ವಿಧಾನಸಭೆ ಚುನಾವಣೆ: ಬಿಜೆಪಿಯ '150 ಪ್ಲಸ್' ಕನಸಿಗೆ ಕತ್ತರಿ?
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ 150 ಪ್ಲಸ್ ಕನಸು ಅನುಮಾನ. ಹೀಗೆಂದು ರಾಜ್ಯ ಬಿಜೆಪಿ ವಲಯದಲ್ಲಿ ಹೊಸ ಗುಸುಗುಸು ಶುರು.
Recommended Video
ಬೆಂಗಳೂರು, ಸೆಪ್ಟೆಂಬರ್ 18: ಮುಂಬರುವ ವಿಧಾನಸಭೆ ಚುನಾವಣೆಗಾಗಿ ರಾಜ್ಯದ ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಗಳು ಈಗಾಗಲೇ ಕಸರತ್ತು ಆರಂಭಿಸಿವೆ.
ಅದರಲ್ಲೂ ಪ್ರಮುಖ ಪ್ರತಿಪಕ್ಷವಾದ ಬಿಜೆಪಿಯು ಈ ಬಾರಿ ವಿಧಾನಸಭೆ ಚುನಾಣೆಯಲ್ಲಿ 150ಕ್ಕೂ ಅಧಿಕ (150 ಪ್ಲಸ್) ಸೀಟುಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ನಿಂದ ಅಧಿಕಾರ ಕಸಿಯುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.
ಪಕ್ಷದ ರಾಜ್ಯ ನಾಯಕರೂ 150 ಪ್ಲಸ್ ಕನಸಿಗೆ ರೆಕ್ಕೆ ಪುಕ್ಕ ಜೋಡಿಸುತ್ತಿದ್ದರೆ, ಅದ್ದ ಹೈಕಮಾಂಡ್ ಕೂಡ ರಾಜ್ಯದ ನಾಯಕರಲ್ಲಿ, ಕಾರ್ಯಕರ್ತರಲ್ಲಿ 150 ಪ್ಲಸ್ ಕನಸು ನನಸಾಗಲೇಬೇಕೆಂದು ಪದೇ ಪದೇ ತಾಕೀತು ಮಾಡುತ್ತಲೇ ಇದೆ.
ಆದರೆ, ಇದೆಲ್ಲದರ ಜತೆಗೆ, ಈ 150 ಪ್ಲಸ್ ಕನಸು ಸಾಕಾರಗೊಳ್ಳುವುದು ದುಸ್ತರ ಎಂಬ ಗುಸುಗುಸು, ಪಿಸುಪಿಸು ಎದ್ದಿದೆ. ಹೀಗಾಗಿ, 150 ಪ್ಲಸ್ ಸೀಟು ಗೆಲ್ಲುವುದು ಅಸಾಧ್ಯ. ಹಾಗಾಗಿ, 150ರ ಗುರಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ಸೀಟುಗಳನ್ನು ಗೆಲ್ಲುವ ಬಗ್ಗೆ ಆಲೋಚಿಸಿದರೆ ಒಳಿತು ಎಂದು ರಾಜ್ಯ ಬಿಜೆಪಿಯಲ್ಲಿ ಒಂದು ಚರ್ಚೆ ಆರಂಭವಾಗಿದೆ. ಇದರಿಂದಾಗಿ, 150 ಪ್ಲಸ್ ಸೀಟು ಗೆಲ್ಲುವ ಗುರಿಗೆ ಅನಧಿಕೃತವಾಗಿ ಕತ್ತರಿ ಬೀಳುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ರೆಕ್ಕೆ ಪುಕ್ಕ ಕಟ್ಟಿ ಹೋದ ಹೈಕಮಾಂಡ್
ಪಕ್ಷದ ನಾಯಕರಂತೂ ಹೈಕಮಾಂಡ್ ಮಾತಿಗೆ 'ಹುಂ' ತಲೆ ಅಲ್ಲಾಡಿಸಿದ್ದಾಗಿದೆ. ಇತ್ತೀಚೆಗೆ, ಎರಡು ದಿನಗಳ ಹಿಂದಷ್ಟೇ ರಾಜ್ಯಕ್ಕೆ ಬಂದಿದ್ದ ಕರ್ನಾಟಕ ಚುನಾವಣಾ ಉಸ್ತುವಾರಿ ಹೊತ್ತಿರುವ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಜತೆ ಮಾತುಕತೆ ನಡೆಸಿರುವ ರಾಜ್ಯ ಬಿಜೆಪಿ ನಾಯಕರು 150 ಪ್ಲಸ್ ಗುರಿಗೆ ಜೈ ಎಂದಿದ್ದಾರೆ. ಅತ್ತ, ಪ್ರಕಾಶ್ ಕೂಡಾ ಇದನ್ನು ಸಾಧಿಸಲೇಬೇಕು ಎಂದು ಕರೆ ಕೊಟ್ಟಿದ್ದಾರೆ. ಆದರೆ, ರಾಜ್ಯ ನಾಯಕರಿಗೇ ಇದು ಒಳಗೊಳಗೇ ಅಸಂಭವ ಎನಿಸಲಾರಂಭಿಸಿದೆಯಂತೆ.
