ಮೆಟ್ರೋ ಆಯ್ತು, ಈಗ ಬ್ಯಾಂಕುಗಳ ಫಲಕಗಳಿಂದ ಹಿಂದಿ ತೆರವಿಗೆ ಪ್ರತಿಭಟನೆ
ಬ್ಯಾಂಕುಗಳ ಫಲಕಗಳಲ್ಲಿನ ಹಿಂದಿ ಮಾಹಿತಿ ತೆಗೆಯುವಂತೆ ಕರವೇ ಆಗ್ರಹ. ಎಸ್ ಬಿಐ ಬ್ಯಾಂಕ್ ನ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು.
ಬೆಂಗಳೂರು, ಆಗಸ್ಟ್ 9: ಇತ್ತೀಚೆಗೆ, ನಮ್ಮ ಮೆಟ್ರೋ ರೈಲು ನಿಗಮದ ಫಲಕಗಳಿಂದ ಹಿಂದಿ ಬರಹಗಳನ್ನು ತೆರವುಗೊಳಿಸುವ ಅಭಿಯಾನದಲ್ಲಿ ಯಶಸ್ಸು ಪಡೆದ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಹಾಗೂ ಇನ್ನಿತರ ಸಂಘಟನೆಗಳು, ಇದೀಗ ರಾಷ್ಟ್ರೀಕೃತ ಬ್ಯಾಂಕುಗಳ ಫಲಕಗಳಲ್ಲಿರುವ ಹಿಂದಿ ಭಾಷೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿವೆ.
ಕನ್ನಡಿಗರ ಹೋರಾಟ, ಮೆಟ್ರೋದ ಹಿಂದಿ ಫಲಕ ತೆರವು
ಈ ಹಿನ್ನೆಲೆಯಲ್ಲಿ, ನಗರದ ಎಸ್ ಬಿಐ ಕೇಂದ್ರ ಕಚೇರಿಯ ಮುಂದೆ ಬುಧವಾರ (ಆಗಸ್ಟ್ 9) ಮಧ್ಯಾಹ್ನ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಅಲ್ಲದೆ, ಎಲ್ಲಾ ಬ್ಯಾಂಕುಗಳೂ ತಮ್ಮ ಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನೇ ಬಳಸಬೇಕೆಂದೂ ಆಗ್ರಹಿಸಿದರು. ಈ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.
ಮೆಟ್ರೋದಲ್ಲಿ ಹಿಂದಿ ಬಳಸಲು ಸಾಧ್ಯವಿಲ್ಲ - ಕೇಂದ್ರಕ್ಕೆ ಸಿಎಂ ಪತ್ರ
ಇತ್ತೀಚೆಗೆ, ನಮ್ಮ ಮೆಟ್ರೋ ರೈಲು ನಿಗಮಕ್ಕೆ ಸಂಬಂಧಿಸಿದ ಎಲ್ಲಾ ನಿಲ್ದಾಣಗಳು, ಕಚೇರಿಗಳಲ್ಲಿ ಹಾಕಲಾಗಿರುವ ಫಲಕಗಳಿಂದ ಹಿಂದಿ ಭಾಷೆಯ ಮಾಹಿತಿಯನ್ನು ಸಂಪೂರ್ಣವಾಗಿ ತೆಗೆದುಹಾಕಬೇಕೆಂದು ಪ್ರತಿಭಟನೆ ನಡೆಸಲಾಗಿತ್ತು.
Bengaluru: Karnataka Rakshana Vedike protest in front of SBI Bank branch demanding removal of Hindi signage and compulsory use of Kannada pic.twitter.com/oXMUzFNm3d
— ANI (@ANI) August 9, 2017
ಇದು ದೇಶಾದ್ಯಂತ ಸುದ್ದಿಯಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಹಿಂದಿಯನ್ನು ಹೇರುವುದು ಸಾಧ್ಯವಿಲ್ಲ ಎಂದಿದ್ದರು. ಹಾಗಾಗಿ, ಆ ಫಲಕಗಳಿಂದ ಹಿಂದಿ ಬರಹಗಳನ್ನು ತೆಗೆಯಲಾಗಿತ್ತು.