ಆಮ್ ಆದ್ಮಿ ಪಕ್ಷದಿಂದ 'ಅಯ್ಯೋ ನಮ್ಮಪ್ಪ, ದುಡಿಯೋದೆ ತಪ್ಪಾ?' ಜಾಥಾ
ಬೆಂಗಳೂರು,ಜನವರಿ,30: ಆಮ್ ಆದ್ಮಿ ಪಕ್ಷವು ಮೋಟಾರು ವಾಹನ ಕಾಯ್ದೆಯ 8ನೇ ನಿಯಮ ವಿರೋಧಿಸಿ 'ಅಯ್ಯೋ ನಮ್ಮಪ್ಪ, ದುಡಿಯೋದೆ ತಪ್ಪಾ?' ಎಂಬ ಜಾಥಾವನ್ನು ನಗರದ ಸಂತ ಜೋಸೆಫರ ಇಂಡಿಯನ್ ಹೈ ಸ್ಕೂಲ್ ಮೈದಾನದಲ್ಲಿ ಜನವರಿ 31ರ ಭಾನುವಾರದಂದು ಹಮ್ಮಿಕೊಂಡಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ "ಅಯ್ಯೋ ನಮ್ಮಪ್ಪ, ದುಡಿಯೋದೆ ತಪ್ಪಾ?" ಈ ಜಾಥಾದಲ್ಲಿ ಪಾಲ್ಗೊಳ್ಳಲ್ಲಿದ್ದು, ಸಂಪೂರ್ಣ ಬೆಂಬಲ ನೀಡಲಿದ್ದಾರೆ. ಜೊತೆಗೆ ನಗರದ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆ ಒಕ್ಕೂಟ ಕೂಡ ಕೈಜೋಡಿಸಿದೆ.
ಆಮ್ ಆದ್ಮಿ ಪಕ್ಷವೂ ಮೋಟಾರು ವಾಹನ ಕಾಯ್ದೆಯ 8ನೇ ನಿಯಮವನ್ನು ತಗೆದುಹಾಕುವಂತೆ ಸರ್ಕಾರಕ್ಕೆ ಕಳೆದ ವರ್ಷದ ನವೆಂಬರ್ 9ರಂದು ಒತ್ತಾಯಿಸಿತ್ತು. ಆದರೆ ಇವರ ಮನವಿಗೆ ಮಣಿಯದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಆಮ್ ಆದ್ಮಿ ಪಕ್ಷ ಈ ಜಾಥಾಕ್ಕೆ ಮುಂದಾಗಿದೆ.
ಮೋಟಾರು ವಾಹನ ಕಾಯಿದೆಯ 8ನೇ ನಿಯಮ ಏನು?
ಪ್ಯಾಸೆಂಜರ್ ಅಥವಾ ಗೂಡ್ಸ್ ಆಟೋ, ಟ್ಯಾಕ್ಸಿ, ಬಸ್, ಲಾರಿ ಮುಂತಾದ ಹಳದಿ ಬೋರ್ಡ್ ವಾಹನಗಳನ್ನು ಚಲಾಯಿಸಲು ಬೇಕಾದ "ಹಳದಿ ಬ್ಯಾಡ್ಜ್ ಲೈಸೆನ್ಸ್" ಪಡೆಯಲು 8ನೇ ಕ್ಲಾಸ್ ಪಾಸ್ ಕಡ್ಡಾಯ ಎಂಬ ಕಾನೂನಿದೆ. ಈ ನಿಯಮದಿಂದ ಸಾಮಾನ್ಯವರ್ಗದವರು ಜೀವನ ನಡೆಸಲು ಕಷ್ಟವಾಗುತ್ತದೆ. ಹಾಗಾಗಿ ಇದನ್ನು ವಿರೋಧಿಸಿ ಈ ಜಾಥಾ ಏರ್ಪಡಿಸಿದ್ದೇವೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಸಂಚಾಲರು ಹಾಗೂ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಪೃಥ್ವಿ ರೆಡ್ಡಿ ಹೇಳಿದ್ದಾರೆ.