ಬಿಜೆಪಿಗೆ ತಲೆನೋವು
ಉತ್ತರ ಭಾರತದಲ್ಲಿ ಇರುವ ಮೋದಿ ಅಲೆಯನ್ನು ಸರಿಯಾಗಿ ಉಪಯೋಗಿಸಿಕೊಂಡು, ಭರ್ಜರಿ ಕ್ಯಾಂಪೇನ್ ಗಳನ್ನು ಮಾಡಿ, ಪ್ರಧಾನಿ ಮೋದಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಮುಂತಾದ ಘಟಾನುಘಟಿ ನಾಯಕರನ್ನು ರಾಜ್ಯಕ್ಕೆ ಕರೆಯಿಸಿ ಬೃಹತ್ ಸಮಾವೇಶಗಳನ್ನು ನಡೆಸಲು ರಾಜ್ಯ ಬಿಜೆಪಿ ಚಿಂತನೆ ನಡೆಸಿದೆ. ಆದರೆ ಅತ್ತ, ಆಡಳಿತಾರೂಢ ಕಾಂಗ್ರೆಸ್ ಇತ್ತೀಚೆಗೆ ಗಳಿಸುತ್ತಿರುವ ಜನಪ್ರಿಯತೆ ಬಿಜೆಪಿಗೆ ತಲೆನೋವಾಗಿ ಪರಿಣಮಿಸಿದೆ.
ಕಾಂಗ್ರೆಸ್, ಜೆಡಿಎಸ್ ನಿಂದ ಪೈಪೋಟಿ
ಹಲವಾರು ಭಾಗ್ಯಗಳು ಸೇರಿದಂತೆ, ಇಂದಿರಾ ಕ್ಯಾಂಟೀನ್ ಮುಂತಾದ ಯೋಜನೆಗಳಿಂದಾಗಿ ಕಾಂಗ್ರೆಸ್ ಪಕ್ಷವು ಈಗಾಗಲೇ ಜನರ ವಿಶ್ವಾಸ ಗಳಿಸುತ್ತಿದೆ. ಚುನಾವಣೆಗಿನ್ನೂ 9 ತಿಂಗಳು ಬಾಕಿಯಿದೆ. ಆದರೂ, ಈಗ ವಿಧಾನಸಭೆ ವಿಸರ್ಜನೆಯಾಗಿ ಚುನಾವಣೆ ನಡೆದರೂ ಕಾಂಗ್ರೆಸ್ ಸ್ಪಷ್ಟ ಬಹುಮತ ಗಳಿಸುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಇದರ ಜತೆಯಲ್ಲೇ ಉತ್ತರ ಹಾಗೂ ಮಧ್ಯ ಕರ್ನಾಟಕಗಳಲ್ಲಿ ಈ ಬಾರಿ ಜೆಡಿಎಸ್ ಪಕ್ಷವು ಕೆಲವಾರು ಕ್ಷೇತ್ರಗಳನ್ನು ಗೆಲ್ಲುವ ಸಾಧ್ಯತೆಗಳಿವೆಯಾದ್ದರಿಂದ ಇದೂ ಬಿಜೆಪಿಯ 150 ಪ್ಲಸ್ ಕನಸಿಗೆ ಕೊಂಚ ತೊಂದರೆ ನೀಡಲಿದೆ ಎಂದು ಹೇಳಲಾಗಿದೆ.
ಬಿಎಸ್ ವೈ, ಈಶ್ವರಪ್ಪ ಮುನಿಸಿನಿಂದ ತೊಂದರೆ?
'150 ಪ್ಲಸ್' ಕನಸು ಈಡೇರುವ ಬಗ್ಗೆ ಅನುಮಾನವಿರುವ ಕೆಲ ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಬೊಟ್ಟು ಮಾಡಿ ತೋರಿಸುತ್ತಿರುವ ಬಿಎಸ್ ವೈ ಹಾಗೂ ಈಶ್ವರಪ್ಪ ನಡುವಿನ ಮುಸುಕಿನ ಗುದ್ದಾಟವನ್ನು. ಈ ಇಬ್ಬರು ಮೇರು ನಾಯಕರ ನಡುವಿನ ಭಿನ್ನಾಭಿಪ್ರಾಯಗಳು, ಒಳಜಗಳಗಳು ಜನರಿಗೆ ಗೊತ್ತಿರುವುದರಿಂದಾಗಿ ಇದೂ 150 ಪ್ಲಸ್ ಸೀಟುಗಳ ಕನಸು ಈಡೇರಿಕೆಗೆ ತೊಂದರೆ ಕೊಡಲಿದೆ ಎಂಬುದು ಹಲವಾರು ನಾಯಕರ ಅಭಿಪ್ರಾಯವಾಗಿದೆ.