ಬೀರುವಂತಿದ್ದರೆ ಅವರ ಮೇಲೆ ಪ್ರಕರಣ ದಾಖಲು ಮಾಡಲಾಗುತ್ತದೆ. ಮತದಾನದ ದಿನ ಅಭ್ಯರ್ಥಿಗಳು ಮಾಧ್ಯಮಗಳಲ್ಲಿ ಹೇಳಿಕೆ ನೀಡುವಂತಿಲ್ಲ. ಪ್ರಭಾವ ಬೀರುವ ಅಭ್ಯರ್ಥಿ ಮತ್ತು ಮಾಧ್ಯಮಗಳ ಮೇಲೆ ಕೇಸ್ ದಾಖಲು ಮಾಡಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಮಹಿಳಾ ಮತದಾನ ಹೆಚ್ಚಳಕ್ಕೆ 100 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅಂಗವಿಕಲರಿಗೆ ವ್ಹೀಲ್ ಚೇರ್, ಅಂಧರಿಗೆ ಬ್ರೈಲ್ ಲಿಪಿ ಮತದಾನದ ವ್ಯವಸ್ಥೆ ಮಾಡಲಾಗಿದೆ.