ಮಹಾದಾಯಿ ಗೆಜೆಟ್ ನೋಟಿಪಿಕೇಶನ್; ಬಿಜೆಪಿ ವಿರುದ್ಧ ಆಪ್ ಅಸಮಧಾನ
ಬೆಂಗಳೂರು, ಫೆಬ್ರವರಿ 29; 'ಕೇಂದ್ರ ಸರ್ಕಾರ ಮಹಾದಾಯಿ ಗೆಜೆಟ್ ನೋಟಿಪಿಕೇಶನ್ ಹೊರಡಿಸಿರುವುದರಲ್ಲಿ ರಾಜಕೀಯ ಬೇಳೆಬೇಯಿಸಿಕೊಳ್ಳುತ್ತಿರುವ ಬಿಜೆಪಿ, ಸುಪ್ರೀಂನ ತೀರ್ಪನ್ನೂ ತಮ್ಮ ಸಾಧನೆಯೆಂಬಂತೆ ಬಿಂಬಿಸಿಕೊಳ್ಳುತ್ತಿರುವುದು ಬಿಜೆಪಿಯ ಸಮಯಸಾಧಕತನ' ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷ ಖಂಡಿಸಿದೆ.
ಈ ಕುರಿತು ಮಾತನಾಡಿರುವ ಕರ್ನಾಟಕ ಆಮ್ ಆದ್ಮಿ ಪಕ್ಷದ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಅವರು, ಎಲ್ಲಾ ಪ್ರಯತ್ನದ ಶ್ರೇಯಸ್ಸನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ನರೇಂದ್ರ ಮೋದಿ ಹಾಗೂ ಅಮಿತ್ ಶಾ ರವರು ಈ ಸಮಸ್ಯೆಯನ್ನು ಮನಗಂಡು ಅಧಿಸೂಚನೆ ಹೊರಡಿಸಲಾಗಿದೆಯೆಂದು ರಾಜ್ಯದ ಜನತೆಗೆ ತಪ್ಪು-ತಪ್ಪಾಗಿ ಸಂದೇಶ ನೀಡುತ್ತಿರುವುದು ನಿಜಕ್ಕೂ ಸೋಜಿಗವೆನಿಸುತ್ತಿದೆ ಎಂದು ಖಂಡಿಸಿದ್ದಾರೆ.
ದೆಹಲಿ ಚುನಾವಣೆ; ಕರ್ನಾಟಕ ಆಪ್ ಕಾರ್ಯಕರ್ತರ ಸಂಭ್ರಮಾಚರಣೆ
ಕೇಂದ್ರ ಇದೀಗ ಹೊರಡಿಸಿರುವ ಈ ಅಧಿಸೂಚನೆ ಕೇವಲ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಂಡು ಕೈಗೊಂಡಿರುವ ಕ್ರಮವೇ ಹೊರತು, ಸ್ವಯಂ ಪ್ರೇರಿತವಾಗಿ ಮಾಡಿದ್ದಲ್ಲ. ಉತ್ತರ ಕರ್ನಾಟಕ ಭಾಗದ 70 ವರ್ಷಗಳ ಶಾಶ್ವತ ಕುಡಿಯುವ ನೀರಿನ ಸಮಸ್ಯೆಯನ್ನು ಕೇಂದ್ರ ಹಾಗೂ ರಾಜ್ಯವನ್ನಾಳಿದ ಎಲ್ಲಾ ಪಕ್ಷಗಳು ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಬಳಿಸಿಕೊಂಡವೇ ಹೊರತು, ಯಾರಿಗೂ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ಇವರುಗಳಿಗೆ ನೆನಪು ಮಾಡಿಕೊಡಬೇಕಿದೆ ಎಂದು ಆರೋಪಿಸಿದ್ದಾರೆ.
ರಾಷ್ಟ್ರದಲ್ಲಿ ಇದೇ ರೀತಿಯ ಅನೇಕ ಜಲವಿವಾದಗಳು ನ್ಯಾಯಾಧೀಕರಣದಲ್ಲಿ ಕೊಳೆತು ನಾರುತ್ತಿವೆ. ಈಗಲಾದರೂ ಕೇಂದ್ರ ಸರ್ಕಾರವು ಈ ಬಗ್ಗೆ ದಿಟ್ಟ ಕ್ರಮಗಳನ್ನು ಕೈಗೊಂಡು ಆಯಾ ಭಾಗಗಳ ಜನತೆಗೆ ಸಂವಿಧಾನ ಕೊಡಮಾಡಿರುವ ಮೂಲಭೂತ ಹಕ್ಕಿನ ರೀತ್ಯ ಕುಡಿಯುವ ನೀರಿನ ಸಮಸ್ಯೆಗಳನ್ನು ಶಾಶ್ವತವಾಗಿ ಬಗೆಹರಿಸಬೇಕು. ಹಾಗೂ ಯಡಿಯೂರಪ್ಪನವರ ಸರ್ಕಾರವು ಈ ಕೂಡಲೇ ಮಹದಾಯಿ ಯೋಜನೆಯನ್ನು ಕೈಗೆತ್ತಿಕೊಂಡು ಶೀಘ್ರವಾಗಿ ಯೋಜನೆಗೆ ಅಗತ್ಯವಿರುವ ಅನುದಾನವನ್ನು ಮುಂದಿನ ಬಜೆಟ್ನಲ್ಲಿ ಮೀಸಲಿಡಬೇಕೆಂದು ಆಮ್ ಆದ್ಮಿ ಪಕ್ಷವು ಆಗ್ರಹಿಸುತ್ತದೆ ಎಂದಿದ್ದಾರೆ.