ಮತ ಕೇಳಲು ಶಾಸಕ ಹ್ಯಾರಿಸ್ ಬಂದಾಗಲೇ ಸೇತುವೆ ಕುಸಿಯಿತು
ಬೆಂಗಳೂರು, ಮೇ 9: ದುರ್ವಾಸನೆ ಬೀರುವ ಕೊಳಚೆ ನೀರಿನ ರಾಜಕಾಲುವೆಯನ್ನು ದಾಟಿ ನಗರ ಭಾಗಕ್ಕೆ ತೆರಳಲು ಈ ಕೊಳೆಗೇರಿ ನಿವಾಸಿಗಳಿಗೆ ಇದ್ದಿದ್ದು ಇದೊಂದೇ ಸೇತುವೆ. ಅದೂ ಈಗ ನೆಲಕಚ್ಚಿದೆ. ಜನಪ್ರತಿನಿಧಿಗಳು ಇತ್ತ ಗಮನಹರಿಸದ ಕಾರಣ ಕೊಳೆಗೇರಿ ನಿವಾಸಿಗಳು ಮುರಿದ ಸೇತುವೆ ಮೇಲೆಯೇ ಸರ್ಕಸ್ ನಡೆಸಿಕೊಂಡು ಓಡಾಡುತ್ತಿದ್ದಾರೆ.
ಪೂರ್ವ ಬೆಂಗಳೂರಿನ ಕೇಂಬ್ರಿಡ್ಜ್ ಲೇಔಟ್ನಲ್ಲಿ ಇರುವ ಇಸ್ರೊ ಕಾಲೊನಿಯಲ್ಲಿ ಮಂಗಳವಾರ ಸೇತುವೆ ಕುಸಿದು ದುರಂತ ಸಂಭವಿಸಿದೆ. ಇಲ್ಲಿನ ಬಡಜನರಿಗೆ ನಗರದೊಳಗೆ ಪ್ರವೇಶಿಸಲು ಇರುವ ಏಕೈಕ ಸಂಪರ್ಕ ಮಾರ್ಗವಿದು. ಮಳೆನೀರು ಹರಿಯುವ ಚರಂಡಿಗೆ ಅಡ್ಡಲಾಗಿ ಲೋಹದ ಸೇತುವೆ ನಿರ್ಮಿಸಲಾಗಿತ್ತು. ಈಗ ಆ ನೀರು ಮತ್ತೆ ಕಲುಷಿತವಾಗಿದೆ.
"ಶಾಂತಿನಗರ" ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆ
ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ. ಕೊಳೆಗೇರಿಯ ನಿವಾಸಿಗಳು ಕುಸಿದುಬಿದ್ದ ಸೇತುವೆಯನ್ನು ಬಳಸಲಾಗದೆ ತಮ್ಮ ಪ್ರದೇಶದೊಳಗೆ ಅಕ್ಷರಶಃ ಬಂಧಿಯಾಗಿದ್ದಾರೆ. ಸುಮಾರು 4 ಸಾವಿರ ಮಂದಿ ಈ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದಾರೆ. ಸೇತುವೆ ಮುರಿದುಬಿದ್ದ ಕಾರಣಕ್ಕೆ ಅವರು ಅಲ್ಲಿಯೇ ಇರುವಂತಿಲ್ಲ. ತಮ್ಮ ದೈನಂದಿನ ಚಟುವಟಿಕೆಗಳಿಗೆ ಹೊರ ಬರಲೇಬೇಕು. ಅದಕ್ಕಾಗಿ ತಾವೇ ಸೇತುವೆಗೆ ಮರದ ಹಲಗೆಗಳನ್ನು ಜೋಡಿಸಿ ಓಡಾಟಕ್ಕೆ ಅನುವು ಮಾಡಿಕೊಂಡಿದ್ದಾರೆ. ಆದರೆ ಸೇತುವೆಯ ರಚನೆ ಸಂಪೂರ್ಣ ಕುಸಿದಿರುವುದರಿಂದ ಅವರ ಸಾಹಸ ಬಲು ಅಪಾಯಕಾರಿ.
ಶಾಂತಿನಗರ ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕ ಎನ್.ಎ. ಹ್ಯಾರಿಸ್ ಮತ್ತು ಅವರ ಅಪಾರ ಪ್ರಮಾಣದ ಬೆಂಬಲಿಗರು ಚುನಾವಣಾ ಪ್ರಚಾರಕ್ಕಾಗಿ ಕೊಳೆಗೇರಿಗೆ ಬಂದಾಗ ಈ ಘಟನೆ ಸಂಭವಿಸಿದೆ. ಇಸ್ರೊ ಕಾಲೊನಿಯ ಕೊಳೆಗೇರಿ ಪ್ರತಿಷ್ಠಿತ ಶಾಂತಿನಗರ ಕ್ಷೇತ್ರದ ಒಂದು ಭಾಗ. ಇದು ಐಟಿ ಹಬ್ಅನ್ನು ಒಳಗೊಂಡಿರುವ 28 ಕ್ಷೇತ್ರಗಳಲ್ಲಿ ಒಂದು.
