ಫೆ 18 ಕ್ಕೆ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ 'ಆಮ್ ಆದ್ಮಿ' ಕಹಳೆ
ಬೆಂಗಳೂರು, ಫೆಬ್ರವರಿ 14: ಕೇಂದ್ರ ಸರ್ಕಾರ ಬಡ ಮತ್ತು ಮಧ್ಯಮ ವರ್ಗದವರ ಹಿತ ಕಾಪಾಡಲು ವಿಫಲವಾಗಿದೆ ಎಂದು ಆರೋಪಿಸಿ ಕರ್ನಾಟಕ ಆಮ್ ಆದ್ಮಿ ಪಕ್ಷ ಫೆ 18 ರಂದು ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಪಕ್ಷವು, ''ಕಳೆದ ಮೂರು-ನಾಲ್ಕು ತಿಂಗಳಲ್ಲಿ ಏರಿಕೆಯಾಗಿರುವ ಈರುಳ್ಳಿ ಬೆಲೆಯನ್ನು ಸುಧಾರಿಸಲಾಗದ ಕೇಂದ್ರ ಸರ್ಕಾರ ಆರ್ಥಿಕ ಸಮತೋಲನ ಕಾಯ್ದುಕೊಳ್ಳು ವುದರಲ್ಲಿ ವಿಫಲಾವಾಗಿದೆ. ಬೆಲೆ ಏರಿಕೆ ಸಂಬಂದ ಬೇಜವಬ್ದಾರಿ ಹೇಳಿಕೆ ಕೊಟ್ಟಿದ್ದರು. ಇಂತಹ ಹೇಳಿಕೆಗಳು ಬಿಜೆಪಿ ಸಂಸದರಿಂದ ಸಾರಾಸಗಟಾಗಿ ಬರುತ್ತಿರುವುದು ಬಿಜೆಪಿ ನೇತೃತ್ವದ ಸರ್ಕಾರದ ವಿಫಲತೆಯನ್ನು ತೋರಿಸುತ್ತದೆ'' ಎಂದು ಆರೋಪಿಸಲಾಗಿದೆ.
''ರಾಜ್ಯ ಸರ್ಕಾರವು ಹಾಲಿನ ಬೆಲೆ ಹೆಚ್ಚಳ ಮಾಡಿ ಜನರ ಬೇಬಿಗೆ ಕತ್ತರಿ ಹಾಕುತ್ತಿದ್ದರೆ, ಇದೇ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಪ್ರಯಾಣ ದರವನ್ನು ಹೆಚ್ಚಿಸುವುದಾಗಿ ರಾಜ್ಯ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಎಲ್ಪಿಜಿ ಬೆಲೆ ಹೆಚ್ಚಿಸಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತೆ ಮಾಡುತ್ತಿದೆ. ತರಕಾರಿ, ದಿನಸಿ ಸಾಮಗ್ರಿಗಳ ಬೆಲೆಗಳು ಗಗನಕ್ಕೇರುತ್ತಿವೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೈ ಕಟ್ಟಿ ಕುಳಿತಿವೆ'' ಎಂದು ಆರೋಪಿಸಲಾಗಿದೆ.
''ಇಷ್ಟೆಲ್ಲಾ ಸಮಸ್ಯೆಗಳು ಜನರ ಬದುಕನ್ನು ಅಸ್ಥವ್ಯಸ್ತ ಗೊಳಿಸುವಂತಹ ಪರಿಸ್ಥಿತಿ ದೇಶದಲ್ಲಿದ್ದರೂ, ಜನಸಾಮಾನ್ಯರ ಕಿಸೆಗೆ ಕನ್ನ ಹಾಕುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿವೆ. ದಿನ ಬಳಕೆ ಸಾಮಗ್ರಿಗಳ ಮೇಲಿನ ಬೆಲೆ ಏರಿಕೆ ಮತ್ತು ಸರ್ಕಾರಗಳ ವೈಫಲ್ಯವನ್ನು ವಿರೋಧಿಸಿ ಪ್ರತಿಭಟನೆಗೆ ಕರೆ ನೀಡುತ್ತಿದ್ದೇವೆ'' ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.