ಶಾಸಕರಿಂದ ವಲಸೆ ಕಾರ್ಮಿಕರ ಆಹಾರ ಪೊಟ್ಟಣಗಳ ದುರ್ಬಳಕೆ: ಆರೋಪ
ಬೆಂಗಳೂರು, ಮೇ 23: ''ಬೆಂಗಳೂರಿನ ಶಾಸಕರುಗಳು, ಬಿಬಿಎಂಪಿ ಸದಸ್ಯರು, ಕಾರ್ಮಿಕ ಇಲಾಖೆಯಿಂದ ವಲಸೆ ಕಾರ್ಮಿಕರಿಗೆ ವರ್ಗಕ್ಕೆ ಮೀಸಲಾಗಿ ಇಟ್ಟಂತಹ ಆಹಾರ ಸಾಮಾಗ್ರಿಗಳ ಕಿಟ್ಗಳನ್ನು, ಆಹಾರ ಪೊಟ್ಟಣಗಳನ್ನು ಹಾಗೂ ಇನ್ನಿತರ ಸೌಲಭ್ಯಗಳನ್ನು ನೇರವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ'' ಎಂದು ಕರ್ನಾಟಕ ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಆಮ್ ಆದ್ಮಿ ಪಕ್ಷ, ''ಮುಂಬರುವ ಬಿಬಿಎಂಪಿ ಚುನಾವಣೆಗಳ ದೃಷ್ಟಿ ಇಟ್ಟುಕೊಂಡು ತಮ್ಮ, ತಮ್ಮ ಕ್ಷೇತ್ರಗಳ ಮತದಾರರು, ಬೆಂಬಲಿಗರು, ಪುಡಾರಿಗಳ ಮನೆಗೆ ಹಂಚಿಕೆ ಮಾಡುವ ಮೂಲಕ ಹಸಿದ ಹೊಟ್ಟೆಗಳನ್ನು ಉಪವಾಸ ಕೆಡವಿದ್ದಾರೆ. ಇವೆಲ್ಲವನ್ನೂ ಕಂಡೂ ಕಾಣದಂತೆ ಮೌನವಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶಾಸಕರ ಲಾಭಿಗೆ ಅದರಲ್ಲೂ ಬೆಂಗಳೂರಿನ ಬಿಜೆಪಿ ಶಾಸಕರ ಹಾಗೂ ಮಂತ್ರಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವುದು ನೋಡಿದರೆ ಇಲ್ಲಿ ಯಾರ ಮೇಲೂ ಯಾರೂ ನಿಯಂತ್ರಣ ಹೊಂದಿಲ್ಲದ ಹುಚ್ಚನ ಮದುವೆಯಲ್ಲಿ ಉಂಡವನೇ ಜಾಣ ಎನ್ನುವಂತಾಗಿದೆ'' ಎಂದು ಆರೋಪಿಸಿದೆ.
ಶಿಕ್ಷಣ: 2014ರಲ್ಲಿ ಎಬೋಲಾ ಕೆಲಸವನ್ನೇ 2020ರಲ್ಲಿ ಕೊರೊನಾ ಮಾಡುತ್ತಾ?
''ಕಾರ್ಮಿಕರ ಪರವಾಗಿ ತಕ್ಕಮಟ್ಟಿಗೆ ಕೆಲಸ ಮಾಡುತ್ತಿದ್ದ ಅಧಿಕಾರಿ ಪಿ.ಮಣಿವಣ್ಣನ್ ಅವರನ್ನು ಕೊಳ್ಳೆ ಹೊಡೆಯಲು ಸಚಿವರು, ಶಾಸಕರಿಗೆ ಆಸ್ಪದ ನೀಡಲಿಲ್ಲ ಎನ್ನುವ ಕಾರಣಕ್ಕೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ವರ್ಗಾವಣೆಗೊಳಿಸಿತು'' ಎಂದು ಆರೋಪಿಸಲಾಗಿದೆ.
''ಕಾರ್ಮಿಕ ಸಚಿವ, ಅನನುಭವಿ ಶಿವರಾಂ ಹೆಬ್ಬಾರ್ ಅವರಿಗೆ ಅತ್ಯಂತ ಜವಾಬ್ದಾರಿಯುತ ಇಲಾಖೆಯ ಹೊಣೆ ನೀಡಿದಾಗಿನಿಂದಲೂ ಹೊಣೆಗೇಡಿ ಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಇದುವರೆಗೂ ಒಂದೂ ಬಾರಿಯೂ ಕಾರ್ಮಿಕರ ಗೋಳನ್ನು ಕೇಳುವ ವ್ಯವಧಾನವೂ ಇಲ್ಲದೆ ವರ್ತಿಸುತ್ತಿರುವ ಇವರ ನಡೆ ತೀರಾ ಖಂಡನೀಯ'' ಎಂದು ಆರೋಪಿಸಿದ್ದಾರೆ.
''ಪದೇ ಪದೇ ಆಹಾರದ ಕಿಟ್ಗಳನ್ನು ಶಾಸಕರ ಮನೆಗಳಿಗೆ, ಕಚೇರಿಗಳಿಗೆ ತಲುಪಿಸುವಂತಹ ವ್ಯವಸ್ಥೆಯನ್ನು ಮಾಡಿದ ಇಲಾಖೆಯ ಭ್ರಷ್ಟ ಅಧಿಕಾರಿಗಳನ್ನ ಈ ಕೂಡಲೇ ವಜಾ ಮಾಡಬೇಕು. ಇಂತಹ ಕೆಟ್ಟ ರಾಜಕಾರಣವನ್ನು ಮಾಡುವ ಬದಲು ಸಂತ್ರಸ್ತರಿಗೆ ಪರಿಹಾರವನ್ನು ತಲುಪಿಸುವ ನಿಟ್ಟಿನಲ್ಲಿ ಸರ್ಕಾರ ಇನ್ನಾದರೂ ಕೆಲಸ ಮಾಡಲಿ'' ಎಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.



Click it and Unblock the Notifications























