ಶಾಂತಿಗೆ ಭಂಗ ತರುತ್ತಿರುವ ಬಿಜೆಪಿ ಮುಖಂಡರು: ಕರ್ನಾಟಕ ಆಪ್ ಗಂಭೀರ ಆರೋಪ
ಬೆಂಗಳೂರು, ಏಪ್ರಿಲ್ 7: ಕೊರೊನಾ ಹಿನ್ನೆಲೆಯಲ್ಲಿ ಸಮುದಾಯದ ಶಾಂತಿಗೆ ಭಂಗ ತರುವ ರೀತಿ ಹೇಳಿಕೆ ನೀಡಿರುವ ಶಾಸಕ ರೇಣುಕಾಚಾರ್ಯ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ತೀವ್ರ ಖಂಡನೀಯ ಎಂದು ಆಮ್ ಆದ್ಮಿ ಪಕ್ಷದ ಕರ್ನಾಟಕ ಘಟಕ ಹೇಳಿದೆ.
ಈ ಕುರಿತು ಪ್ರಕಟಣೆ ನೀಡಿರುವ ಆಪ್, ವಿದೇಶಗಳಿಂದ ಬಂದಂತಹ ಸೋಂಕಿತರನ್ನು ಕ್ವಾರಂಟೈನ್ ಗೆ ಒಳಪಡಿಸುವ ಬದಲು ಸರ್ಕಾರಗಳು ಅವರುಗಳನ್ನು ವಿಶೇಷ ವಿಮಾನಗಳಲ್ಲಿ ಭಾರತಕ್ಕೆ ಬರಮಾಡಿಕೊಂಡು ಜೀವಂತ ವೈರಸ್ ಗಳನ್ನು ಸಮುದಾಯದಲ್ಲಿ ಸುತ್ತುವಂತೆ ಮಾಡಿರುವುದು ಸರ್ಕಾರದ ವೈಫಲ್ಯ. ಇದರ ಪ್ರತಿಫಲವಾಗಿ ಕೆಲವು ಸೋಂಕಿತರು ಅಲ್ಲಲ್ಲಿ ಸಮುದಾಯದಲ್ಲಿ ಓಡಾಡುತ್ತಿರುವುದು ಕಂಡು ಬರುತ್ತಿದೆ. ಇವರುಗಳ ಓಡಾಟವನ್ನು ಹತೋಟಿಗೆ ತರಲು ಸಾಧ್ಯವಾಗದ ಸರ್ಕಾರದ ನಡೆ ತೀರಾ ನಾಚಿಕೆಗೇಡು ಎಂದು ಖಂಡಿಸಿದೆ.
ಇದ್ಯಾವುದನ್ನು ಸರಕಾರಕ್ಕೆ ವಿಧಾನಸಭೆಯಲ್ಲಿ ನೇರವಾಗಿ ಪ್ರಶ್ನೆ ಮಾಡದ ರೇಣುಕಾಚಾರ್ಯ ಹಾಗೂ ಶೋಭಾ ಅವರಂತಹ ನಿರ್ಲಜ್ಜ ರಾಜಕಾರಣಿಗಳು ಇಂದು ಅಮಾಯಕ ಸೋಂಕಿತರನ್ನು ದೇಶದ್ರೋಹಿಗಳೆಂದು ಜರಿಯುತ್ತಿರುವುದು ತೀರಾ ಅಮಾನವೀಯ. ದೇಶ ದೇಶಗಳೇ ವಿನಾಶದ ಅಪಾಯದಲ್ಲಿ ಭೀತಿಯಿಂದ ನರಳುತ್ತಿರುವ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ತಮ್ಮ ಈ ರೀತಿಯ ಹೇಳಿಕೆಗಳಿಂದ ಸಮುದಾಯದ ಶಾಂತಿಗೆ ಭಂಗವಾಗುವ ಸಾಧ್ಯತೆಗಳು ಸಾಧ್ಯತೆಗಳು ಹೆಚ್ಚಿದೆ ಎಂದಿದ್ದಾರೆ.
ಭಾರತೀಯ ಜನತಾ ಪಕ್ಷದ ಇಂತಹ ಮತೀಯ ನಾಯಕರುಗಳನ್ನು ಯಡಿಯೂರಪ್ಪನವರು ಹತೋಟಿಗೆ ತರಲೇಬೇಕಾಗಿದೆ ಎಂದು ಒತ್ತಾಯಿಸಿದೆ. ಈ ಕೂಡಲೇ ರೇಣುಕಾಚಾರ್ಯ ಮತ್ತು ಶೋಭಾ ಕರಂದ್ಲಾಜೆಯವರು ತಮ್ಮ ಈ ಹೇಳಿಕೆಗೆ ಬಹಿರಂಗವಾಗಿ ಕ್ಷಮಾಪಣೆಯನ್ನು ದೇಶದ ಜನತೆಯ ಮುಂದೆ ಹೇಳಿಕೊಳ್ಳಬೇಕೆಂದು ಆಮ್ ಆದ್ಮಿ ಪಕ್ಷವು ಒತ್ತಾಯಿಸಿದೆ.