ರಾಜಧಾನಿಯಲ್ಲಿ ಅನ್ನದಾತರ ಪ್ರತಿಭಟನೆ: ಆಳುವ ಜನರಿಗೆ ವಿವೇಕ ಬರಲಿ: ಕರವೇ ಗೌಡ್ರ ಪೋಸ್ಟ್
ಬೆಂಗಳೂರು, ನ 30: ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತು ಸರಕಾರ ಅದನ್ನು ನಿಭಾಯಿಸುತ್ತಿರುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಬೇಸರ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ನಾರಾಯಣ ಗೌಡ್ರು ಸಾಮಾಜಿಕ ತಾಣದಲ್ಲಿ ಬರೆದಿದ್ದು ಹೀಗೆ, "ದೇಶದ ಅನ್ನದಾತ ರೈತರು ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹಸಿದ ಹೊಟ್ಟೆಗಳಿಗೆ ಅನ್ನ ನೀಡುವ ರೈತರ ಕೂಗಿಗೆ ಒಕ್ಕೂಟ ಸರ್ಕಾರ ಕಿವಿಗೊಡಬೇಕು" ಎಂದು ಗೌಡ್ರು ಆಗ್ರಹಿಸಿದ್ದಾರೆ.
ಕರ್ನಾಟಕ ಬಂದ್: ಕರವೇ ನಿಲುವು ಸ್ಪಷ್ಟ ಪಡಿಸಿದ ನಾರಾಯಣ ಗೌಡ್ರು
"ಕಾನೂನುಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕು. ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್ ಶಕ್ತಿಗಳ ಕೈಗೆ ನೀಡುವ ಅಪಾಯಕಾರಿ ಅಂಶಗಳು ಹೊಸದಾಗಿ ಜಾರಿಯಾದ ಕೃಷಿ ಕಾನೂನುಗಳಲ್ಲಿ ಇವೆ ಎಂಬುದು ರೈತರ ಆರೋಪ. ರೈತರು ಯಾರ ಅಡಿಯಾಳಾಗಿರಲು ಇಷ್ಟಪಡುವುದಿಲ್ಲ. ಕಾರ್ಪೊರೇಟ್ ಶಕ್ತಿಗಳು ತಮ್ಮನ್ನು ನಿಯಂತ್ರಿಸುವುದು ಅವರಿಗೆ ಬೇಕಾಗಿಲ್ಲ".
"ದೆಹಲಿ ಹೊರವಲಯ, ಗಡಿಗಳಲ್ಲಿ ಲಕ್ಷಾಂತರ ರೈತರು ಚಳಿಗೆ, ಕೋವಿಡ್ ಗೆ ಬೆದರದೇ ಬೀಡುಬಿಟ್ಟಿದ್ದಾರೆ. ಅವರ ಮೇಲೆ ಪೊಲೀಸರು ಜಲಫಿರಂಗಿಗಳನ್ನು ಬಳಸಿದ್ದಾರೆ. ಪೊಲೀಸರ ದೌರ್ಜನ್ಯಗಳನ್ನು ಸಹಿಸಿಯೂ ರೈತರು ಅಲ್ಲಿಂದ ಕದಲುತ್ತಿಲ್ಲ. ಒಕ್ಕೂಟ ಸರ್ಕಾರ ಕಣ್ಣುಮುಚ್ಚಿಕೊಂಡು ಕೂರಬಾರದು.
ರೈತರ ಪ್ರತಿಭಟನೆ: ತಡರಾತ್ರಿ ಅಮಿತ್ ಶಾ, ತೋಮರ್, ರಾಜನಾಥ್ ಸಿಂಗ್ ಸಭೆ
ರೈತನು ಉಳಿದರಷ್ಟೇ ದೇಶ ಉಳಿಯಲು ಸಾಧ್ಯ" ಎಂದು ನಾರಾಯಣ ಗೌಡ್ರು ಹೇಳಿದ್ದಾರೆ. "ನೆರೆ, ಬರದಂಥ ಪ್ರಕೃತಿ ವಿಕೋಪಗಳಿಂದ ರೈತ ಕಂಗೆಟ್ಟಿದ್ದಾನೆ. ಹೀಗಿರುವಾಗ ರೈತರನ್ನು ಖಾಸಗಿ ಕಂಪೆನಿಗಳ ಜೀತಕ್ಕೆ ತಳ್ಳುವ ಕಾನೂನುಗಳ ಅವಶ್ಯಕತೆಯಾದರೂ ಏನಿತ್ತು? ಎರಡು ಮೂರು ಖಾಸಗಿ ಕಂಪೆನಿಗಳಿಗಾಗಿ ಕೋಟ್ಯಂತರ ರೈತರು ನರಳುವಂತಾಗಿದೆ".
"ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಇನ್ನಷ್ಟು ತೀವ್ರಗೊಳ್ಳುವ ಮುನ್ನ ಒಕ್ಕೂಟ ಸರ್ಕಾರ ಎಚ್ಚೆತ್ತುಕೊಂಡು ಅವರ ಬೇಡಿಕೆ ಈಡೇರಿಸಬೇಕು. ಇಂಥ ಚಳವಳಿಗಳು ಕಾಡ್ಗಿಚ್ಚಿನಂತೆ ಇಡೀ ದೇಶ ಆವರಿಸಿಕೊಂಡರೆ, ಸರ್ಕಾರ ಏನೂ ಮಾಡಲು ಆಗದು. ಈ ವಿವೇಕ ಆಳುವ ಜನತೆಗೆ ಬರಲಿ" ಎಂದು ನಾರಾಯಣ ಗೌಡ್ರು, ಸಾಮಾಜಿಕ ತಾಣದ ಮೂಲಕ ಒತ್ತಾಯಿಸಿದ್ದಾರೆ.