ಕ್ಷೇತ್ರ ಪರಿಚಯ: ಶಾಂತಿನಗರದಲ್ಲಿ ಬದಲಾವಣೆ ಸಾಧ್ಯವೇ?
ಘಟನೆಯಲ್ಲಿ ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರಿಸ್ ಅವರಿಗೂ ಗಾಯಗಳಾಗಿವೆ. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ಮೂಲಗಳು ಒನ್ ಇಂಡಿಯಾಕ್ಕೆ ತಿಳಿಸಿವೆ. ಶಾಂತಿನಗರ ಕ್ಷೇತ್ರದಿಂದ ಎರಡು ಬಾರಿ ಗೆದ್ದಿರುವ ಹ್ಯಾರಿಸ್, ಚುನಾವಣೆಯಲ್ಲಿ ಮತ್ತೊಮ್ಮೆ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ.
ನಗರದ ಹೃದಯಭಾಗದಲ್ಲಿರುವ ಕೊಳೆಗೇರಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಇತ್ತೀಚೆಗಷ್ಟೇ ಬೆಳಕು ಚೆಲ್ಲುವ ವರದಿಯನ್ನು ಒನ್ ಇಂಡಿಯಾ ಪ್ರಕಟಿಸಿತ್ತು. ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಂಕಿಅಂಶಗಳ ಪ್ರಕಾರ ಬೆಂಗಳೂರು ನಗರದಲ್ಲಿ ಸುಮಾರು 600 ಕೊಳೆಗೇರಿಗಳಿವೆ. 1.4 ಮಿಲಿಯನ್ಗೂ ಹೆಚ್ಚು ಜನ ಬೆಂಗಳೂರು ಕೊಳೆಗೇರಿಗಳಲ್ಲಿ ವಾಸಿಸುತ್ತಿದ್ದಾರೆ. ತನ್ನ ಯಾತನಾಮಯ ಸ್ಥಿತಿಯ ಕಾರಣ ಇಸ್ರೊ ಕಾಲೊನಿಯ ಕೊಳೆಗೇರಿ ಬೆಂಗಳೂರಿನ ಅತ್ಯಂತ ಕೆಟ್ಟ ಕೊಳೆಗೇರಿಗಳಲ್ಲಿ ಒಂದು ಎಂದು ಎನಿಸಿಕೊಂಡಿದೆ.
ಈ ಸೇತುವೆ ಕುಸಿದಿದ್ದು ದೈವ ಪ್ರೇರಣೆಯಿಂದಲೇ ಎನ್ನುತ್ತಾರೆ ಕೊಳೆಗೇರಿಯ ನಿವಾಸಿಯೊಬ್ಬರು.
ಹಲವು ನೋವಿನ ನಡುವೆ ಗೆಲ್ಲುವ ವಿಶ್ವಾಸದಲ್ಲಿದ್ದೇನೆ: ಶಾಸಕ ಹ್ಯಾರಿಸ್ ಸಂದರ್ಶನ
'ಸೇತುವೆ ಕುಸಿದಿರುವುದರಿಂದ ನಾವು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವೆ. ಮಕ್ಕಳು ಮತ್ತು ಮಹಿಳೆಯರು ಮನೆಯಿಂದ ಹೊರಬರಲಾರದ ಸ್ಥಿತಿಯಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ನಾವು ಗಂಡಸರು ಹೇಗೋ ನಿಭಾಯಿಸಿ ಓಡಾಡುತ್ತಿದ್ದೇವೆ. ಹೊಸ ಸೇತುವೆಯನ್ನು ಯಾವಾಗ ಕಟ್ಟುತ್ತಾರೋ ನಮಗೆ ತಿಳಿದಿಲ್ಲ.
ಆದರೆ ವ್ಯಂಗ್ಯ ನೋಡಿ. ಇಷ್ಟು ವರ್ಷ ನಮಗಾಗಿ ಏನನ್ನೂ ಮಾಡದ ಶಾಸಕ ಹ್ಯಾರಿಸ್, ನಮ್ಮಿಂದ ಮತ್ತೆ ಮತ ಕೇಳಲು ಬಂದಾಗಲೇ ಸೇತುವೆ ಕುಸಿದು ಹೋಗಿದೆ. ಅವರಿಗೆ ಈಗಲಾದರೂ ನಮ್ಮ ಸಮಸ್ಯೆಗಳು ಅರ್ಥವಾಗಬಹುದು ಎಂದು ಭಾವಿಸುತ್ತೇನೆ' ಎಂದು ತಮ್ಮ ಹೆಸರು ಬಹಿರಂಗಪಡಿಸಿಕೊಳ್ಳಲು ಬಯಸದ 60 ವರ್ಷದ ಕೊಳೆಗೇರಿ ನಿವಾಸಿಯೊಬ್ಬರು 'ಒನ್ ಇಂಡಿಯಾ'ಕ್ಕೆ ತಿಳಿಸಿದರು.
ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಶನಿವಾರ (ಮೇ 12) ಚುನಾವಣೆ ನಡೆಯಲಿದೆ. ಫಲಿತಾಂಶ ಮೇ 15ರಂದು ಹೊರಬೀಳಲಿದೆ.