ವೋಟರ್ ಐಡಿ ಪತ್ತೆ ಹಿಂದೆ ಕಾಂಗ್ರೆಸ್: ಕುಮಾರಸ್ವಾಮಿ ಆರೋಪ
ಬೆಂಗಳೂರು, ಮೇ 12: ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮೊದಲಿನಿಂದಲೂ ಗೊಂದಲ ಇದೆ. ಸುಮಾರು 10 ಸಾವಿರ ವೋಟರ್ ಐಡಿ ಅಲ್ಲಿ ಪತ್ತೆಯಾಗಿದೆ. ಇದೇ ರೀತಿ 20 ಕ್ಷೇತ್ರಗಳಲ್ಲಿ ಆಗಿದೆ. ಕಾಂಗ್ರೆಸ್ ನಾಯಕರು ಇದರ ಹಿಂದೆ ಇದ್ದಾರೆ ಎಂದು ಜೆಡಿಎಸ್ ರಾಜ್ಯಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.
ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಬೆಳಿಗ್ಗೆ ಭೇಟಿ ನೀಡಿದ ಎಚ್ಡಿಕೆ, ಸ್ವಾಮೀಜಿಗಳ ಆಶೀರ್ವಾದ ಪಡೆದರು. ಬಳಿಕ ಮತಚಲಾವಣೆಗೆ ರಾಮನಗರಕ್ಕೆ ತೆರಳಿದರು.
LIVE: ಕರ್ನಾಟಕದ ಹಣೆಬರಹ ಬರೆಯುತ್ತಿರುವ ಮತದಾರರು
ಮತದಾರರ ಗುರುತಿನ ಚೀಟಿ ಕಂಡುಬಂದ ಅನೇಕ ಪ್ರಕರಣಗಳು ನಡೆದಿವೆ. ಆದರೆ, ಚುನಾವಣಾ ಆಯೋಗ ಅವುಗಳನ್ನು ಪತ್ತೆ ಹಚ್ಚಲು ವಿಫಲವಾಗಿದೆ. ಗೌರಿಬಿದನೂರಿನಲ್ಲಿ ಇದಕ್ಕೆ ಸೂಕ್ತ ಉದಾಹರಣೆ ಸಿಕ್ಕಿದೆ. ಎಲ್ಲ ಪಕ್ಷಗಳೂ ಹಣ ಹಂಚಿಕೆ ಮಾಡಿವೆ. ಆದರೆ ಕಟ್ಟುನಿಟ್ಟಿನ ಚುನಾವಣಾ ನಡೆಸಲು ಮುಂದಾಗ್ತಿಲ್ಲ ಎಂದು ದೂರಿದರು.
ಐಟಿ ರೇಡ್ ಕೇವಲ ಕಾಂಗ್ರೆಸ್ ನಾಯಕರ ಮೇಲೆ ಆಗ್ತಿದೆ. ಆದರೆ, ಬಿಜೆಪಿ ಮುಖಂಡರ ಮನೆ ಮೇಲೆ ದಾಳಿ ನಡೆಯುತ್ತಿಲ್ಲ. ಎಷ್ಟು ಜನ ಬಿಜೆಪಿಯವರು ಹಣ ಹಂಚಿಲ್ಲ? ಹಂಚಿಕೆ ಮಾಡಿರುವ ದುಡ್ಡು ಯಾರದ್ದು ಎಂದು ಪ್ರಶ್ನೆ ಇದೆ ಎಂದರು.
In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು
ಮುಂದಿನ ಐದು ವರ್ಷಕ್ಕೆ ಉತ್ತಮ ಆಡಳಿತ ಪಡೆಯಲು ತಪ್ಪದೆ ಮತದಾನ ಮಾಡಿ. ಮತದಾನದಲ್ಲಿ ಭಾಗವಹಿಸಿ ನಿಮ್ಮ ಹಕ್ಕನ್ನು ಚಲಾಯಿಸಿ. ಇಂದು ಮಹತ್ವದ ದಿನವಾಗಿದೆ. ಎಲ್ಲಾ ಪಕ್ಷಗಳ ಪ್ರಣಾಳಿಕೆ ನೋಡಿಕೊಂಡು ಮತದಾನ ಮಾಡಿ. ರಾಜ್ಯಕ್ಕೆ ಅರ್ಹ ಪಕ್ಷವನ್ನು ಬೆಂಬಲಿಸಿ ಎಂದು ಕುಮಾರಸ್ವಾಮಿ ಹೇಳಿದರು.
ನಮ್ಮದು ಉತ್ತಮ ಪ್ರಣಾಳಿಕೆ. ರಾಜ್ಯದ ಎಲ್ಲ ವರ್ಗದ ಕುಟುಂಬಗಳು ನೆಮ್ಮದಿಯ ಜೀವನ ನಡೆಸಲು ಅನುಕೂಲಕರವಾದ ನಿಟ್ಟಿನಲ್ಲಿ ಪ್ರಣಾಳಿಕೆ ಇದೆ. ಸಮ್ಮಿಶ್ರ ಸರ್ಕಾರ ಬಂದರೆ ನನ್ನ ಕನಸು ನನಸಾಗುವುದಿಲ್ಲ. ನಾನು ನಿಮ್ಮನ್ನು ಉಳಿಸಬೇಕು ಎಂದರೆ, ನೀವು ನನ್ನನ್ನು ಉಳಿಸಿ. ನನ್ನ ಪರಿಶ್ರಮ ವ್ಯರ್ಥ ಮಾಡಬೇಡಿ ಎಂದು ಕುಮಾರಸ್ವಾಮಿ ಮತದಾರರಿಗೆ ಮನವಿ ಮಾಡಿದರು.
ಕಾಲಭೈರೇಶ್ವರ, ಶ್ರೀಗಳ ಆರ್ಶಿವಾದ ಪಡೆದಿದ್ದೇನೆ. ಈಗ ನಾನು ಮತಚಲಾವಣೆ ಮಾಡಲು ತೆರಳುತ್ತಿದ್ದೇನೆ. ರಾಮನಗರದ ಬಿಡದಿ ಬಳಿ ನಾನು ಮತ ಚಲಾವಣೆ ಮಾಡಲಿದ್ದೇನೆ ಎಂದು ತಿಳಿಸಿದರು.